ಪಿಂಚಣಿ ಬಾಕಿ: ಬಿಜೆಪಿ ಮಹಿಳಾ ಮೋರ್ಚಾ ಪ್ರತಿಭಟನೆ
Team Udayavani, Oct 4, 2017, 12:40 PM IST
ಹುಬ್ಬಳ್ಳಿ: ಅವಳಿನಗರದ ಅಭಿವೃದ್ಧಿಗೆ ರಾಜ್ಯ ಸರಕಾರ ತಾರತಮ್ಯ ತೋರುತ್ತಿದ್ದು, ಪಾಲಿಕೆ ನಿವೃತ್ತ ನೌಕರರ ಪಿಂಚಣಿ ಬಾಕಿ ನೀಡದೆ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು.
ಪಾಲಿಕೆಗೆ ಅನುದಾನ ನೀಡುವಲ್ಲಿ ರಾಜ್ಯ ಸರಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಪಾಲಿಕೆ ನಿವೃತ್ತ ನೌಕರರಿಗೆ ನೀಡಬೇಕಾದ ಪಿಂಚಣಿ ಬಾಕಿ ಸುಮಾರು 137 ಕೋಟಿ ರೂ. ನೀಡಬೇಕಿದ್ದು ಅದನ್ನು ನೀಡುತ್ತಿಲ್ಲ. ಇದರಿಂದ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆ ಆಗುವಂತಾಗಿದೆ ಎಂದು ಆರೋಪಿಸಿದರು.
ಪಿಂಚಣಿ ಬಾಕಿ ಹಣ ಬಿಡುಗಡೆ ಭರವಸೆಯಾಗೇ ಉಳಿದಿದ್ದು, ರಾಜ್ಯ ಸರಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಈ ಬಗ್ಗೆ ನಿರ್ಲಕ್ಷ್ಯ ತೋರುತ್ತಿದ್ದಾರೆ. ಕೂಡಲೇ ಬಾಕಿ ಹಣ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು.
ಮಾಜಿ ಶಾಸಕಿ ಸೀಮಾ ಮಸೂತಿ, ಪಾಲಿಕೆ ಸದಸ್ಯರಾದ ಪೂರ್ಣಾ ಪಾಟೀಲ, ಕಮಲಾಕ್ಷಿ ಸಜ್ಜನರ, ಸ್ಮಿತಾ ಜಾಧವ, ಮಹಾನಗರ ಜಿಲ್ಲಾಧ್ಯಕ್ಷ ನಾಗೇಶ ಕಲುºರ್ಗಿ, ಮುಖಂಡರಾದ ರಂಗಾ ಬದ್ದಿ, ಪ್ರಭು ಹಿರೇಮಠ, ಸೀಮಾ, ಲೀನಾ ಪಾಸ್ತೆ, ಉಮಾ, ಶೋಭಾ, ರಾಧಾಬಾಯಿ ಇತರರಿದ್ದರು.