ಕಾಡು ನಾಶವೇ ಚಿರತೆ ಪೀಡೆಗೆ ಕಾರಣ
ಹೆದ್ದಾರಿಯಾದ ಕಬ್ಬಿನ ಗದ್ದೆಗಳು | 10 ವರ್ಷಗಳಲ್ಲಿ 29 ಬಾರಿ ಪ್ರತ್ಯಕ್ಷ | ಒಮ್ಮೆ ಮಾತ್ರ ನಡೆದಿದೆ ಐಕೂಂಬಿಂಗ್
Team Udayavani, Oct 2, 2021, 10:20 PM IST
ವರದಿ: ಬಸವರಾಜ ಹೊಂಗಲ್
ಧಾರವಾಡ: ಕಡಿಮೆಯಾಗುತ್ತಿರುವ ದಟ್ಟ ನೈಸರ್ಗಿಕ ಕಾಡು, ಅಭಿವೃದ್ಧಿ ಕಾಮಗಾರಿಗಳ ಕರ್ಕಶ ಶಬ್ದ, ಎಲ್ಲೆಂದರಲ್ಲಿ ರಸ್ತೆ ಅಗಲೀಕರಣ, ಸಾಲದ್ದಕ್ಕೆ ರೈಲ್ವೆ ಮಾರ್ಗಗಳ ನಿರ್ಮಾಣ ಮತ್ತು ಹೆಚ್ಚುತ್ತಿರುವ ರೈಲು ಓಡಾಟ, ಅರಣ್ಯದಲ್ಲಿ ಆಹಾರ ಕೊರತೆ ಒಂದೇ ಎರಡೇ, ಇಂತಹ ಹತ್ತಾರು ಕಾರಣಗಳು ಚಿರತೆ ಸಂಕುಲವನ್ನು ನಲುಗಿಸಿದ್ದು, ಆಹಾರ ಅರಸಿಕೊಂಡು ಅರಣ್ಯದಿಂದ ಚಿರತೆಗಳು ನಾಡಿನತ್ತ ಧಾವಿಸುತ್ತಿವೆ.
ಹೌದು…, ಕಾಡು ಪ್ರಾಣಿಗಳ ಜೀವನ ಅಧ್ಯಯನ ಮಾಡಿರುವ ಅನೇಕ ತಜ್ಞರು ಚಿರತೆ ಕಾಡಿನಿಂದ ನಾಡಿಗೆ ಬರಲು ಇವೇ ಪ್ರಮುಖ ಕಾರಣ ಎಂದು ಪಟ್ಟಿ ಮಾಡಿದ್ದಾರೆ. ಅದರಲ್ಲೂ ಜಿಲ್ಲೆಗೆ ಅಂಟಿಕೊಂಡಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿನ ಪರಿಸರ ನಾಶವೇ ಚಿರತೆಗಳು ಮಲೆನಾಡು ಬಿಟ್ಟು ಬಯಲುಸೀಮೆಯತ್ತ ದಾಪುಗಾಲು ಹಾಕಲು ಪ್ರಮುಖ ಕಾರಣ ಎನ್ನಲಾಗಿದೆ.ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ, ಅಣಶಿ, ದಾಂಡೇಲಿ, ಮುಂಡಗೋಡ ಭಾಗದಲ್ಲಿ ಅತ್ಯಂತ ದಟ್ಟವಾದ ಕಾಡಿತ್ತು. ಕಳೆದ 50 ವರ್ಷಗಳಲ್ಲಿ ಈ ಭಾಗದಲ್ಲಿನ ಶೇ.60 ಕಾಡು ಸಂಪೂರ್ಣ ನಾಶವಾಗಿದೆ. ಕಾಡು ಪ್ರಾಣಿಗಳನ್ನೇ ಆಹಾರವಾಗಿಸಿಕೊಂಡಿರುವ ಚಿರತೆಗಳಿಗೆ ಆಹಾರವಾಗಿ ಸಿಕ್ಕುವ ಪ್ರಾಣಿಗಳ ಸಂಖ್ಯೆ ಕುಸಿತಗೊಂಡಿದ್ದರಿಂದ ಅವು ಸಹಜವಾಗಿಯೇ ನಾಡಿನತ್ತ ನುಗ್ಗುತ್ತಿವೆ.
1960ರ ದಶಕದಲ್ಲಿ ದಾಂಡೇಲಿ ಮೂಲಕ ಧಾರವಾಡ ಜಿಲ್ಲೆಯ ಗಡಿ ಹಳ್ಳಿಗಳಿಗೆ ಹುಲಿಗಳು ದಾಳಿ ಮಾಡಿದ ಉದಾಹರಣೆಗಳಿವೆ. ಆದರೆ, ಕಾಡು ನಶಿಸಿದಂತೆ ಹುಲಿ ಅಣಶಿ ಮತ್ತು ದಾಂಡೇಲಿ ಅರಣ್ಯಕ್ಕೆ ಸೀಮಿತವಾಗಿವೆ. ಆದರೆ ಚಿರತೆಗಳು ಮಾತ್ರ ಧಾರವಾಡ ಮತ್ತು ಉತ್ತರ ಕನ್ನಡ ಜಿಲ್ಲೆಯ ಗಡಿ ಹಳ್ಳಿಗಳಲ್ಲಿ ಆಗಿಂದಾಗ ಕಾಣಿಸಿಕೊಳ್ಳುತ್ತಲೇ ಇರುತ್ತವೆ. ಆದರೆ ಈ ಭಾಗದಲ್ಲಿ ಹುಲಿ ಅಥವಾ ಚಿರತೆ ಸೇರಿದಂತೆ ಕಾಡು ಪ್ರಾಣಿಗಳಿಂದ ಮನುಷ್ಯರ ಪ್ರಾಣಹಾನಿಯಾದ ಬಗ್ಗೆ ಅರಣ್ಯ ಇಲಾಖೆಯಲ್ಲಿ ಯಾವುದೇ ದಾಖಲೆಗಳು ಇಲ್ಲ.
ಧೈರ್ಯವಂತ ಪ್ರಾಣಿಯಲ್ಲ: ಪ್ರಾಣಿ ಶಾಸ್ತ್ರಜ್ಞರು ಹೇಳುವ ಪ್ರಕಾರ ಚಿರತೆಯು ಹುಲಿ, ಸಿಂಹದಂತೆ ತೀವ್ರ ಧೈರ್ಯವಂತ ಪ್ರಾಣಿಯಲ್ಲ. ಆಹಾರಕ್ಕಾಗಿ ಮಾತ್ರ ಅದು ಆಡು, ಕುರಿ, ನಾಯಿ, ಮೊಲ, ಸಾರಗ, ಜಿಂಕೆ, ಕಡವೆಗಳನ್ನು ಬೇಟೆಯಾಡುತ್ತದೆ. ಉತ್ತರ ಕನ್ನಡ ಜಿಲ್ಲೆಯ ಕಲಘಟಗಿ, ಮುಂಡಗೋಡ ಮತ್ತು ಹಳಿಯಾಳದ ಮೂಲಕ ಧಾರವಾಡ ಜಿಲ್ಲೆಯತ್ತ ಆಹಾರ ಅರಸಿಕೊಂಡೇ ಚಿರತೆ ನಾಡಿನತ್ತ ಬರುತ್ತಿವೆ. ಇಷ್ಟೊಂದು ನಿರ್ಭಯವಾಗಿ ಚಿರತೆ ಧಾರವಾಡದತ್ತ ಹೆಜ್ಜೆ ಹಾಕಲು ಕಾರಣವಾಗಿದ್ದು ಕಬ್ಬಿನ ಗದ್ದೆಗಳು. ಹತ್ತು ವರ್ಷಗಳ ಹಿಂದೆ ಬರೀ ದೇಶಿ ಭತ್ತದ ಗದ್ದೆಗಳಿರುತ್ತಿದ್ದವು. ಹೀಗಾಗಿ ಚಿರತೆಗಳು ಅರಣ್ಯದ ಗಡಿ ಹಳ್ಳಿಗಳಲ್ಲಿ ಮಾತ್ರ ಓಡಾಡಿ ಮರಳಿ ಕಾಡು ಸೇರುತ್ತಿದ್ದವು. ಇದೀಗ ಕಬ್ಬಿನ ಗದ್ದೆಗಳು ಚಿರತೆಗಳು ಆರಾಮಾಗಿ ಓಡಾಡಲು ಹೆದ್ದಾರಿಗಳಾದಂತಾಗಿವೆ. ಅದೂ ಅಲ್ಲದೇ ಜುಲೈ ನಂತರ ಮಳೆ ತೀವ್ರಗೊಂಡಾಗ ಪ್ರಾಣಿಗಳಿಗೆ ಆಹಾರ ಕೊರತೆ ಎದುರಾಗುವುದು ಸಾಮಾನ್ಯ. ಈ ವೇಳೆ ಸಹಜವಾಗಿಯೇ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡ ಕಬ್ಬಿನ ಹೊಲಗಳ ಮೂಲಕ ಅತ್ಯಂತ ಸುಗಮವಾಗಿ ಚಿರತೆಗಳು ನಾಡಿನತ್ತ ಧಾವಿಸುತ್ತಿವೆ.
ಕರಿಚಿರತೆಗಳು ಉಂಟು: ದಾಂಡೇಲಿ, ಅಣಶಿ ಹುಲಿ ಅಭಯಾರಣ್ಯವಾದರೂ ಅಲ್ಲಿಯೂ ಚಿರತೆ ಸಂಖ್ಯೆ ಗಣನೀಯವಾಗಿಯೇ ಇದೆ. ಅದರಲ್ಲೂ ಇಡೀ ಪಶ್ಚಿಮಘಟ್ಟದ ಪೈಕಿ ಕರಿ ಚಿರತೆ ಇತ್ತೀಚೆಗೆ ಹೆಚ್ಚಾಗಿ ಕಂಡು ಬರುತ್ತಿರುವುದು ದಾಂಡೇಲಿ, ಜೋಯಿಡಾ ಮತ್ತು ಅಣಶಿ ಭಾಗದಲ್ಲಿ ಮಾತ್ರ. ಅಪರೂಪದ ಮತ್ತು ಪ್ರಪಂಚದ ಅಳಿವಿನಂಚಿನ ಕರಿಚಿರತೆ ಪ್ರಾಣಿ ಪ್ರಬೇಧದ ಬಗ್ಗೆ ಅರಣ್ಯ ಇಲಾಖೆ ವಿಶೇಷ ನಿಗಾ ವಹಿಸಿ ಅವುಗಳ ಬೆಳವಣಿಗೆಗೆ ಪೂರಕ ವ್ಯವಸ್ಥೆಗಳನ್ನು ಮಾಡುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
ಚನ್ನಮ್ಮನ ಕಿತ್ತೂರು: ಮಹಾನ್ ಯೋಗಿಗಳು-ಸೂಫಿ ಸಂತರ ನಾಡಿದು- ಶಿಲೇದಾರ
Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ
ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
MUST WATCH
ಹೊಸ ಸೇರ್ಪಡೆ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
ಚನ್ನಮ್ಮನ ಕಿತ್ತೂರು: ಮಹಾನ್ ಯೋಗಿಗಳು-ಸೂಫಿ ಸಂತರ ನಾಡಿದು- ಶಿಲೇದಾರ
Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ
ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!