ಹಣ ಉಳಿಸಲು ಫ್ಲೈ ಓವರ್ ಬದಲಾವಣೆ ಅಲ್ಲ
ಕೊಪ್ಪಿಕರ ರಸ್ತೆ-ನೆಹರು ಮೈದಾನ ಕಡೆಯಿಂದ ಬರುವ ವಾಹನಗಳಿಗೂ ಸಂಪರ್ಕ ಕಲ್ಪಿಸಲು ಯೋಜನೆ
Team Udayavani, Jun 29, 2021, 5:27 PM IST
ಹುಬ್ಬಳ್ಳಿ: ಚಿಟಗುಪ್ಪಿ ಪಾರ್ಕ್ ಮುಂಭಾಗ ದಿಂದಲೇ ಫ್ಲೈ ಓವರ್ ನಿರ್ಮಾಣ ಮಾಡಬೇಕು ಎನ್ನುವ ಚರ್ಚೆಗೆ ಭೂ ಸ್ವಾಧೀನಕ್ಕೆ ತಗಲುವ ಪರಿಹಾರ ಹಣ ಉಳಿಸಬೇಕೆಂಬುದು ಕಾರಣವಲ್ಲ. ಕೊಪ್ಪಿಕರ್ ರಸ್ತೆ ಹಾಗೂ ನೆಹರು ಮೈದಾನ ಕಡೆಯಿಂದ ಬರುವ ವಾಹನಗಳಿಗೂ ಫ್ಲೈ ಓವರ್ ಸಂಪರ್ಕ ಕಲ್ಪಿಸಬೇಕು ಎಂಬುದಾಗಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರ, ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಹ್ಲಾದ ಜೋಶಿ ತಿಳಿಸಿದರು.
ನೈಸರ್ಗಿಕ ವಿಕೋಪದಿಂದ ಮೃತಪಟ್ಟ ಎಂಟು ಜನರ ಕುಟುಂಬದ ಸದಸ್ಯರಿಗೆ ಪ್ರಧಾನಮಂತ್ರಿಗಳ ರಾಷ್ಟ್ರೀಯ ನೈಸರ್ಗಿಕ ವಿಕೋಪ ನಿಧಿಯಡಿ ತಲಾ 2 ಲಕ್ಷ ರೂ. ಚೆಕ್ ವಿತರಿಸಿ ಅವರು ಮಾತನಾಡಿದರು. ಈ ಹಿಂದೆ ಡಾ| ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿರುವ ಎಲ್ಐಸಿ ಕಚೇರಿ ಮುಂಭಾಗದಿಂದ ಫ್ಲೈ ಓವರ್ ಆರಂಭಿಸಬೇಕು ಎನ್ನುವ ಯೋಜನೆ ರೂಪಿಸಲಾಗಿತ್ತು. ಆದರೆ ಕೊಪ್ಪಿಕರ್ ರಸ್ತೆ, ನೆಹರು ಮೈದಾನ, ಗದಗ ರಸ್ತೆ ಕಡೆಯಿಂದ ಹೆಚ್ಚಿನ ಪ್ರಮಾಣದಲ್ಲಿ ವಾಹನಗಳು ಬರುತ್ತಿವೆ. ಈ ಸಂಚಾರಕ್ಕೆ ಫ್ಲೈ ಓವರ್ ಕಲ್ಪಿಸಬೇಕು ಎನ್ನುವ ಕಾರಣಕ್ಕೆ ಈ ಚರ್ಚೆ ನಡೆದಿದೆ. ಈ ಕುರಿತು ಸೂಕ್ತ ಪರಿಶೀಲನೆ ಮಾಡುವಂತೆ ಹೇಳಿದ್ದೇನೆ. ಈ ಕುರಿತು ಯಾವುದೇ ಅಂತಿಮವಾಗಿಲ್ಲ ಎಂದರು.
ಫ್ಲೈ ಓವರ್ ನಿರ್ಮಾಣಕ್ಕೆ ಹಣಕಾಸಿನ ಸಮಸ್ಯೆಯಾಗದಂತೆ ಯೋಜನೆ ರೂಪಿಸಲಾಗಿದೆ. ಒಂದು ವೇಳೆ ಅಗತ್ಯಬಿದ್ದರೆ ಕೇಂದ್ರದಿಂದ ಕೊಡಿಸುವ ಕೆಲಸ ಮಾಡಲಾಗುವುದು. ಇದೀಗ ಚಿಟಗುಪ್ಪಿ ಪಾರ್ಕ್ ಮುಂಭಾಗದಿಂದ ಫ್ಲೆ$çಓವರ್ ಆರಂಭಿಸಬೇಕು ಎನ್ನುವ ಚರ್ಚೆಗೆ ಭೂಸ್ವಾಧೀನಕ್ಕೆ ನೀಡಬೇಕಾದ ಪರಿಹಾರ ಹಣ ಉಳಿಸುವ ಉದ್ದೇಶವಿಲ್ಲ. ಸಂಚಾರ ದಟ್ಟಣೆ ಕುರಿತು ಪೊಲೀಸ್ ಆಯುಕ್ತರು, ಜಿಲ್ಲಾಧಿಕಾರಿ, ಪಾಲಿಕೆ ಆಯುಕ್ತರು, ಬಿಆರ್ಟಿಎಸ್ ಎಂಡಿ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಚರ್ಚೆ ಮಾಡುವಂತೆ ತಿಳಿಸಿದ್ದೇನೆ.
ಭೂ ಸ್ವಾಧೀನಕ್ಕೆ ಹೆಚ್ಚಿನ ಹಣ ಬೇಕಾಗಿಲ್ಲ. ಇದಕ್ಕಾಗಿ ಒಂದಿಷ್ಟು ಹಣ ತೆಗೆದಿರಿಸಲಾಗಿದೆ. ಒಂದು ವೇಳೆ ಹಣ ಕಡಿಮೆಯಾದರೆ ಬೇರೆ ಕಡೆಯಿಂದ ಕೊಡಿಸುವುದಾಗಿ ತಿಳಿಸಿದ್ದೇನೆ. ಯೋಜನೆ ಅನುಷ್ಠಾನಗೊಳಿಸುವ ಕಾರ್ಯ ರಾಜ್ಯ ಸರಕಾರದಿಂದ ಆಗಬೇಕು. 15-20 ದಿನಗಳಲ್ಲಿ ಕಾಮಗಾರಿ ಅರಂಭವಾಗಲಿದೆ ಎನ್ನುವ ಮಾಹಿತಿಯಿದೆ ಎಂದು ಹೇಳಿದರು. ಎಸಿ ಡಾ| ಗೋಪಾಲಕೃಷ್ಣ, ತಹಶೀಲ್ದಾರ್ ಶಶಿಧರ ಮಾಡ್ಯಾಳ ಇನ್ನಿತರರಿದ್ದರು.