ಛಬ್ಬಿಯಲ್ಲಿ ವಿಜೃಂಭಿಸಿದ ಹಬ್ಬದ ಸಂಭ್ರಮ
ಚಕ್ಕಡಿಯಲ್ಲಿ ಕಂದಾಯ ಸಚಿವರ ಮೆರವಣಿಗೆ! ಮಾರ್ದನಿಸಿದ ಜಗ್ಗಲಿಗೆ-ಹಲಿಗೆ! ಮೆಚ್ಚುಗೆ ಗಳಿಸಿದ ಅಶೋಕ್ ಸರಳತೆ
Team Udayavani, Mar 21, 2021, 8:30 PM IST
ಛಬ್ಬಿ: ಇಡೀ ಗ್ರಾಮದಲ್ಲಿ ಹಬ್ಬದ ಸಂಭ್ರಮ ನೆಲೆಗೊಂಡಿತ್ತು. ಕೈಯಲ್ಲಿ ಆರತಿ, ತಲೆಮೇಲೆ ಪೂರ್ಣಕುಂಭ ಹೊತ್ತ ನೂರಾರು ಮಹಿಳೆಯರು. ಮಾರ್ದನಿಸಿದ ಜಗ್ಗಲಿಗೆ- ಹಲಿಗೆ. ಇಂಪಾದ ಬ್ಯಾಂಡ್ನ ನಿನಾದ. ಅಲಂಕೃತ ಎತ್ತಿನ ಬಂಡಿಗಳ ಆಕರ್ಷಣೆ. ರಸ್ತೆಯುದ್ದಕ್ಕೂ ಚಿತ್ತ ಚಿತ್ತಾರದ ರಂಗೋಲಿ, ತಳಿರು-ತೋರಣ, ಬ್ಯಾನರ್ಗಳ ಸ್ವಾಗತ. ಹಲವು ಸಮಸ್ಯೆ-ಬೇಡಿಕೆಗಳಿಗೆ ಸ್ಥಳದಲ್ಲೇ ಪರಿಹಾರ, ಯಾವುದೇ ಐಷಾರಾಮಿ ಸೌಲಭ್ಯಗಳಿಗೆ ಅವಕಾಶವಿಲ್ಲದೆ ಸರಳತೆ ಪ್ರದರ್ಶನ-ಇದು ಕಂದಾಯ ಸಚಿವ ಆರ್. ಅಶೋಕ ಅವರ ಗ್ರಾಮವಾಸ್ತವ್ಯ ವೇಳೆ ಕಂಡುಬಂದ ದೃಶ್ಯಗಳಿವು.
ಮಧ್ಯಾಹ್ನ 12 ಗಂಟೆ ಸುಮಾರಿಗೆ ಛಬ್ಬಿಗೆ ಆಗಮಿಸಿದ ಸಚಿವರು, ಗ್ರಾಮ ಹೊರವಲಯದಲ್ಲಿರುವ ಸದ್ಗುರು ಸಿದ್ಧಾರೂಢಸ್ವಾಮಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ನಂತರ ಸೊಸೈಟಿ ಬಳಿ ಆಗಮಿಸಿದರು. ಸಚಿವರ ಸ್ವಾಗತಕ್ಕಾಗಿ ಆರತಿ ಹಿಡಿದು, ತಲೆ ಮೇಲೆ ಕುಂಭ ಹೊತ್ತ ನೂರಾರು ಮಹಿಳೆಯರು, ಅಲಂಕೃತ ಎತ್ತಿನ ಬಂಡಿಗಳು, ಜಗ್ಗಲಿಗೆ-ಹಲಿಗೆ ಶಬ್ದ, ಬ್ಯಾಂಡ್ ಮೇಳದ ಸಾಥ್ ಜಾತ್ರೆಯ ಸಂಭ್ರಮ ಸೃಷ್ಟಿಸಿತ್ತು. ಸಚಿವರಿಗೆ ಆರತಿ ಬೆಳಗಿ ಹಣೆಗೆ ತಿಲಕವಿಟ್ಟು, ಹಸಿರು ಶಾಲು ಹೊದಿಸಿ ಸ್ವಾಗತಿಸಲಾಯಿತು. ಅಲ್ಲಿಯೇ ಜಗ್ಗ ಲಿಗೆ ಬಡಿದ ಸಚಿವರು, ನಂತರ ಅಲಂಕೃತ ಬಂಡಿ ಏರಿದರು.
ಸುಡುಬಿಸಿಲನ್ನು ಲೆಕ್ಕಿಸದೆ ವಿವಿಧ ವಾದ್ಯ, ಪೂರ್ಣಕುಂಭದೊಂದಿಗೆ ನೂರಾರು ಜನರೊಂದಿಗೆ ಸುಮಾರು ಒಂದು ಕಿಮೀ ದೂರದ ಸರಕಾರಿ ಪ್ರಾಥಮಿಕ ಶಾಲೆವರೆಗೂ ಮೆರವಣಿಗೆ ಸಾಗಿತು. ರಸ್ತೆ ಇಕ್ಕೆಲಗಳ ಮನೆಗಳ ಮುಂದೆ ನಿಂತು ಜನರು ನೋಡುತ್ತಿದ್ದರೆ, ಅಲಂಕೃತ ಬಂಡಿಯಲ್ಲಿದ್ದ ಸಚಿವ ಆರ್. ಅಶೋಕ, ಜಿಲ್ಲಾಧಿ ಕಾರಿ ನಿತೇಶ ಪಾಟೀಲ ಜನರತ್ತ ಕೈ ಬೀಸಿ, ಕೈ ಮುಗಿದರು. ಪಂಚಾಯತ ಕಚೇರಿ ಎದುರಿನ ಸಂಗೊಳ್ಳಿ ರಾಯಣ್ಣ ಪ್ರತಿಮೆ ಹಾಗೂ ವೃತ್ತದಲ್ಲಿ ವಿಶೇಷ ಅಲಂಕಾರ ಕೈಗೊಳ್ಳಲಾಗಿತ್ತು. ರಸ್ತೆ ಎರಡು ಬದಿಯಲ್ಲೂ ರಂಗೋಲಿಯಿಂದ ಅಲಂಕರಿಸಲಾಗಿತ್ತು.