ಮಹದಾಯಿ ಶೀಘ್ರ ಜಾರಿಗೆ ಸಿಎಂಗೆ ಪತ್ರ ಬರೆಯುವೆ
Team Udayavani, Oct 21, 2018, 6:25 AM IST
ಹುಬ್ಬಳ್ಳಿ: ಮಹದಾಯಿ ಯೋಜನೆಯನ್ನು ಶೀಘ್ರವೇ ಜಾರಿಗೊಳಿಸುವಂತೆ ಸರಕಾರ ಹಾಗೂ ಮುಖ್ಯಮಂತ್ರಿಗೆ ಸಲಹೆ ನೀಡುತ್ತೇನೆ. ಆದಷ್ಟು ಬೇಗ ಕಾಮಗಾರಿ ಕೈಗೆತ್ತಿಕೊಳ್ಳುವಂತೆ ಅ.25ರಂದು ಮುಖ್ಯಮಂತ್ರಿಗೆ ಪತ್ರ ಬರೆಯುತ್ತೇನೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹದಾಯಿ ಯೋಜನೆ ಜಾರಿಗಾಗಿ ಈ ಭಾಗದವರು ಸಾಕಷ್ಟು ಹೋರಾಟ ಮಾಡಿದ್ದಾರೆ. ಸರಕಾರ ಈ ಯೋಜನೆ ಜಾರಿಯಲ್ಲಿ ಮೀನಾಮೇಷ ಮಾಡದೆ ಶೀಘ್ರವೇ ಜಾರಿಗೊಳಿಸಬೇಕು. ಆ ನಿಟ್ಟಿನಲ್ಲಿ ಸರ್ವ ಪಕ್ಷಗಳ ಸಭೆ ಕರೆದು, ಆದಷ್ಟು ಬೇಗ ಕಾಮಗಾರಿ ಕೈಗೊಳ್ಳಬೇಕು ಎಂದು ಸೂಚಿಸುವೆ. ಯೋಜನೆ ಜಾರಿಯಲ್ಲಿ ನಿರ್ಲಕ್ಷéಗಳಾಗಿವೆ. ಈಗ ಆ ರೀತಿ ಆಗಲ್ಲ. ಅ.23ರಂದು ಮುಖ್ಯಮಂತ್ರಿ ಕಿತ್ತೂರಿಗೆ ಬರಲಿದ್ದು, ಆ ಸಂದರ್ಭದಲ್ಲಿ ಅವರು ಮಾಧ್ಯಮದವರೊಂದಿಗೆ ಈ ವಿಷಯ ಪ್ರಸ್ತಾಪಿಸಬಹುದು ಎಂದರು.
ಲಿಂಗಾಯತಕ್ಕೆ ಪ್ರತ್ಯೇಕ ಧರ್ಮ ನೀಡುವ ವಿಷಯದ ಶಿಫಾರಸ್ಸು ಕೇಂದ್ರ ಸರಕಾರ ಮುಂದಿದೆ. ಅದು ಯಾವ ನಿರ್ಣಯ ಕೈಗೊಳ್ಳುತ್ತದೋ ತೆಗೆದುಕೊಳ್ಳಲಿ. ಇಂತಹ ಸಂದರ್ಭದಲ್ಲಿ ಆ ಕುರಿತು ಮಾತನಾಡುವುದು ಸರಿಯಲ್ಲ. ಸಚಿವ ಡಿ.ಕೆ.ಶಿವಕುಮಾರ ಈ ವಿಷಯವಾಗಿ ಹೇಳಿಕೆ ಕೊಟ್ಟಿರುವುದರಿಂದ ಹೋರಾಟಕ್ಕೆ ಯಾವುದೇ ಹಿನ್ನಡೆ ಆಗಲ್ಲ.
– ಬಸವರಾಜ ಹೊರಟ್ಟಿ, ವಿಧಾನ ಪರಿಷತ್ ಸಭಾಪತಿ.