ಪಾಲಿಕೆ ಚುನಾವಣೆಗೆ ವೇದಿಕೆ ಸಜ್ಜು
ಆಯೋಗ ದಿನಾಂಕ ಘೋಷಣೆ ಮಾಡೋದೊಂದೇ ಬಾಕಿ, ಮೀಸಲು ಅಧಿ ಸೂಚನೆಗೆ ಆಕ್ಷೇಪ ಸಲ್ಲಿಕೆಗೆ ಅವಕಾಶ
Team Udayavani, Jun 10, 2021, 5:04 PM IST
ಹುಬ್ಬಳ್ಳಿ: ಕಳೆದ ಎರಡೂವರೆ ವರ್ಷಗಳಿಂದ ಆಡಳಿತ ಮಂಡಳಿ ಇಲ್ಲದೆಯೇ ಸಾಗುತ್ತಿರುವ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಗೆ ವೇದಿಕೆ ಸಜ್ಜುಗೊಳ್ಳುತ್ತಿದೆ.
ವಾರ್ಡ್ ಪುನರ್ ವಿಂಗಡಣೆ ಆಕ್ಷೇಪಣೆ ನಂತರವೂ ವಾರ್ಡ್ಗಳ ಪುನರ್ ವಿಂಗಡಣೆ, ವಾರ್ಡ್ ಮೀಸಲಾತಿ ಅ ಸೂಚನೆಗಳು ಹೊರ ಬಿದ್ದಿದ್ದು, ಮೀಸಲಾತಿ ನಿಗದಿಗೆ ಕೆಲವರಿಂದ ಆಕ್ಷೇಪದ ಮಾತುಗಳು ಕೇಳಿ ಬರುತ್ತಿದ್ದು, ಇದು ಬಿಟ್ಟರೆ ಚುನಾವಣೆ ಆಯೋಗ ದಿನಾಂಕ ಘೋಷಣೆ ಮಾಡಬೇಕಿದೆ.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ವಾರ್ಡ್ ಪುನರ್ ವಿಂಗಡಣೆ ಹಲವರು ಕೋರ್ಟ್ ಮೊರೆ ಹೋಗಿದ್ದರು. ಕೋರ್ಟ್ ಸೂಚನೆಯಂತೆಯೇ ವಾರ್ಡ್ಗಳ ಪುನರ್ ವಿಂಗಡಣೆ ಕೈಗೊಳ್ಳಲಾಗಿದ್ದು, ಮುಂದುವರಿದ ಭಾಗವಾಗಿ ವಾರ್ಡ್ ಮೀಸಲಾತಿ ಘೋಷಣೆ ಮಾಡಿ ಸರಕಾರ ಆದೇಶ ಹೊರಡಿತ್ತು. ಇದಕ್ಕೆ ಆಕ್ಷೇಪಕ್ಕೆ ಅವಕಾಶದ ನಂತರದಲ್ಲಿ ಇದೀಗ ಯಾವುದೇ ಬದಲಾವಣೆ ಇಲ್ಲದೆಯೇ ಮೀಸಲು ಅ ಧಿಸೂಚನೆ ಹೊರಡಿಸಲಾಗಿದೆ.
82 ವಾರ್ಡ್: ಹುಬ್ಬಳ್ಳಿ-ಧಾರವಾಡ ಮಹಾನಗರ ವ್ಯಾಪ್ತಿಯಲ್ಲಿ 67 ವಾರ್ಡ್ಗಳಿದ್ದು, ವಾರ್ಡ್ ಪುನರ್ ವಿಂಗಡಣೆ ನಂತರದಲ್ಲಿ ಇದೀಗ 82 ವಾರ್ಡ್ಗಳಾಗಿವೆ. ವಾರ್ಡ್ ಪುನರ್ ವಿಂಗಡಣೆಯ ಅಧಿ ಸೂಚನೆಯೂ ಹೊರ ಬಿದ್ದಿದೆ. ವಾರ್ಡ್ಗಳ ಮೀಸಲಾತಿ ಘೋಷಣೆಯನ್ನು ಸರಕಾರ ಮಾಡಿತ್ತಲ್ಲದೆ, ಇದಕ್ಕೆ ಆಕ್ಷೇಪ ಸಲ್ಲಿಸಲು ಏಳು ದಿನಗಳ ಅವಕಾಶ ನೀಡಲಾಗಿತ್ತು. ಕೋವಿಡ್ ಸಂಕಷ್ಟದಲ್ಲಿ ಮೀಸಲಾತಿ ಆಕ್ಷೇಪ ಕೇಳಿರುವುದು ಸರಿಯಲ್ಲ ಜತೆಗೆ ಏಳು ದಿನವೆಂದು ಅವಕಾಶ ನೀಡಿದ್ದರೂ, ಮೀಸಲು ಪಟ್ಟಿಯನ್ನು ಬಹಿರಂಗಕ್ಕೆ ವಿಳಂಬ ತೋರಲಾಗಿದ್ದು, ಆಕ್ಷೇಪಕ್ಕೆ ಇನ್ನಷ್ಟು ಕಾಲಾವಕಾಶ ನೀಡಬೇಕೆಂದು ಒತ್ತಾಯಿಸಿದ್ದರಾದರೂ ಅಂತಿಮವಾಗಿ ವಾರ್ಡ್ ಮೀಸಲಾತಿ ಅ ಧಿಸೂಚನೆ ಹೊರ ಬಿದ್ದಿದೆ.
ವಾರ್ಡ್ ಮೀಸಲಾತಿಯಲ್ಲಿ ಕೆಲವೊಂದು ಲೋಪಗಳು ಆಗಿವೆ ಎಂಬ ಆಕ್ಷೇಪ ಹಲವರದ್ದಾಗಿದೆ. ಮೀಸಲು ನಿಗದಿಯಲ್ಲಿ ಸರಕಾರ ತಾರತಮ್ಯ ತೋರಿದೆ. ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದಲ್ಲಿ ಮಹಿಳಾ ಮೀಸಲು ವಾರ್ಡ್ಗಳನ್ನು ಅಗತ್ಯಕ್ಕಿಂತ ಹೆಚ್ಚಿಗೆ ನೀಡಲಾಗಿದೆ. ಜತೆಗೆ ಒಂದು ಸಮುದಾಯಕ್ಕೆ ಅನ್ಯಾಯ ಮಾಡುವ ರೀತಿಯಲ್ಲಿ ಮೀಸಲು ನಿಗದಿ ಮಾಡಲಾಗಿದೆ ಎಂಬುದು ಕಾಂಗ್ರೆಸ್ ಆರೋಪವಾಗಿದ್ದು, ಈ ಬಗ್ಗೆ ಆಕ್ಷೇಪ ಸಲ್ಲಿಸುವುದಾಗಿ ಕಾಂಗ್ರೆಸ್ ಮುಖಂಡರ ಅನಿಸಿಕೆಯಾಗಿದೆ.
ಮೀಸಲು ಅಧಿ ಸೂಚನೆಗೆ ಆಕ್ಷೇಪ ಸಲ್ಲಿಕೆಗೆ ಅವಕಾಶ ನೀಡಲಾಗಿದ್ದು, ಯಾರು ಆಕ್ಷೇಪ ಸಲ್ಲಿಸುತ್ತಾರೋ ನೋಡಬೇಕು. ಚುನಾವಣೆ ಸಿದ್ಧತೆ: ಮಹಾನಗರ ಪಾಲಿಕೆಯ ವಾರ್ಡ್ ಪುನರ್ ವಿಂಗಡಣೆ ಹಾಗೂ ವಾರ್ಡ್ ಮೀಸಲಾತಿ ಅಧಿಸೂಚನೆ ಹೊರ ಬಿದ್ದ ಹಿನ್ನೆಲೆಯಲ್ಲಿ ಮುಂದಿನ ಹಂತ ಚುನಾವಣೆ ದಿನಾಂಕ ಘೋಷಣೆಯಾಗಿದೆ.
ಚುನಾವಣೆ ಆಯೋಗ ಚುನಾವಣೆ ನಡೆಸುವ ಕುರಿತಾಗಿ ಜಿಲ್ಲಾ ಧಿಕಾರಿಗಳ ಅಭಿಪ್ರಾಯ ಕೇಳುತ್ತದೆ. ಚುನಾವಣೆ ನಡೆಸಲು ಬೇಕಾಗುವ ತಯಾರಿ ನಡೆಸಲಾಗಿದೆ ಎಂಬುದರ ಕುರಿತಾಗಿ ಚರ್ಚೆ ನಡೆಸಿ, ಜಿಲ್ಲಾಡಳಿತ ನೀಡುವ ಅನಿಸಿಕೆಯನ್ನು ಪರಿಶೀಲಿಸಿ, ಚುನಾವಣೆಗೆ ಜಿಲ್ಲಾಡಳಿತ ಸಿದ್ಧವಿದ್ದರೆ, ರಾಜ್ಯ ಸರಕಾರಕ್ಕೆ ವಿಷಯ ತಿಳಿಸಿ, ಚುನಾವಣೆ ನಡೆಸಲು ಅಭಿಪ್ರಾಯ ಪಡೆಯುತ್ತದೆ. ಸರಕಾರದಿಂದಲೂ ಒಪ್ಪಿಗೆ ದೊರೆತರೆ ಆಗ ಆಯೋಗ ಚುನಾವಣಾ ದಿನಾಂಕ ಘೋಷಣೆ ಮಾಡುತ್ತದೆ.
ಕೋವಿಡ್ ಸಂಕಷ್ಟ ಹಿನ್ನೆಲೆಯಲ್ಲಿ ಸರಕಾರ ಮುಂದಿನ ಆರು ತಿಂಗಳು ಯಾವುದೇ ಚುನಾವಣೆಗಳನ್ನು ನಡೆಸದಿರಲು ನಿರ್ಧರಿಸಿದ್ದರಿಂದ, ನಂತರದಲ್ಲಿ ಚುನಾವಣೆಗೆ ಸಮ್ಮತಿಸಬಹುದಾಗಿದೆ. ಒಂದು ವೇಳೆ ಮೀಸಲು ವಿಚಾರದಲ್ಲಿ ಯಾರಾದರೂ ಕೋರ್ಟ್ ಮೊರೆ ಹೋದರೆ ಅದಕ್ಕೆ ಕೋರ್ಟ್ ಸಮ್ಮತಿಸಿದರೆ ಚುನಾವಣೆ ದಿನಾಂಕ ಘೋಷಣೆ ಮತ್ತಷ್ಟು ವಿಳಂಬವಾಗಲಿದೆ. ಮೀಸಲು ಪಟ್ಟಿ ಆಕ್ಷೇಪಕ್ಕೆ ಅವಕಾಶವಿಲ್ಲದೆ ಚುನಾವಣೆ ನಡೆಸಲು ಕೋರ್ಟ್ ಸೂಚಿಸಿದರೆ, ಕೋವಿಡ್ ಸಂಕಷ್ಟ ನಿವಾರಣೆ ನಂತರದಲ್ಲಿ ಸರಕಾರ ಚುನಾವಣೆಗೆ ಸಮ್ಮತಿಸಿದಲ್ಲಿ, ದಿನಾಂಕ ಘೋಷಣೆಯಾಗಿ ಪಾಲಿಕೆ ಚುನಾವಣೆ ಕಾವು ಏರಲಿದೆ.