ಸರ್ಕಾರಿ ಮಳಿಗೆ ದುರುಪಯೋಗವಾದರೆ ಕ್ರಮ
ಹರಿಹರ ನಗರಸಭೆ-ತಾಲೂಕು ಕಚೇರಿಗೆ ಡಿಸಿ ಭೇಟಿ•ಅಗತ್ಯವಿರುವೆಡೆ ಅನುದಾನ ಬಳಸಿ
Team Udayavani, Jul 5, 2019, 12:51 PM IST
ಹರಿಹರ: ಇಲ್ಲಿನ ನಗರಸಭೆ ಹಾಗೂ ತಾಲೂಕು ಕಛೇರಿಗೆ ಗುರುವಾರ ಜಿಲ್ಲಾಧಿಕಾರಿ ಬಿ.ಎಸ್.ಶಿವಮೂರ್ತಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಹರಿಹರ: ಸರ್ಕಾರಿ ಅಥವಾ ಅರೆ ಸರ್ಕಾರಿ ಸಂಸ್ಥೆಗಳಿಂದ ಪಡೆದ ಮಳಿಗೆ ದುರ್ವಿನಿಯೋಗ ಮಾಡಿಕೊಳ್ಳುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಬಿ.ಎಸ್.ಶಿವಮೂರ್ತಿ ಎಚ್ಚರಿಸಿದರು.
ವಿವಿಧ ಅಭಿವೃದ್ಧಿ ಯೋಜನೆಗಳ ಕಡತ ಪರಿಶೀಲನೆಗೆ ಇಲ್ಲಿನ ನಗರಸಭೆ ಹಾಗೂ ತಾಲೂಕು ಕಚೇರಿಗೆ ಗುರುವಾರ ಭೇಟಿ ನೀಡಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ನಗರಸಭೆ ಮಳಿಗೆಗಳನ್ನು ಪಡೆದಿರುವ ಕೆಲವರು ನಿಯಮ ಉಲ್ಲಂಘಿಸಿರುವ ಆರೋಪ ಬಂದಿದ್ದು, ಅಂತಹವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ ಎಂದು ಸ್ಥಳದಲ್ಲಿದ್ದ ಪೌರಾಯುಕ್ತೆ ಎಸ್.ಲಕ್ಷ್ಮಿ ಅವರಿಗೆ ಸೂಚಿಸಿದರು.
ನಗರದ ಕ್ರೀಡಾ ಇಲಾಖೆ ವಾಣಿಜ್ಯ ಸಂಕೀರ್ಣದಲ್ಲಿ ನಿಯಮಬಾಹಿರವಾಗಿ ಮದ್ಯ, ಮಾಂಸ ಮಾರಾಟ ಮಾಡುವ, ಗೋಡೆ- ಛಾವಣಿ ತೆರವುಗೊಳಿಸಿ ಎರಡು ಮಳಿಗೆಗಳನ್ನು ಒಟ್ಟುಗೂಡಿಸಿಕೊಂಡಿರುವ ಅಲ್ಲದೆ ಸಬ್ಲೀಸ್ ನೀಡಿರುವ ಆರೋಪಗಳು ಕೇಳಿ ಬಂದಿವೆ. ಇಂತಹ ನಿಯಮ ಉಲ್ಲಂಘಿಸಿರುವ ಮಳಿಗೆ ಮಾಲೀಕರಿಗೆ ಕೂಡಲೆ ನೋಟಿಸು ಜಾರಿಗೊಳಿಸಲು ಸೂಚಿಸಲಾಗಿದೆ ಎಂದರು.
ಶೀಘ್ರ ಸ್ವತ್ತುಗಳ ದಾಖಲೀಕರಣ: ದೂಡಾ ಪರವಾನಿಗೆ ಇಲ್ಲದ ದಶಕಗಳಷ್ಟು ಹಳೆಯ ಬಡಾವಣೆಗಳ ನಿವಾಸಿಗಳ ಮನೆ ದುರಸ್ತಿ, ನಿರ್ಮಾಣಕ್ಕೆ ಪರವಾನಗಿ ಸಿಗುತ್ತಿಲ್ಲ ಎಂದು ಸಾರ್ವಜನಿಕರು ಹೇಳುತ್ತಿದ್ದಾÃ.ೆ ಆದರೆ 1976 ಕ್ಕಿಂತ ಮುಂಚಿನ ಬಡಾವಣೆ, ರಚನೆಗಳು ಗ್ರಾಮ ಠಾಣಾ ವ್ಯಾಪ್ತಿಯಲ್ಲಿ ಬರುವುದರಿಂದ ಅಂತಹ ಸ್ವತ್ತುಗಳಿಗೆ ಖಾತಾ ಎಕ್ಸ್ಟ್ರ್ಯಾಕ್ಟ್, ಕಟ್ಟಡ ಪರವಾನಿಗೆ ನೀಡಲಾಗುತ್ತಿದೆ.
1976ರ ನಂತರದ ದೂಡಾ ಪರವಾನಿಗೆ ಇಲ್ಲದ ಬಡಾವಣೆ ಸ್ವತ್ತುಗಳಿಗೆ ನಿಗದಿತ ಶುಲ್ಕ ಪಾವತಿಸಿಕೊಂಡು ಬಿ ಖಾತೆ ಎಂದು ದಾಖಲಿಸಿ ಅವರಿಗೂ ಖಾತಾ ಎಕ್ಸ್ಟ್ರ್ಯಾಕ್ಟ್, ಕಟ್ಟಡ ಪರವಾನಗಿ ನೀಡಲಾಗುತ್ತಿದೆ. ಸರ್ಕಾರ ರೂಪಿಸಿದ್ದ ಅಕ್ರಮ ಸಕ್ರಮ ಯೋಜನೆಯಲ್ಲಿ ಕನಿಷ್ಟ ಶುಲ್ಕದಲ್ಲಿ ಸಕ್ರಮಗೊಳಿಸಲು ಅವಕಾಶವಿದ್ದರೂ ಆ ಯೋಜನೆಗೆ ನ್ಯಾಯಾಲಯ ತಡೆ ನೀಡಿರುವುದರಿಂದ ಆ ಸೌಕರ್ಯ ಈಗ ದೊರೆಯದಾಗಿದೆ ಎಂದರು.
ನಗರ ಹೊರವಲಯದ ಗ್ರಾಮಗಳು ನಗರಕ್ಕೆ ಸೇರ್ಪಡೆಯಾಗಿದ್ದು, ಅಂತಹ ಗ್ರಾಮಗಳ ಸ್ವತ್ತುಗಳನ್ನು ನಗರಸಭೆಯಲ್ಲಿ ದಾಖಲಿಸುವ ಕಾರ್ಯ ಪ್ರಗತಿಯಲ್ಲಿದ್ದು, ಆದಷ್ಟು ಬೇಗ ಎಲ್ಲಾ ಸ್ವತ್ತುಗಳ ಖಾತಾ ಎಕ್ಸ್ಟ್ರ್ಯಾಕ್ಟ್ ದೊರೆಯಲಿವೆ ಎಂದರು.
ಅಕ್ರಮ ತಡೆಗೆ ಕ್ರಮ: ಗಣಿ ಮತ್ತು ಭೂವಿಜ್ಞಾನ ಸಚಿವರು ಅಕ್ರಮ ಮರಳುಗಾರಿಕೆ ತಡೆಗೆ ಹೊಸದಾಗಿ ಕಾನೂನು ರೂಪಿಸುವುದಾಗಿ ತಿಳಿಸಿದ್ದಾರೆ. ಈಗಿರುವ ನಿಯಮಾನುಸಾರ ಅಕ್ರಮ ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಶಾಸನ ಸಂರಕ್ಷಿಸಿ: ನಗರದ ಹರಿಹರೇಶ್ವರ ದೇವಸ್ಥಾನದ ಆವರಣದಲ್ಲಿನ ಪುರಾತನ ಶಾಸನಗಳನ್ನು ಸಂರಕ್ಷಿಸಿ ವಿವಿಧ ಭಾಷೆಗೆ ತರ್ಜುಮೆ ಮಾಡಿ ಪ್ರವಾಸಿಗರಿಗೆ ಮಾಹಿತಿ ದೊರೆಯುವಂತೆ ಮಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ತಹಶೀಲ್ದಾರ್ ರೆಹನ್ ಪಾಷಾಗೆ ಡಿಸಿ ತಿಳಿಸಿದರು.
ಅನುದಾನ ತಾರತಮ್ಯ: ನಗರದ ಅಭಿವೃದ್ಧಿಗೆ ಸರ್ಕಾರದಿಂದ 8 ಕೋ.ರೂ. ಅನುದಾನ ಮಂಜೂರಾಗಿದ್ದು, ಅದನ್ನು ಕೆಲವೇ ವಾರ್ಡ್ಗೆ ಹಂಚಿಕೆ ಮಾಡಲಾಗಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪೌರಾಯುಕ್ತೆ, ನಗರಸಭೆ ಕ್ರಿಯಾಯೋಜನೆಯಂತೆ ಈ ಅನುದಾನ ಬಿಡುಗಡೆಯಾಗಿದೆ ಎಂದರು.
ಮುಂದೆ ಬಿಡುಗಡೆಯಾಗುವ ಅನುದಾನವನ್ನು ಅತ್ಯಗತ್ಯವಿರುವ ಕಡೆಗೆ ಆದ್ಯತೆ ಅನುಸಾರ ಹಂಚಿಕೆ ಮಾಡುವಂತೆ ಡಿಸಿ ಸೂಚಿಸಿದರು.
ನಗರಕ್ಕೆ ಕುಡಿಯುವ ನೀರು ಪೂರೈಸುವ ಜಾಕ್ವೆಲ್ ಘಟಕಕ್ಕೆ 24 ಗಂಟೆ ವಿದ್ಯುತ್ ಪೂರೈಸುವ ಎಕ್ಸ್ಪ್ರೆಸ್ ಲೈನ್ ಯೋಜನೆ ಪ್ರಗತಿಯಲ್ಲಿದೆ. ವಿದ್ಯುತ್ ಪೂರೈಸುವ ಹೆಸ್ಕಾಂಗೆ 40 ಲಕ್ಷ ರೂ. ಪಾವತಿಸಬೇಕಿದ್ದು, ಸರ್ಕಾರಕ್ಕೆ ವರದಿ ನೀಡಲಾಗಿದೆ. ಅನುದಾನ ಬಂದ ಕೂಡಲೆ ವಿದ್ಯುತ್ ಸಂಪರ್ಕ ಪಡೆಯಲಾಗುವುದು ಎಂದು ಪೌರಾಯುಕ್ತರು ತಿಳಿಸಿದರು.