Hassan;ಜನಿಸಿದ ಒಂದೇ ದಿನಕ್ಕೆ ಶಿಶು ಮಾರಾಟ: ಐವರ ಬಂಧನ
Team Udayavani, Jan 5, 2024, 12:38 AM IST
ಸಕಲೇಶಪುರ/ಹಾಸನ: ಜನಿಸಿದ ಒಂದೇ ದಿನಕ್ಕೆ ಮಗುವನ್ನು ಮಾರಾಟ ಮಾಡಲಾಗಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಮಗುವಿನ ತಾಯಿ, ಆಶಾ ಕಾರ್ಯಕರ್ತೆ ಸಹಿತ ಐವರನ್ನು ತಾಲೂಕಿನ ಬ್ಯಾಕರವಳ್ಳಿ ಗ್ರಾಮದಲ್ಲಿ ಪೊಲೀಸರು ಬಂಧಿಸಿದ್ದಾರೆ.
ತಾಲೂಕಿನ ಹರಗರವಳ್ಳಿಯ ಗಿರಿಜಾ, ಹಿರಿಯೂರು ಕೂಡಿಗೆಯ ಸುಮಿತ್ರಾ, ಹೊಸಳ್ಳಿಯ ಸುಬ್ರಮಣಿ, ಆತನ ಮಗ ಶ್ರೀಕಾಂತ್ ಹಾಗೂ ಚಿಕ್ಕಮಗಳೂರು ಮೂಲದ ಉಷಾ ಬಂಧಿತರು. ಮಗುವನ್ನು ಸಾಕಲಾಗದೆ ಹೀಗೆ ಮಾಡಿದರೋ ಅಥವಾ ಇದರ ಹಿಂದೆ ಬೇರಾವುದಾದರೂ ಕಾರಣ ಇದೆಯೋ ಎಂಬುದರ ಬಗ್ಗೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಮಗುವಿನ ತಾಯಿ ಗಿರಿಜಾ, ಪತಿ ಸೋಮಶೇಖರ್ ಜತೆಗೆ ಕಾಫಿ ಎಸ್ಟೇಟ್ನಲ್ಲಿ ಕೂಲಿ ಕೆಲಸ ಮಾಡಿಕೊಂಡು ಅಲ್ಲೇ ವಾಸವಿದ್ದರು. ದಂಪತಿಗೆ ಈಗಾಗಲೇ ಇಬ್ಬರು ಮಕ್ಕಳಿದ್ದು, ನ.13ರಂದು ಹೆತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಗಿರಿಜಾ ಗಂಡು ಮಗುವಿಗೆ ಜನ್ಮ ನೀಡಿದ್ದರು. ಹಿರಿಯೂರು ಕೂಡಿಗೆ ಗ್ರಾಮದ ಆಶಾ ಕಾರ್ಯಕರ್ತೆ ಸುಮಿತ್ರಾ ಎಂಬಾಕೆಯ ಸಹಾಯದಿಂದ ಉಷಾ ಎಂಬವರಿಗೆ ಮಗುವನ್ನು ಮಾರಾಟ ಮಾಡಲಾಗಿತ್ತು.