ನೆರೆ ಎಫೆಕ್ಟ್ : ದಿನಸಿ-ತರಕಾರಿ ದುಬಾರಿ
| ಕೆಲವೆಡೆ ದಾಸ್ತಾನು ಕೊರತೆ | ಮುಂದೇನು ಎಂಬ ಚಿಂತೆಯಲ್ಲಿ ವ್ಯಾಪಾರಸ್ಥರು-ಗ್ರಾಹಕರು | ಹೂವು-ಹಣ್ಣಿನ ಬೆಲೆಯಲ್ಲಿಯೂ ಭಾರಿ ಏರಿಕೆ
Team Udayavani, Aug 10, 2019, 9:45 AM IST
ಹುಬ್ಬಳ್ಳಿ: ನಿರಾಶ್ರಿತರಿಗೆ ತಲುಪಿಸಲು ಸಂಗ್ರಹಿಸಲಾದ ಪರಿಹಾರ ಸಾಮಗ್ರಿಗಳು.
ಹುಬ್ಬಳ್ಳಿ: ಜಿಲ್ಲೆ ಹಾಗೂ ಹೊರ ರಾಜ್ಯಗಳಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಕಿರಾಣಿ ಸೇರಿದಂತೆ ನಿತ್ಯೋಪಯೋಗಿ ವಸ್ತುಗಳ ದರದಲ್ಲಿ ದಿಢೀರ್ ಏರಿಕೆ ಕಂಡಿದೆ.
ಸತತವಾಗಿ ಸುರಿಯುತ್ತಿರುವ ಮಳೆಯಿಂದ ಹೊರ ಪ್ರದೇಶಗಳಿಂದ ಬರುವ ವಾಹನ ವ್ಯವಸ್ಥೆ ಬಂದ್ ಆಗಿದೆ. ಇದರಿಂದ ನಗರಕ್ಕೆ ಬರಬೇಕಾಗಿದ್ದ ಮೈದಾ, ಆಟಾ, ರವಾ, ಸಕ್ಕರೆ, ಶೇಂಗಾ, ಪುಟಾಣಿ, ಬೆಲ್ಲ, ಅಕ್ಕಿ, ಬೇಳೆ ಸೇರಿದಂತೆ ಎಲ್ಲ ವಸ್ತುಗಳ ಬೆಲೆ ಏರಿಕೆ ಆಗಿದೆ.
ವಿವಿಧ ವಸ್ತುಗಳ ಬೆಲೆಯಲ್ಲಿ ಸುಮಾರು 50-100 ರೂ. ವರೆಗೆ ಏರಿಕೆ ಕಂಡಿದೆ. ಕೆಲವೊಂದು ಕಡೆ ದಾಸ್ತಾನು ಕೊರತೆ ಸಹ ಎದ್ದು ಕಾಣುತ್ತಿದೆ. ಈಗಾಗಲೇ ಮಾಡಿರುವ ದಾಸ್ತಾನು ಮಾರಾಟ ಮಾಡಲಾಗಿದ್ದು, ಮುಂದೇನು ಎನ್ನುವ ಚಿಂತೆಯಲ್ಲಿ ವ್ಯಾಪಾರಸ್ಥರಿದ್ದಾರೆ. ಗ್ರಾಹಕರಿಗೆ ವಸ್ತುಗಳ ಬೆಲೆ ಏರಿಕೆ ಬರೆ ಒಂದೆಡೆ ಆದರೆ, ವಸ್ತುಗಳು ಕಡಿಮೆ ಇರುವಿಕೆ ಸಮಸ್ಯೆ ಆಗುತ್ತಿದೆ.
ತರಕಾರಿ ಕೊರತೆ: ನಗರಕ್ಕೆ ಗ್ರಾಮೀಣ ಭಾಗದಿಂದ ಆಗಮಿಸುವ ತರಕಾರಿ ಆಗಮಿಸುತ್ತಿಲ್ಲ. ಸತತ ಮಳೆಯಿಂದ ಹೊಲಗಳಿಗೆ ಹೋಗದ ಸ್ಥಿತಿಯಿಂದ ತರಕಾರಿ ದರಗಳು ಏರಿಕೆ ಕಂಡಿವೆ. ಪ್ರತಿ ತರಕಾರಿ ಬೆಲೆ 250 ಗ್ರಾಂ ಗೆ 20 ರೂ.ಗೆ ಏರಿಕೆ ಕಂಡಿದೆ. ಹಬ್ಬದ ನಿಮಿತ್ತ ಹಾಗೂ ದಾಸ್ತಾನು ಕೊರತೆಯಿಂದ ಬಾಳೆ ಹಣ್ಣು ಬೆಲೆ ಏರಿಕೆ ಕಂಡಿದೆ. ಹೂವಿನ ದರದಲ್ಲೂ ಏರಿಕೆ ಕಂಡಿದೆ. ಪ್ರತಿ ಮಾರು ಹೂವಿಗೆ 30-40 ರೂ.ಗೆ ಏರಿಕೆ ಕಂಡಿದೆ.
ಅಕ್ಕಿ ದರದಲ್ಲೂ ಏರಿಕೆ: ಅಕ್ಕಿ ದಾಸ್ತಾನು ದೊಡ್ಡ ವ್ಯಾಪಾರಿಗಳ ಬಳಿ ಇದ್ದು ಸಣ್ಣ ವ್ಯಾಪಾರಿಗಳ ಬಳಿ ದಾಸ್ತಾನು ಕೊರತೆ ಕಾಣುತ್ತಿದೆ. ಇದರಿಂದ ಬೆಲೆ ಏರಿಕೆ ಬಿಸಿ ಎಲ್ಲರಿಗೂ ತಟ್ಟಲಿದೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಪರಿಹಾರ ಸಾಮಗ್ರಿ ತಲುಪಿಸುವ ಕಾರ್ಯವನ್ನು ನೈಋತ್ಯ ರೈಲ್ವೆ ವಲಯ ಮಾಡುತ್ತಿದೆ. ಇಲಾಖೆಯ ಹಿರಿಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸ್ಕೌಟ್ಸ್-ಗೈಡ್ಸ್ ತಂಡ ನಿತ್ಯೋಪಯೋಗಿ ಪರಿಹಾರ ಸಾಮಗ್ರಿಗಳನ್ನು ಸಂಗ್ರಹಿಸಿ ಪ್ರವಾಹ ಪೀಡಿತ ಪ್ರದೇಶಗಳಿಗೆ ರವಾನಿಸುತ್ತಿದೆ.
ಹುಬ್ಬಳ್ಳಿ ವಿಭಾಗವು ಶುಕ್ರವಾರ ಅಂದಾಜು 1.10ಲಕ್ಷ ರೂ. ಮೌಲ್ಯದ ಬಟ್ಟೆ, ಆಹಾರ ಸಾಮಗ್ರಿ, ನೀರಿನ ಬಾಟಲಿಗಳನ್ನು ಸಂಗ್ರಹಿಸಿ ಗೋಕಾಕ, ರಾಯಬಾಗ ಮತ್ತು ಬೆಳಗಾವಿಯಲ್ಲಿ ಸ್ಥಾಪಿಸಲಾದ ಪರಿಹಾರ ಕೇಂದ್ರಗಳಲ್ಲಿನ ಸಂತ್ರಸ್ತರಿಗೆ ವಿತರಿಸಿದೆ.
ಮಲ್ಲಾಪುರ ಅಣೆಕಟ್ಟು ತುಂಬಿ ಹರಿಯುತ್ತಿರುವುದರಿಂದ 1500ಕ್ಕೂ ಹೆಚ್ಚು ಪ್ರಯಾಣಿಕರು ಹೊಳೆಆಲೂರ ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದರು. ಅವರು ಗದಗ ತಲುಪುವಂತೆ ಮಾಡಲು ಗೋಲಗುಂಬಜ್ ಎಕ್ಸ್ಪ್ರೆಸ್ ರೈಲಿಗೆ ತಾತ್ಕಾಲಿಕ ನಿಲುಗಡೆ ಸೌಲಭ್ಯ ಕಲ್ಪಿಸಲಾಯಿತು. ಅಲ್ಲದೆ ಸಿಲುಕಿಕೊಂಡ ಪ್ರಯಾಣಿಕರನ್ನು ಸುರಕ್ಷಿತ ಸ್ಥಳಕ್ಕೆ ತಲುಪಿಸುವ ಸಲುವಾಗಿ ಗದಗನಿಂದ ಹೊಳೆಆಲೂರ ಎರಡು ಟ್ರಿಪ್ಗ್ಳಂತೆ ಮೆಮು ಓಡಿಸಲಾಯಿತು. ಗದಗ ಶಾಖೆ ಮಾರ್ಗದ ಸಿಬ್ಬಂದಿಯು ಹೊಳೆಆಲೂರಲ್ಲಿ ಪ್ರವಾಹ ಪೀಡಿತ ಸಂತ್ರಸ್ತರಿಗೆ ವಾಹನ ವ್ಯವಸ್ಥೆಗೊಳಿಸಿದ್ದರು ಹಾಗೂ ಅವರಿಗೆ ಆಹಾರ ವಿತರಿಸಿದರು.
ಪ್ರವಾಹದ ದಿನಗಳಲ್ಲಿ ಇಲಾಖೆಯು ಮೂರು ಜನಸಾಧಾರಣ ವಿಶೇಷಗಳನ್ನು ಓಡಿಸಿದೆ. ರೈಲುಗಳ ರದ್ದು/ಬದಲಾವಣೆ ಕಾರಣದಿಂದಾಗಿ ಪ್ರಯಾಣಿಕರು ತಮ್ಮ ಸ್ಥಳಗಳಿಗೆ ಪ್ರಯಾಣಿಸಲು ಅನುಕೂಲವಾಗುವಂತೆ ಒಟ್ಟು 28 ಬಸ್ಗಳನ್ನು ವ್ಯವಸ್ಥೆ ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್
Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ
Basavaraj Bommai; ನನ್ನ ಅವಧಿಯಲ್ಲಿ ಮುಸ್ಲಿಂ ಮೀಸಲು ಅಫಿದವಿತ್ ಸಲ್ಲಿಸಿಲ್ಲ
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ