ಬೆಳೆ ಸಮೀಕ್ಷೆ ಆ್ಯಪ್ನಿಂದ ಅನುಕೂಲ
Team Udayavani, Aug 22, 2020, 1:50 PM IST
ಸಾಂದರ್ಭಿಕ ಚಿತ್ರ
ಚನ್ನರಾಯಪಟ್ಟಣ: ರೈತರು ತಮ್ಮ ಬೆಳೆ ಸಮೀಕ್ಷೆಯನ್ನು ಆ್ಯಪ್ ಮೂಲಕ ತಾವೇ ಅಪ್ಲೋಡ್ ಮಾಡಿಕೊಳ್ಳುವಂತೆ ಸರ್ಕಾರ ಕಲ್ಪಿಸಿರುವ ಅವಕಾಶವನ್ನು ಸಂಪೂರ್ಣ ಪ್ರಯೋಜ ಪಡೆದುಕೊಳ್ಳಬೇಕು ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.
ತಾಲೂಕಿನ ದಿಂಡಗೂರು ಗ್ರಾಮದ ರೈತ ಭರತ್ ಅವರ ಜಮೀನಿನಲ್ಲಿ ತಾಲೂಕು ಕೃಷಿ ಇಲಾಖೆಯಿಂದ ಹಮ್ಮಿಕೊಂಡಿದ್ದ ಮೊಬೈಲ್ ಮೂಲಕ ಬೆಳೆ ಸಮೀಕ್ಷೆ ಅಪ್ಲೋಡ್ ಮಾಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಗೂಗಲ್ ಪ್ಲೇ ಸ್ಟೋರ್ನಲ್ಲಿ ರೈತರು ಬೆಳೆ ಸಮೀಕ್ಷೆ ಆ್ಯಪ್ ಡೌನ್ ಲೋಡ್ಮಾಡಿಕೊಂಡು ತಮ್ಮ ಜಮೀನಿನಲ್ಲಿ ಬೆಳೆದಿರುವ ಬೆಳೆಗಳ ಭಾವಚಿತ್ರದ ಸಹಿತವಾಗಿ ಮಾಹಿತಿ ರವಾನೆ ಮಾಡಬಹುದಾಗಿದೆ, ಇದರಿಂದಾಗಿ ಈ ಹಿಂದೆ ಆಗಿದಂತಹ ಎಡವಟ್ಟುಗಳು ಸರಿಹೋಗಲಿವೆ, ಇನ್ನು ಬೆಳೆ ದೃಢೀಕರಣಕ್ಕೆ ಅಲೆದಾಡುವುದು ತಪ್ಪಲಿದೆ ಎಂದರು.
ಮೊಬೈಲ್ ಬಳಕೆ ಮಾಡಿಕೊಳ್ಳಲು ಬಾರದ ರೈತರ ಸಹಾಯಕ್ಕಾಗಿ ತರಬೇತಿ ಪಡೆದ ಖಾಸಗಿ ವ್ಯಕ್ತಿಗಳನ್ನು ಕೃಷಿ ಇಲಾಖೆ ವತಿಯಿಂದ ನಿಯೋಜಿಸಿದ್ದು ಆ ಮೂಲಕವಾದರೂ ಬೆಳೆ ಸಮೀಕ್ಷೆ ಅಪ್ಲೋಡ್ ಮಾಡಿಸಬಹುದಾಗಿದೆ ಎಂದು ತಿಳಿಸಿದರು. ಖಾಸಗಿಯವರು ಅಪ್ಲೋಡ್ ಮಾಡುವ ಪ್ರತಿ ಫೋಟೋಗಳಿಗೆ 10 ರೂ. ಹಾಗೂ ಗರಿಷ್ಠ 20 ರೂ.ಗಳನ್ನು ಸರ್ಕಾರವೇ ನೀಡಲಿದೆ, ರೈತರು ಯಾವುದೇ ರೀತಿಯಲ್ಲಿ ಹಣ ನೀಡಬಾರದು. ಒಂದು ವೇಳೆ ಹಣ ಕೇಳಿದರೆ ಕೂಡಲೆ ಕೃಷಿ ಇಲಾಖೆಗೆ ಮಾಹಿತಿ ನೀಡುವುದು ಸೂಕ್ತ ಎಂದು ತಿಳಿಸಿದರು.
ಸಹಾಯಕ ಕೃಷಿಇಲಾಖೆ ಪ್ರಭಾರ ನಿರ್ದೇಶಕಿ ರಶ್ಮಿ, ತಾಪ ಸದಸ್ಯ ಮಂಜೇಗೌಡ, ಕೃಷಿ ಅಧಿಕಾರಿಗಳಾದ ಆದರ್ಶ, ಯೋಗೇಶ್ ಇತರರು ಇದ್ದರು.