ರಾಜ್ಯದಲ್ಲಿ ಮುಖ್ಯಮಂತ್ರಿಸ್ಥಾನ ಖಾಲಿ ಇಲ್ಲ: ಜೋಶಿ
Team Udayavani, May 30, 2021, 5:18 PM IST
ಹುಬ್ಬಳ್ಳಿ: ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನ ಖಾಲಿಯಿಲ್ಲ. ಬಿ.ಎಸ್.ಯಡಿಯೂರಪ್ಪ ಉತ್ತಮವಾಗಿ ಆಡಳಿತ ನಡೆಸುತ್ತಿದ್ದಾರೆ. ಅವರೇ ಪೂರ್ಣಾವಧಿ ಮುಂದುವರಿಯಲಿದ್ದಾರೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸ್ಥಾನಕ್ಕೆ ಕಾಂಗ್ರೆಸ್ನಲ್ಲಿ ಸಮರ್ಥರು ಬಹಳ ಇದ್ದಾರೆಂದೇ ಸಿಕ್ಕಾಪಟ್ಟೆ ಬಡಿದಾಡುತ್ತಿದ್ದಾರೆ. ಅವರು ಹಾಗೇ ಹೊಡೆದಾಡಿಕೊಂಡಿರಲಿ. ಸಮರ್ಥರು ಇದ್ದಾರೋ ಇಲ್ಲವೋ ಎಂಬುದಕ್ಕಿಂತ ಇದ್ದವರು ಸಮರ್ಥರಿದ್ದಾರಿಲ್ಲವೋ ಎಂಬುದು ಮುಖ್ಯ. ಯಡಿಯೂರಪ್ಪ ಅವರು ಸಮರ್ಥರಿದ್ದಾರೆ. ಅವರಿಗೆ ವಯಸ್ಸಾಗಿದ್ದು, ಬದಲಾಯಿಸಲಾಗುತ್ತಿದೆ ಎಂಬ ಹೇಳಿಕೆಗಳು ಸತ್ಯಕ್ಕೆ ದೂರವಾಗಿವೆ. ಅಂತಹ ಯಾವ ಚರ್ಚೆಯೂ ನಡೆದಿಲ್ಲ. ಸಚಿವ ಸಿ.ಪಿ.ಯೋಗೀಶ್ವರ ಹೇಳಿಕೆ ಬಗ್ಗೆ ಸಿಎಂ ಉತ್ತರಿಸಿದ್ದಾರೆ. ರಾಜ್ಯದಲ್ಲಿ ಈಗಿರುವುದು ಬಿಜೆಪಿ ಸರಕಾರ ಎಂಬುದರಲ್ಲಿ ಯಾರಿಗೂ ಅನುಮಾನ ಬೇಡ ಎಂದರು.
ನಾನು ದೆಹಲಿಯಲ್ಲಿದ್ದಾಗ ರಾಜ್ಯದ ಕೆಲ ಜನಪ್ರತಿನಿಧಿ ಗಳು ಬಂದಿರುತ್ತಾರೆ, ಅಭಿವೃದ್ಧಿ ಯೋಜನೆ ಬಗ್ಗೆ ಚರ್ಚಿಸುತ್ತಾರೆ. ಆದರೆ, ನಾಯಕತ್ವ ಬದಲಾವಣೆ ಕುರಿತು ಯಾರೂ ನನ್ನೊಂದಿಗೆ ಚರ್ಚಿಸಿಲ್ಲ. ಸಿಎಂ ಬದಲಾವಣೆ ಬಗ್ಗೆ ಯಾರು ಮಾತನಾಡಿದ್ದಾರೋ ಅವರಿಗೆ ತಕ್ಕ ಉತ್ತರ ನೀಡಲು ಯಡಿಯೂರಪ್ಪ ಸಮರ್ಥರಾಗಿದ್ದಾರೆ. ದೇಶಾದ್ಯಂತ ಕೋವಿಡ್-19 ವ್ಯಾಪಿಸಿದೆ. ನಮ್ಮೆಲ್ಲರ ಆದ್ಯತೆ ಮಹಾಮಾರಿ ನಿಯಂತ್ರಣಕ್ಕೆ ಸಂಬಂಧಿಸಿದ್ದಾಗಿದೆ. ಪ್ರಧಾನಿ ಮಾರ್ಗದರ್ಶನದಲ್ಲಿ ಆದಷ್ಟು ಬೇಗ ಎರಡನೇ ಅಲೆಯನ್ನು ಕಟ್ಟಿ ಹಾಕಿ, ದೇಶ-ರಾಜ್ಯದ ಎಲ್ಲ ಚಟುವಟಿಕೆಗಳು ಮತ್ತು ವಿಶೇಷವಾಗಿ ಆರ್ಥಿಕ ಚಟಿವಟಿಕೆಗಳು ಹಳಿಗೆ ಬರಬೇಕಿದೆ ಎಂದರು.