ಬಾಲಕಿ ಗರ್ಭಿಣಿ: ಆರೋಪಿ ಬಂಧನ
Team Udayavani, Dec 5, 2021, 1:58 PM IST
Representative Image used
ಸಕಲೇಶಪುರ: 7ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಬಾಲಕಿ ಮೇಲೆ ವ್ಯಕ್ತಿಯೋರ್ವ ಅತ್ಯಾಚಾರ ಎಸಗಿರುವ ಘಟನೆ ತಾಲೂಕಿನ ಬಾಳ್ಳುಪೇಟೆ ಸಮೀಪ ನಡೆದಿದೆ. ಬಾಲಕಿ ಕುಟುಂಬ ನೇಪಾಳದಿಂದ ಉದ್ಯೋಗ ಅರಸಿ 15 ವರ್ಷಗಳ ಹಿಂದೆ ಕರ್ನಾಟಕಕ್ಕೆ ಬಂದಿದ್ದರು.
ಕಳೆದ 2 ವರ್ಷಗಳ ಹಿಂದೆ ತಾಲೂಕಿನ ಬಾಳ್ಳುಪೇಟೆಯ ಸಮೀಪದ ಕಾಫಿ ತೋಟದಲ್ಲಿ ಕೂಲಿ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಈ ಕುಟುಂಬದಲ್ಲಿ ಒಟ್ಟು 6 ಹೆಣ್ಣು ಮಕ್ಕಳಲ್ಲಿ ಮೊದಲನೆಯವಳು ಈ ಬಾಲಕಿಯಾಗಿದ್ದಾಳೆ.ಬಾಲಕಿ ತಂದೆ ಅಕ್ಕನನ್ನು ಬಾಳ್ಳುಪೇಟೆ ಸಮೀಪದ ಇನ್ನೊಂದು ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ ಶಂಕರ್ ಎಂಬುವವನಿಗೆ ಕೊಟ್ಟು ಮದುವೆ ಮಾಡಲಾಗಿತ್ತು.
ಆರೋಪಿ ಶಂಕರ್ಗೆ ನಾಲ್ಕು ಜನ ಮಕ್ಕಳಿದ್ದು, ಇಬ್ಬರು ಮಕ್ಕಳಿಗೆ ಮದುವೆಯಾಗಿದೆ. ಆರೋಪಿ ಶಂಕರನ ಹೆಂಡತಿಗೆ ಅನಾರೋಗ್ಯವಾಗಿದ್ದ ಸಮಯಕ್ಕೆ ಸರಿ ಶಂಕರನ ಸೊಸೆಗೆ ಹೆರಿಗೆಯಾಗಿತ್ತು. ಮನೆಯಲ್ಲಿ ಕೆಲಸ ಮಾಡಲು ಯಾರು ಇಲ್ಲದೆ, ಶಂಕರನ ಭಾವನ ಮಗಳಾದ ಈ ಬಾಲಕಿಯನ್ನು ಮನೆಗೆ ಕರೆಸಿಕೊಂಡಿದ್ದಾನೆ.
ಲಾಕ್ ಡೌನ್ನಿಂದ ಶಾಲೆ ಮುಚ್ಚಿದ್ದರಿಂದ ಬಾಲಕಿಯನ್ನು ಜುಲೈನಲ್ಲಿ ಶಂಕರನ ಮನೆಗೆ ಕಳಿಸಲು ಒಪ್ಪಿದ್ದಾರೆ. 1 ತಿಂಗಳ ನಂತರ ಶಾಲೆ ಆರಂಭವಾದಗ ಬಾಲಕಿ ತನ್ನ ತಾಯಿ ಮನೆಗೆ ವಾಪಸ್ ಹೋಗಿದ್ದಾಳೆ. ಮನೆಗೆ ಬಂದ ಬಾಲಕಿ 1 ವಾರದ ಹಿಂದೆ ಹೊಟ್ಟೆ ನೋವು ಬರುತ್ತಿದೆ ಎಂದು ತಾಯಿ ಬಳಿ ಹೇಳಿಕೊಂಡಿದ್ದಾಳೆ. ತಕ್ಷಣವೇ ಬಾಲಕಿಯನ್ನು ಬಾಳ್ಳುಪೇಟೆಯ ಸರ್ಕಾರಿ ಆಸ್ಪತ್ರೆಗೆ ತೋರಿಸಿದ್ದಾರೆ.
ಇದನ್ನೂ ಓದಿ:- ನಾಗಾಲ್ಯಾಂಡ್ :’ತಪ್ಪಾದ ಗುರುತಿಸುವಿಕೆ’ಯಿಂದ ನಾಗರಿಕರ ಹತ್ಯೆ ನಡೆಯಿತೇ?
ಬಾಲಕಿಯನ್ನು ಪರೀಕ್ಷಿಸಿದ ವೈದ್ಯರು, ಬಾಲಕಿ ಗರ್ಭಿಣಿಯಾಗಿರುವ ವಿಷಯ ತಿಳಿದಿದೆ. ಬಾಲಕಿಯನ್ನು ವಿಚಾರಿಸಿದ ಪೋಷಕರು, ಅ ಬಾಲಕಿಯು ತಾನು ಗರ್ಭಿಣಿಯಾಗಲು ಮಾವ ಶಂಕರನೇ ಕಾರಣ ಎಂದು ತಿಳಿಸಿದ್ದಾಳೆ. ಈ ಸಂಬಂಧ ಪೋಷಕರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಸದ್ಯ ಬಾಲಕಿಯು ಸಾಂತ್ವಾನ ಕೇಂದ್ರದ ಆರೈಕೆಯಲ್ಲಿದ್ದು, ಪೋಷಕರು ದೂರು ನೀಡಿದ ತಕ್ಷಣವೇ ಕಾರ್ಯಪ್ರವೃತ್ತರಾದ ವೃತ್ತ ನಿರೀಕ್ಷಕ ಚೈತನ್ಯ ಕುಮಾರ್, ಪಿಎಸ್ಐ ಬಸವರಾಜ್. ಬಿ ಹಾಗೂ ಸಿಬ್ಬಂದಿ ಆರೋಪಿ ಶಂಕರನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.