ಗದಗ: ಜಿಲ್ಲಾದ್ಯಂತ ನೀರಿಗಾಗಿ ಹಾಹಾಕಾರ ಶುರು-ಅಂತರ್ಜಲ ಮಟ್ಟ ಕುಸಿತ
Team Udayavani, Mar 15, 2024, 6:17 PM IST
ಉದಯವಾಣಿ ಸಮಾಚಾರ
ಗದಗ: ಬರಗಾಲ ಹಿನ್ನೆಲೆಯಲ್ಲಿ ಜಿಲೆಯಲ್ಲಿ ಹರಿದಿರುವ ನದಿ, ಹಳ್ಳ-ಕೊಳ್ಳಗಳು ಖಾಲಿಯಾಗಿದ್ದು, ಕೆರೆಗಳು ಬತ್ತಿವೆ. ಅಂತರ್ಜಲ ಮಟ್ಟವೂ ಕೂಡ ಪಾತಾಳಕ್ಕೆ ಕುಸಿಯುತ್ತಿರುವುದರಿಂದ ಜಿಲ್ಲಾದ್ಯಂತ ನೀರಿಗಾಗಿ ಹಾಹಾಕಾರ ಶುರುವಾಗಿದೆ.
ಜಿಲ್ಲೆಯಲ್ಲಿ ಹಲವು ರೀತಿಯಲ್ಲಿ ನೀರಿನ ಸಮಸ್ಯೆ ಕಾಡುತ್ತಿದೆ. ನೀರಿನ ಮೂಲಗಳಾದ ಮಲಪ್ರಭಾ, ತುಂಗಭದ್ರಾ ಸಂಪೂರ್ಣ ಬತ್ತಿರುವ ಹಿನ್ನೆಲೆ ಸ್ಥಳೀಯ ಸಂಸ್ಥೆಗಳು, ಗ್ರಾಪಂಗಳು ಕೊಳವೆ ಬಾವಿಗಳನ್ನೇ ಆಶ್ರಯಿಸಿವೆ. ಆದರೆ ಮಳೆ ಕೊರತೆಯಿಂದ ಅಂತರ್ಜಲ ಮಟ್ಟವೂ ಕುಸಿತ ಕಂಡಿದ್ದು ನೀರು ಪೂರೈಕೆ ಹೊಣೆ ಹೊತ್ತಿರುವವರು ಕೂಡಾ ಅಸಹಾಯಕರಾಗಿದ್ದಾರೆ.
ಕಳೆದ ಐದು ವರ್ಷಗಳಿಂದ ಜಲಪೂರಣಗೊಂಡು ಅಂತರ್ಜಲ ಮಟ್ಟ ಸುಧಾರಣೆಗೊಂಡಿತ್ತು. ಕಳೆದೆರೆಡು ವರ್ಷಗಳಿಂದ ಕಾಲ-ಕಾಲಕ್ಕೆ ಮಳೆಯಾಗದಿರುವುದರ ಜತೆಗೆ ಬರಗಾಲ ಆವರಿಸಿದ್ದರಿಂದ ಕೊಳವೆ ಬಾವಿಗಳಲ್ಲಿ ದಿನೇ ದಿನೆ ನೀರಿನ ಮಟ್ಟ ಇಳಿಯುತ್ತಿದೆ.
ಕೊಳವೆ ಬಾವಿ ಆಧರಿಸಿದ ಪಟ್ಟಣಗಳ ಬಡಾವಣೆ ಜನರಿಗೆ ಸಮಸ್ಯೆಯಾಗುತ್ತಿದ್ದು, ರಾತ್ರಿಯಲ್ಲಾ ನೀರು ಸಂಗ್ರಹಿಸಿ, ಬೆಳಗ್ಗೆ ಪೂರೈಕೆ ಮಾಡುವ ಪ್ರಯತ್ನಗಳು ನಡೆಯುತ್ತಿದೆಯಾದರೂ, ಕೊಳವೆ ಬಾವಿಗಳಿಂದ ನಿರೀಕ್ಷಿತ ಪ್ರಮಾಣದಲ್ಲಿ ನೀರು
ಸಂಗ್ರಹವಾಗದಿರುವುದು ಚಿಂತೆ ಹೆಚ್ಚಿಸಿದೆ.
ಮೂರು ತಿಂಗಳಲ್ಲಿ 3 ಮೀಟರ್ ಕುಸಿತ: ಕಳೆದ ಸಾಲಿನ ನವೆಂಬರ್ನಲ್ಲಿ ಜಿಲ್ಲೆಯ ಅಂತರ್ಜಲ ಮಟ್ಟ ಸರಸಾರಿ 10.51 ಮೀಟರ್ಗಳಷ್ಟು ಕುಸಿತ ಕಂಡಿತ್ತು. ಇದಕ್ಕೆ ಕಳೆದ ಸಾಲಿನ ಮುಂಗಾರು ಮಳೆ ಕೊರತೆ ಪ್ರಮುಖ ಕಾರಣವಾಗಿತ್ತು. ಆದರೆ ಫೆಬ್ರುವರಿ ಅಂತ್ಯದವರೆಗೆ 13.08 ಮೀಟರ್ಗಳಷ್ಟು ಕುಸಿತವಾಗಿದ್ದು, ಕಳೆದ 3 ತಿಂಗಳಲ್ಲಿ 3 ಮೀಟರ್ನಷ್ಟು ಅಂತರ್ಜಲ ಮಟ್ಟ ಕುಸಿದಿದೆ. ತಿಂಗಳಿಗೆ ಒಂದು ಮೀಟರ್ನಷ್ಟು ನೀರು ಆಳಕ್ಕಿಳಿದಿದ್ದು, ಅದರ ಪ್ರಮಾಣ ಇನ್ನು ಹೆಚ್ಚಾಗುವ ಸಾಧ್ಯತೆಯಿದೆ ಎನ್ನಲಾಗಿದೆ.
145 ಕೊಳವೆ ಬಾವಿಗಳು ಬತ್ತಿವೆ: ಪ್ರಸ್ತುತ ಜಿಲ್ಲೆಯ ನಗರ ಮತ್ತು ಪಟ್ಟಣ ಪ್ರದೇಶಗಳ ವ್ಯಾಪ್ತಿಯಲ್ಲಿ ಸರ್ಕಾರಿ ಸ್ವಾಮ್ಯದ 1,161 ಕೊಳವೆ ಬಾವಿಗಳಿವೆ. ಅವುಗಳಲ್ಲಿ ಫೆಬ್ರವರಿ ಮೊದಲ ವಾರದಲ್ಲಿಯೇ 145 ಕೊಳವೆ ಬಾವಿಗಳು ಸಂಪೂರ್ಣ ಬತ್ತಿದ್ದು,
254 ಕೊಳವೆ ಬಾವಿಗಳಲ್ಲಿ ನೀರಿನ ಪ್ರಮಾಣ ಗಣನೀಯ ಕುಸಿತ ಕಂಡಿದೆ. ನಿರೀಕ್ಷಿದಷ್ಟು ನೀರು ಲಭ್ಯವಾಗುತ್ತಿಲ್ಲ. ಜಿಲ್ಲೆಯಲ್ಲಿ ಮಳೆಯಾಗದಿದ್ದಲ್ಲಿ ಮತ್ತಷ್ಟು ಕೊಳವೆಬಾವಿಗಳು ಬತ್ತುವ ಸಾಧ್ಯತೆ ಇದೆ ಎನ್ನುತ್ತಾರೆ ನೀರು ಸರಬರಾಜು ಇಲಾಖೆಯ
ಹಿರಿಯ ಅಧಿಕಾರಿಗಳು.
ಗಜೇಂದ್ರಗಡ-ಲಕ್ಷ್ಮೇ ಶ್ವರ ಭಾಗದಲ್ಲಿ ಅಂತರ್ಜಲ ಕುಸಿತ ಜಿಲ್ಲೆಯ ಗಜೇಂದ್ರಗಡ ಭಾಗದಲ್ಲಿ 21 ಮೀಟರ್ನಷ್ಟು ಕುಸಿತವಾಗಿದ್ದರೆ, ಲಕ್ಷ್ಮೇಶ್ವರ ತಾಲೂಕಿನಲ್ಲಿ 16.73 ಮೀಟರ್ನಷ್ಟು ಅಂತರ್ಜಲ ಕುಸಿತಗೊಂಡಿದೆ. ರೋಣ ತಾಲೂಕಿನಲ್ಲಿ 13.25, ಶಿರಹಟ್ಟಿ 12.80 ಹಾಗೂ ನರಗುಂದ 11.83 ಮೀಟರ್ನಷ್ಟು ಅಂತರ್ಜಲ ಕುಸಿತಗೊಂಡಿದೆ. ಜಿಲ್ಲಾದ್ಯಂತ ಕಳೆದ ವರ್ಷ ಅಂದರೆ 2023ರ ಆರಂಭದಲ್ಲಿ 6.83 ಮೀಟರ್ನಲ್ಲಿ ದೊರೆಯುತ್ತಿದ್ದ ಅಂತರ್ಜಲ 2024ರ ಫೆಬ್ರುವರಿ ತಿಂಗಳಲ್ಲೇ 13.08 ಮೀಟರ್ಗೆ ಕುಸಿತ ಕಂಡಿದೆ. ಅಂದರೆ ಸರಾಸರಿ ವರ್ಷದೊಳಗೆ 6.25 ಮೀಟರ್ನಷ್ಟು ಅಂತರ್ಜಲ ಮಟ್ಟ ಕುಸಿತಗೊಂಡಿದೆ. ಮುಂಬರುವ ದಿನಗಳಲ್ಲಿ ಮಳೆಯಾದಿದ್ದರೆ, ನೀರಿಗಾಗಿ ಹಾಹಾಕಾರ ತಲೆದೋರಲಿದೆ.
ನೀರು ಪೂರೈಕೆಗೆ ಸಹಾಯವಾಣಿ
ಜಿಲ್ಲೆಯಲ್ಲಿ ಕುಡಿಯುವ ನೀರಿನ ಪೂರೈಕೆ ಕುರಿತಂತೆ ಸಾರ್ವಜನಿಕರಿಗಾಗಿ ತಾಲೂಕಾವಾರು ಸಹಾಯವಾಣಿ ಆರಂಭಿಸಲಾಗಿದೆ. ಜಿಲ್ಲಾಧಿಕಾರಿ ಕಚೇರಿ: 08372-239177, ಗದಗ: 08372-250009, ಗಜೇಂದ್ರಗಡ: 08381-262131, ಲಕ್ಷ್ಮೇಶ್ವರ: 08487-273272, ಮುಂಡರಗಿ: 08371-262237, ನರಗುಂದ: 08377-245243, ರೋಣ: 08381-267239 ಹಾಗೂ ಶಿರಹಟ್ಟಿ: 08487-242100
ಸಹಾಯವಾಣಿ ತೆರೆದಿದ್ದು, ಸಾರ್ವಜನಿಕರು ಸಹಾಯವಾಣಿ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ತಿಳಿಸಿದ್ದಾರೆ
ಜಿಲ್ಲೆಯ ನೀರಿನ ಸಮಸ್ಯೆ ಸೇರಿದಂತೆ ಮುಂಬರುವ ಬೇಸಿಗೆ ಎದುರಿಸಲು ತಾಲೂಕುವಾರು ತಹಶೀಲ್ದಾರರು ಪ್ರತಿ ವಾರ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆ ನಡೆಸಿ, ಚರ್ಚಿಸಿ ವರದಿ ನೀಡುತ್ತಾರೆ. ವರದಿ ಆಧಾರದಲ್ಲಿ ತಕ್ಷಣವೇ ಕ್ರಮ ಕೈಗೊಳ್ಳಲು ಕಟ್ಟು ನಿಟ್ಟಿನ ಸೂಚನೆ ನೀಡಲಾಗಿದೆ. ಸಾರ್ವಜನಿಕರಿಗೆ ತೊಂದರೆಯಾಗದಂತೆ ಜಿಲ್ಲಾಡಳಿತ ಸಕಲ ಕ್ರಮ ಕೈಗೊಳ್ಳುತ್ತಿದೆ.
ವೈಶಾಲಿ. ಎಂ.ಎಲ್. ಜಿಲ್ಲಾಧಿಕಾರಿ, ಗದಗ.
*ಅರುಣಕುಮಾರ ಹಿರೇಮಠ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗದಗ: ತೋಟದಾರ್ಯ ಮಠ ಅನ್ನ-ಅಕ್ಷರ ದಾಸೋಹಕ್ಕೆ ಪ್ರಸಿದ್ಧ
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ
ಗದಗ: ಸೈಕ್ಲಿಂಗ್ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಪವಿತ್ರಾ ಆಯ್ಕೆ
Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ
Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ
MUST WATCH
ಹೊಸ ಸೇರ್ಪಡೆ
Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ
Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!
Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ
Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !