ಹಾಳು ಕಟ್ಟಡದಲ್ಲೇ ಹಾಲಕೆರೆ ಗ್ರಂಥಾಲಯ
Team Udayavani, Nov 9, 2019, 1:36 PM IST
ನರೇಗಲ್ಲ: ಹಾಲಕೆರೆ ಗ್ರಾಮದ ಸಾರ್ವಜನಿಕ ಗ್ರಂಥಾಲಯದಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ. ಎಲ್ಲಿ ನೋಡಿದರೂ ಕಸ ಕಡ್ಡಿ, ಮದ್ಯದ ಬಾಟಲಿ, ಪ್ಯಾಕೆಟ್, ಬೀಡಿ-ಸಿಗರೇಟ್ ತುಂಡುಗಳಿಂದ ತುಂಬಿದೆ. ಹಾಡುಹಗಲೇ ಕುಡುಕರ ತಾಣವಾಗಿ ಮಾರ್ಪಟ್ಟಿರುವುದರಿಂದ ಓದುಗರು ಗ್ರಂಥಾಲಯಕ್ಕೆ ಬರಲು ಹಿಂಜರಿಯುತ್ತಿದ್ದಾರೆ.
ಹಾಲಕೆರೆ ಅನ್ನದಾನೇಶ್ವರ ಯುವಕ ಮಂಡಳ ಕಟ್ಟಡದಲ್ಲಿ 1998ರಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಸರ್ಕಾರ ಗ್ರಂಥಾಲಯ ತೆರೆದಿದೆ. ಅದರ ನಿರ್ವಹಣೆಗೆ ಗ್ರಂಥಪಾಲಕರನ್ನು ನೇಮಕ ಮಾಡಿದೆ. ಆದರೂ ಇಲ್ಲಿ ಸಿಬ್ಬಂದಿ ಕೊರತೆಯಿದೆ. ಗ್ರಂಥಾಲಯಕ್ಕೆ ಬೇಕಾದ ಮೂಲ ಸೌಲಭ್ಯ ಇಲ್ಲದೆ ಓದುಗರು ಪರದಾಡುವಂತಾಗಿದೆ. ಹಾಲಕೆರೆ ಗ್ರಾಮ ಪಂಚಾಯಿತಿ ಕೇಂದ್ರವಾಗಿದ್ದು, ಇಲ್ಲಿ ಅಕ್ಷರಸ್ಥರ ಸಂಖ್ಯೆ ಹೆಚ್ಚಾಗಿದೆ. ಆದರೆ ಇಲ್ಲಿನ ಗ್ರಂಥಾಲಯಕ್ಕೆ ಸ್ವಂತ ಕಟ್ಟಡವಿಲ್ಲ. ಶಿಥಿಲಗೊಂಡ ಅನ್ನದಾನೇಶ್ವರ ಯುವಕ ಮಂಡಳಿಯ ಚಿಕ್ಕದಾದ ಕೋಣೆಯಲ್ಲಿ ಓದುಗರು ಅಧ್ಯಯನ ಮಾಡಬೇಕಿದೆ.
ಸೌಲಭ್ಯಗಳ ಕೊರತೆ: ಪ್ರತಿದಿನ ಗ್ರಂಥಾಲಯಕ್ಕೆ ನೂರಾರು ಮಂದಿ ಅಧ್ಯಯನಕ್ಕಾಗಿ ಬರುತ್ತಾರೆ. ಹಲವು ವಿದ್ಯಾರ್ಥಿಗಳು ಗ್ರಂಥಾಲಯದಲ್ಲಿ ಸ್ಪರ್ಧಾತ್ಮಕ ಪುಸ್ತಕಗಳು ಇಲ್ಲದ ಕಾರಣ ತಮ್ಮದೇ ಪುಸ್ತಕವನ್ನು ತಂದು ಓದಲು ಇಲ್ಲಿಗೆ ಬರುತ್ತಾರೆ. ಆದರೆ ಗ್ರಂಥಾಲಯದಲ್ಲಿ ಕುಡಿಯುವ ನೀರು, ಸೂಕ್ತ ಆಸನ ಇಲ್ಲದಾಗಿದೆ.
ಮೂಟೆಯಲ್ಲಿ ತುಂಬಿದೆ ಪುಸ್ತಕ: ಗ್ರಂಥಾಲಯದ ಕಟ್ಟಡ ಸಂಪೂರ್ಣ ಶಿಥಿಲಗೊಂಡಿರುವುದರಿಂದ, ಇರುವ ಪುಸ್ತಕಗಳು ಓದುಗರ ಕೈಗೆ ತಲುಪುತ್ತಿಲ್ಲ. ಗ್ರಂಥಾಲಯಕ್ಕೆ ಸರಬರಾಜಾಗಿರುವ ಪುಸ್ತಕಗಳನ್ನು ಚೀಲದಲ್ಲಿ ಮೂಟೆ ಕಟ್ಟಿಡಲಾಗಿದೆ.
ಕಿತ್ತು ಹೋದ ಆಸನ ಮತ್ತು ನೆಲಹಾಸು: ಗ್ರಂಥಾಲಯದಲ್ಲಿರುವ ಖುರ್ಚಿಗಳು ಸಂಪೂರ್ಣ ಕಿತ್ತು ಹೋಗಿದ್ದು, ಕುಳಿತು ಓದಲು ಸಾಧ್ಯವೇ ಆಗುವುದಿಲ್ಲ. ಅಲ್ಲದೇ ಕಟ್ಟಡದಲ್ಲಿರುವ ನೆಲಹಾಸು ಕೂಡ ಕಿತ್ತು ಹೋಗಿರುವುದರಿಂದ ಓದುಗರರಿಗೆ ಸಾಕಷ್ಟು ತೊಂದರೆಯಾಗುತ್ತಿದೆ.
ಮೂತ್ರದ ಗಬ್ಬುನಾತ: ಗ್ರಂಥಾಲಯಕ್ಕೆ ಎರಡು ಬಾಗಿಲುಗಳಿದ್ದು, ಗ್ರಂಥಾಲಯದ ಮುಂದಿನ ಬಾಗಿಲು ತೆಗೆದರೆ ಮೂತ್ರ ವಿಸರ್ಜನೆಯ ಗುಬ್ಬುನಾತ ಸಹಿಸಲಾಸಾಧ್ಯವಾಗಿದೆ. ಕಟ್ಟಡದಲ್ಲಿ ಕೆಲ ಕಿಡಿಗೇಡಿಗಳು ಗುಟಕಾ ಹಾಕಿಕೊಂಡು ಅಲ್ಲಿಯೇ ಉಗುಳುತ್ತಿದ್ದಾರೆ. ಕಟ್ಟಡದ ಸುತ್ತ ಬಯಲು ಶೌಚ, ಮೂತ್ರ ಸೇರಿದಂತೆ ಅನೈತಿಕ ಚಟುವಟಿಕೆಗಳು ಎಗ್ಗಿಲ್ಲದೇ ನಡೆಯುತ್ತಿವೆ.
ಗ್ರಾಮದ ಜನರಿಗೆ ಅನುಕೂಲವಾಗಲಿ ಎಂದು ಸರ್ಕಾರ 1998ರಲ್ಲಿ ಗ್ರಂಥಾಲಯಕ್ಕೆ ಸ್ವಂತ ಜಾಗೆ ಹಾಗೂ ಕಟ್ಟಡ ಇಲ್ಲದೇ ಇರುವುದರಿಂದ ಅನ್ನದಾನೇಶ್ವರ ಯುವಕ ಮಂಡಳದ ಕಟ್ಟಡದಲ್ಲಿ ಪ್ರಾರಂಭಮಾಡಲಾಗಿತ್ತು. ಆರಂಭದಲ್ಲಿ ಕೇವಲ 500 ಪುಸ್ತಕಗಳು ಇದ್ದವು. ಸದ್ಯ ಈಗ 3334 ಪುಸ್ತಕಗಳು ಇವೆ. ಅಲ್ಲದೇ ರಾಜ್ಯಮಟ್ಟದ ಎರಡು ಪತ್ರಿಕೆಗಳು ಬರುತ್ತಿವೆ. ಹೆಚ್ಚು ಪತ್ರಿಕೆಗಳನ್ನು ಖರೀದಿ ಮಾಡುವುದಕ್ಕೆ ಅನುದಾನದ ಕೊರತೆಯಿದೆ. ಕಟ್ಟಡ ಸಂಪೂರ್ಣ ಶಿಥಿಲಗೊಂಡಿರುವುದರಿಂದ ಅದರ ದುರಸ್ತಿಗೆ ಮುಂದಾಗಬೇಕು. ಸುಣ್ಣ ಬಣ್ಣ ಹಚ್ಚುವ ಕಾರ್ಯ ನಡೆಯಬೇಕು. –ಅಂದಪ್ಪ ರೊಟ್ಟಿ, ಗ್ರಂಥಾಲಯ ಮೇಲ್ವಿಚಾರಕ
-ಸಿಕಂದರ ಎಂ. ಆರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗದಗ: ತೋಟದಾರ್ಯ ಮಠ ಅನ್ನ-ಅಕ್ಷರ ದಾಸೋಹಕ್ಕೆ ಪ್ರಸಿದ್ಧ
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ
ಗದಗ: ಸೈಕ್ಲಿಂಗ್ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಪವಿತ್ರಾ ಆಯ್ಕೆ
Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ
Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ