ಡೀಸಿ ಕಚೇರಿ ಕಟ್ಟಡ ನಾನೇ ಮಂಜೂರು ಮಾಡಿದ್ದೆ
Team Udayavani, Jul 2, 2020, 7:07 AM IST
ಹಾಸನ: ಜಿಲ್ಲಾಧಿಕಾರಿ ಕಚೇರಿಗೆ ನೂತನ ಕಟ್ಟಡ ಹಾಗೂ ಹಾಸನ ತಾಲೂಕು ಕಚೇರಿಗೆ ನೂತನ ಕಟ್ಟಡ ನಿರ್ಮಾಣಕ್ಕೆ ನಾನು ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದಾಗ, ಒಂದು ವರ್ಷದ ಹಿಂದೆಯೇ ಮಂಜೂರಾತಿ ನೀಡಲಾಗಿತ್ತು ಎಂದು ಜೆಡಿಎಸ್ ಮುಖಂಡ, ಮಾಜಿ ಸಚಿವ ಎಚ್.ಡಿ.ರೇವಣ್ಣ ಸ್ಪಷ್ಟಪಡಿಸಿದರು.
ಕಂದಾಯ ಸಚಿವ ಆರ್.ಆಶೋಕ್ ಅವರು ಜಿಲ್ಲಾಧಿಕಾರಿ ಕಚೇರಿಗೆ ಹಾಗೂ ಹಾಸನ ತಾಲೂಕು ಕಚೇರಿಗೆ ಹೊಸ ಕಟ್ಟಡಗಳ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ ನಡೆಸಿದ ಸಂಬಂಧ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ರೇವಣ್ಣ ಅವರು, ಜಿಲ್ಲಾಧಿಕಾರಿ ಕಚೇರಿಯ ನೂತನ ಕಟ್ಟಡಕ್ಕೆ 20 ಕೋಟಿ ರೂ., ಹಾಸನ ತಾಲೂಕು ಕಚೇರಿಯ ನೂತನ ಕಟ್ಟಡಕ್ಕೆ 10 ಕೋಟಿ ರೂ. ಹಾಗೂ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣಕ್ಕೆ 10 ಕೋಟಿ ರೂ.ಗಳನ್ನು 2019 ಜು.16 ರಂದು ಮಂಜೂರಾತಿ ನೀಡ ಲಾಗಿತ್ತು ಎಂದು ದಾಖಲೆಗಳನ್ನು ಬಿಡುಗಡೆ ಮಾಡಿದರು.
ನಾನು ಸಚಿವನಾಗಿದ್ದಾಗ ಹಾಸನ ಕ್ಷೇತ್ರದಲ್ಲಿ ಬಿಜೆಪಿ ಶಾಸಕರಿದ್ದಾರೆ ಎಂದು ಪಕ್ಷಪಾತ ಮಾಡದೇ ಹಾಸನ ಜಿಲ್ಲಾ ಕೇಂದ್ರದ ಅಭಿವೃದ್ಧಿ ಯೋಜನೆಗಳಿಗೆ ಮಂಜೂರಾತಿ ನೀಡಿ ಅನುಷ್ಠಾನಗೊಳಿಸಿದ್ದೇನೆ ಎಂದರು. ನಾನು ಮಂಜೂರು ಮಾಡಿದ್ದ ಹಾಸನ ನಗರದ ವಿವಿಧ ಕಟ್ಟಡಗಳ ಕಾಮಗಾರಿಗೆ ಅನುದಾನ ನೀಡದೇ 81.65 ಕೋಟಿ ರೂ. ಕಾಮಗಾರಿಗಳು ಸ್ಥಗಿತವಾಗಿವೆ ಎಂದು ರೇವಣ್ಣ ಆಪಾದಿಸಿದರು. ನಿಂತು ಹೋಗಿರುವ ಕಾಮಗಾರಿಗಳನ್ನು ಮುಂದುವರಿಸಿದರೆ ಸಂತೋಷ. ಇಲ್ಲದಿದ್ದರೆ ಮುಂದೆ ನನಗೆ ಅಧಿಕಾರ ಸಿಕ್ಕಾಗ ಪೂರ್ಣಗೊಳಿಸುತ್ತೇನೆ ಎಂದರು.
ಲಾಕ್ಡೌನ್ ಮರುಜಾರಿ ಸೂಕ್ತ: ಜಿಲ್ಲೆಯಲ್ಲಿ ಕೋವಿಡ್ 19 ನಿಯಂತ್ರಣಕ್ಕೆ ಕೆಲವು ತಾಲೂಕುಗಳಲ್ಲಿ ಸ್ವಯಂ ಲಾಕ್ಡೌನ್ ಮಾಡಿಕೊಳ್ಳಲಾಗುತ್ತಿದೆ. ಸರ್ಕಾರವೇ ಕೆಲವು ದಿನಗಳ ಮಟ್ಟಿಗೆ ಲಾಕ್ಡೌನ್ ಮಾಡುವುದು ಸೂಕ್ತ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರು ಅಭಿಪ್ರಾಯಪಟ್ಟರು. ಆರ್ಥಿಕತೆಗಿಂತಲೂ ಜನರ ಪ್ರಾಣ ಮುಖ್ಯ ಎಂಬುದನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕು ಎಂದರು.