ಅನ್ನದಾತರಿಗೆ ಖುಷಿ ತಂದ ಕೃಷಿ ಹೊಂಡ
ಕೃಷಿ ಹೊಂಡದ ನೀರಿನಿಂದ ಅಲ್ಪಾವಧಿ ಬೆಳೆ • ಬದುಗಳ ಬಳಿ ಕಂದಕ ನಿರ್ಮಾಣದಿಂದ ಮಣ್ಣಿನ ಸವಕಳಿ ತಡೆ
Team Udayavani, May 2, 2019, 10:41 AM IST
ಹರಪನಹಳ್ಳಿ: ಮೈದೂರು ಗ್ರಾಮದ ಜಮೀನಿನಲ್ಲಿ ನಿರ್ಮಿಸಿದ ಕೃಷಿ ಹೊಂಡ ತುಂಬಿರುವುದು.
ಹರಪನಹಳ್ಳಿ: ಸತತವಾಗಿ ಬರಗಾಲಕ್ಕೆ ತುತ್ತಾಗಿ ಆತಂಕದಲ್ಲಿದ್ದ ತಾಲೂಕಿನ ಅನ್ನದಾತರಿಗೆ ಮುಂಗಾರು ಪ್ರಾರಂಭದಲ್ಲಿಯೇ ಸುರಿದ ಮಳೆಯಿಂದ ಕೃಷಿ ಹೊಂಡಗಳು ತುಂಬಿರುವುದು ರೈತರ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ.
ಕೃಷಿಭಾಗ್ಯ ಯೋಜನೆಯಡಿ ತಾಲೂಕಿನಾದ್ಯಾಂತ 2014-15ರಿಂದ ಇಲ್ಲಿಯವರೆಗೆ ಒಟ್ಟು 3035 ಕೃಷಿ ಹೊಂಡ ನಿರ್ಮಾಣಗೊಂಡಿವೆ. ಪ್ರಸಕ್ತ ವರ್ಷ ಇನ್ನೂ ಕೆಲವು ಕಾಮಗಾರಿ ಹಂತದಲ್ಲಿಯೇ ಇವೆ. ಯೋಜನೆಯ ಆರಂಭದಲ್ಲಿ ನಿರಾಸಕ್ತಿ ತೋರಿದ ರೈತರು ನಂತರದ ದಿನಗಳಲ್ಲಿ ಸ್ವತಃ ತಾವೇ ಮುಂದೆ ಬಂದು ಕೃಷಿ ಹೊಂಡಗಳನ್ನು ನಿರ್ಮಾಣ ಮಾಡಿಕೊಳ್ಳುತ್ತಿದ್ದಾರೆ. ತಾಲೂಕಿನಲ್ಲಿ ಅತೀ ಹೆಚ್ಚು ಚಿಗಟೇರಿ ಹೋಬಳಿಯಲ್ಲಿ ಹೊಂಡಗಳನ್ನು ನಿರ್ಮಿಸಲಾಗಿದೆ. ಸೋಮವಾರ ರಾತ್ರಿ ಸುರಿದ ಮಳೆಗೆ ಮೈದೂರು, ಚಿಗಟೇರಿ, ಹರಪನಹಳ್ಳಿ ಭಾಗದ ಸುಮಾರು 50ಕ್ಕೂ ಹೆಚ್ಚು ಕೃಷಿ ಹೊಂಡದಲ್ಲಿ ನೀರು ಸಂಗ್ರಹವಾಗಿದೆ. ಬೆಳೆಗಳ ಸಂದಿಗ್ಧ ಹಂತಗಳಲ್ಲಿ ನೀರುಣಿಸಿ ಹೆಚ್ಚು ಇಳುವರಿ ಪಡೆಯಲು ಮತ್ತು ಅಂತರ್ಜಲ ವೃದ್ಧಿಗೂ ಹೊಂಡಗಳು ಸಹಕಾರಿಯಾಗಿವೆ.
ಅನಿಶ್ಚಿತ ಮಳೆಯಾಶ್ರಿತ ಪ್ರದೇಶದ ರೈತ ಸಮುದಾಯಕ್ಕೆ 1 ರಿಂದ 2 ಎಕರೆ ಭೂಮಿಯಲ್ಲಿ ಅಲ್ಪ ನೀರಾವರಿ ಸೌಲಭ್ಯ ಒದಗಿಸುವ ಮೂಲಕ ಅವರ ಆದಾಯ ಹೆಚ್ಚಿಸಬಹುದು. ಪರಿಶಿಷ್ಟ ಜಾತಿ ಮತ್ತು ಪಂಗಡದ ರೈತರಿಗೆ ಶೇ.90ರಷ್ಟು ಮತ್ತು ಸಾಮಾನ್ಯ ವರ್ಗದ ರೈತರಿಗೆ ಶೇ.80ರಷ್ಟು ರಿಯಾಯಿತಿ ದರದಲ್ಲಿ ಸರ್ಕಾರ ಸಹಾಯಧನ ನೀಡಿದ್ದು, ರೈತರ ಜೀವನೋಪಾಯವನ್ನು ಉತ್ತಮಪಡಿಸಲು ಯೋಜನೆ ಹೆಚ್ಚು ಒತ್ತು ನೀಡಿದೆ. ಅತಿಸಣ್ಣ ಕೃಷಿ ಹೊಂಡದ ಅಳತೆ 10 ಮೀ. ಅಗಲ, 10 ಮೀ. ಉದ್ದ ಮತ್ತು 3 ಮೀ. ಆಳ ಇರುತ್ತದೆ. ಅದೇ ರೀತಿ 12x12x3, 15x15x3, 18x18x3 ಮತ್ತು 21x21x3, 29x29x3 ಅಳತೆಯಲ್ಲಿ ಹೊಂಡಗಳನ್ನು ರೈತರು ಜಮೀನಿನಲ್ಲಿ ನಿರ್ಮಿಸಿಕೊಂಡಿದ್ದಾರೆ.
ಕೃಷಿ ಹೊಂಡದಲ್ಲಿ ಸಂಗ್ರಹವಾಗಿರುವ ನೀರು ಜಾನುವಾರುಗಳಿಗೆ ಹಾಗೂ ಪ್ರಾಣಿ ಹಾಗೂ ಪಕ್ಷಿಗಳಿಗೆ ಹೆಚ್ಚು ಅನುಕೂಲವಾಗಿದೆ. ಪ್ರಾಣಿಗಳು ಕುಡಿಯುವ ನೀರಿಗಾಗಿ ದೂರದಲ್ಲಿರುವ ಕೆರೆಗಳನ್ನು ಹುಡುಕಾಟ ನಡೆಸುತ್ತಿದ್ದವು. ಹೊಂಡದಲ್ಲಿ ನೀರು ಇರುವುದರಿಂದ ಪ್ರಾಣಿ ಸಂಕುಲಕ್ಕೂ ಹೆಚ್ಚು ಸಹಕಾರಿಯಾಗಿದೆ. ಕೃಷಿ ಇಲಾಖೆಯು ಕೃಷಿ ಹೊಂಡ ನಿರ್ಮಾಣ ಜೊತೆಗೆ ಟಾರ್ಪಲಿನ್ ಹೊದಿಕೆ, ಡೀಸೆಲ್ ಮೋಟಾರ್ ಮತ್ತು ತುಂತುರು ನೀರಾವರಿ ಘಟಕಗಳ ಸೌಲಭ್ಯಕ್ಕಾಗಿ ಸಾಮಾನ್ಯ ವರ್ಗದ ರೈತರಿಗೆ ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡದ ರೈತರಿಗೆ ಶೇ.90ರಷ್ಟು ಸಹಾಯಧನ ನೀಡುತ್ತದೆ ಎಂದು ಕೃಷಿ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಕಳೆದ ಏಪ್ರಿಲ್ ತಿಂಗಳಲ್ಲಿ ಜಮೀನುಗಳಲ್ಲಿ ಬದುಗಳ ಬಳಿ ಎಲ್-ಸೇಫ್ನಲ್ಲಿ ಕಂದಕಗಳನ್ನು ಸ್ವತಃ ರೈತರೇ ಕೂಲಿ ಹಾಳಾಗಳಾಗಿ ನಿರ್ಮಾಣ ಮಾಡಿಕೊಂಡಿದ್ದಾರೆ. ಇದರಿಂದ ಹೊಲದಲ್ಲಿ ಬಿದ್ದಂತಹ ನೀರು ಪೋಲಾಗದೆ ಹೊಲದಲ್ಲಿ ಕೊರಕಲು ಬೀಳದಂತೆ ಕಂದಕಗಳಲ್ಲಿ ಸಂಗ್ರಹವಾಗುತ್ತದೆ. ಇದರಿಂದ ಬೋರವೆಲ್ಗಳ ಅಂತರ್ಜಲ ವೃದ್ಧಿಯಾಗಲಿದೆ. ಅಲ್ಲದೇ ಭೂಮಿ ಸವಕಳಿ ಕೂಡ ತಡೆದು ಫಲವತ್ತಾದ ಮಣ್ಣು ಹೊಲದಲ್ಲಿಯೇ ನಿಲ್ಲುವಂತೆ ಆಗುತ್ತದೆ. ಕೃಷಿ ಹೊಂಡ ಮತ್ತು ಬದುಗಳ ಬಳಿ ಕಂದಕ ನಿರ್ಮಾಣದಿಂದ ಜಮೀನಿನಿಂದ ಹಳ್ಳಕ್ಕೆ ಹರಿದು ಹೋಗುವ ಮಳೆ ನೀರು ಸಂಗ್ರಹವಾಗಿ ಬೆಳೆಗಳು ಒಣಗುವ ಹಂತದಲ್ಲಿ ನೀರುಣಿಸಿ ಇಳುವರಿ ಪಡೆಯಬಹುದಾಗಿದೆ.
ಕೃಷಿ ಹೊಂಡಗಳು ಮತ್ತು ಬದುಗಳ ಬಳಿ ಕಂದಕಗಳ ನಿರ್ಮಾಣ ರೈತರಿಗೆ ಸಾಕಷ್ಟು ಸಹಕಾರಿಯಾಗಿವೆ. ಮುಂಗಾರು ಆರಂಭದಲ್ಲಿ ಬಂದ ಮಳೆ ಮತ್ತೆ ಬಾರದ ಹಿನ್ನೆಲೆಯಲ್ಲಿ ಕೃಷಿ ಹೊಂಡದಲ್ಲಿರುವ ನೀರು ಹರಿಸುವ ಮೂಲಕ ಅಲ್ಪಾವಧಿಯ ಬೆಳೆ ಪಡೆಯಲು ಸಹಕಾರಿಯಾಗಿದೆ. ಕೃಷಿ ಹೊಂಡ ನಿರ್ಮಾಣದ ಬಳಿಕ ನಮ್ಮ ಬೆಳೆಗೆ ನೀರು ದೊರೆಯುವಂತಾಗಿದೆ. ಸರ್ಕಾರದ ಈ ಯೋಜನೆ ಉತ್ತಮವಾಗಿದೆ.
•ಎಚ್.ದೇವರಾಜ್,
ಮೈದೂರು ಗ್ರಾಮದ ರೈತ.
ರೈತರು ಹೊಂಡಕ್ಕೆ ನೀರು ಹರಿದು ಬರುವ ದಾರಿಯಲ್ಲಿರುವ ನಿರ್ಮಿಸಿರುವ ಹೂಳು ಬೋನುಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಕಸ, ಕಡ್ಡಿ ಇರದಂತೆ ನೋಡಿಕೊಂಡಲ್ಲಿ ನೀರು ಸರಗವಾಗಿ ಹರಿದು ಬರುತ್ತದೆ. ಹೊಂಡದಲ್ಲಿರುವ ಗಿಡ, ಗಂಟೆ ತೆಗೆದು ತಾಡುಪಾಲುಗಳನ್ನು ಅಳವಡಿಕೊಳ್ಳಬೇಕು. ಸದ್ಯ ಹೊಂಡದಲ್ಲಿ ಸಂಗ್ರಹವಾಗಿರುವ ನೀರಿನಿಂದ ಅಲ್ಪಾವಧಿಯ ತರಕಾರಿ, ಸೊಪ್ಪ್ಪು ಬೆಳೆಯಬಹುದು. ಹೊಂಡದಿಂದ ನೀರು ಎತ್ತಲು ಈಗಾಗಲೇ ರಿಯಾಯಿತಿ ದರದಲ್ಲಿ ನೀಡಿರುವ ಸಕರಣೆಗಳನ್ನು ರೈತರು ಬಳಕೆ ಮಾಡಿಕೊಳ್ಳಬೇಕು.
•ನಾಗರಾಜ್ ಸಕ್ಕರೆಗೌಡರ್,
ಪ್ರಭಾರಿ ಸಹಾಯಕ ಕೃಷಿ ನಿರ್ದೇಶಕ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ