ಸಕಲೇಶಪುರ: ಕಸಾಯಿಖಾನೆಗೆ ಅಕ್ರಮವಾಗಿ ಸಾಗಿಸುತ್ತಿದ್ದ ಗೋವುಗಳ ವಶ
Team Udayavani, Oct 20, 2021, 5:15 PM IST
ಸಕಲೇಶಪುರ: ಮಿನಿಲಾರಿಯೊಂದರಲ್ಲಿ ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸಲಾಗುತ್ತಿದ್ದ ಗೋವುಗಳನ್ನು ಪಟ್ಟಣ ಪೋಲಿಸರು ವಶಪಡಿಸಿಕೊಂಡು ಲಾರಿಯ ಚಾಲಕನನ್ನು ಬಂಧಿಸಿರುವ ಘಟನೆ ಪಟ್ಟಣದಲ್ಲಿ ಬುಧವಾರ ನಡೆದಿದೆ.
ಹಾಸನದ ಕಡೆಯಿಂದ ಮಂಗಳೂರಿನ ಕಸಾಯಿಖಾನೆಯೊಂದಕ್ಕೆ ಲಾರಿಯಲ್ಲಿ ಅಕ್ರಮವಾಗಿ ರಾಸುಗಳನ್ನು ಸಾಗಣೆ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಭಜರಂಗದ ದಳ ಕಾರ್ಯಕರ್ತರು ಬುಧವಾರ ಮುಂಜಾನೆ ಲಾರಿಯೊಂದನ್ನು ತಡೆದು ಪರಿಶೀಲಿಸಿದಾಗ ತುಂಬಾ ಇಕ್ಕಟ್ಟಿನಲ್ಲಿ ಉಸಿರಾಡುವುದಕ್ಕೂ ಸಹ ಸಾಧ್ಯವಾಗದ ರೀತಿಯಲ್ಲಿ ತುಂಬಿಸಿಕೊಂಡು ಸಾಗಣೆ ಮಾಡುತ್ತಿರುವುದು ಕಂಡು ಬಂದಿದೆ.
ಮೇಲ್ನೋಟಕ್ಕೆ ತರಕಾರಿ ಮೂಟೆಗಳನ್ನು ಸಾಗಣೆ ಮಾಡುವಂತೆ ಮೂಟೆಗಳನ್ನು ತುಂಬಿಸಿಕೊಂಡು ಲಾರಿಯ ಒಳಗೆ ಸುಮಾರು 17 ರಾಸುಗಳನ್ನು ಸಾಗಣೆ ಮಾಡಲಾಗುತ್ತಿತ್ತು. ತಕ್ಷಣ ಪೋಲಿಸರಿಗೆ ಭಜರಂಗದಳ ಕಾರ್ಯಕರ್ತರು ಮಾಹಿತಿ ನೀಡಿದ್ದು ಸ್ಥಳಕ್ಕೆ ಬಂದ ಪಟ್ಟಣ ಠಾಣೆ ಪಿಎಸ್ಐ ಬಸವರಾಜ್ ಚಿಂಚೋಳಿ ಸ್ಥಳಕ್ಕೆ ಆಗಮಿಸಿ ಯಾವುದೆ ಅಹಿತಕರ ಘಟನೆ ನಡೆಯದಂತೆ ನೋಡಿಕೊಂಡು ಲಾರಿ ಚಾಲನೆ ಮಾಡುತ್ತಿದ್ದ ಪಿರಿಯಾಪಟ್ಟಣ ತಾಲ್ಲೂಕು ಅಲಗನಹಳ್ಳಿ ನಿವಾಸಿ ನಸ್ರುಲ್ಲಾ ಶರೀಫ್ ಎಂಬಾತನನ್ನು ಬಂಧಿಸಿ ಲಾರಿಯನ್ನು ವಶಕ್ಕೆ ಪಡೆದರು.
ರಾಸುಗಳನ್ನು ಮೈಸೂರಿನ ಪಿಂಜರ್ ಪೋಲ್ ಗೋ ಶಾಲೆಗೆ ಕಳಿಸಲಾಯಿತು. ಪಟ್ಟಣ ಠಾಣೆಯಲ್ಲಿ ದೂರು ದಾಖಲಾಗಿದೆ.
ರಾಷ್ಟ್ರೀಯ ಹೆದ್ದಾರಿ 75ರ ಮುಖಾಂತರ ಮಂಗಳೂರು ಹಾಗೂ ಕೇರಳದ ಕಸಾಯಿಖಾನೆಗಳಿಗೆ ಅಕ್ರಮವಾಗಿ ಕಸಾಯಿಖಾನೆಗಳಿಗೆ ನಿರಂತರ ಗೋವುಗಳ ಸಾಗಾಟ ಮಾಡಲಾಗುತ್ತಿದ್ದು ರಾಜ್ಯದಲ್ಲಿ ಗೋ ಹತ್ಯೆ ನಿಷೇದ ಕಾನೂನು ಜಾರಿಯಲ್ಲಿದ್ದರು ಸಹ ಅಕ್ರಮ ಗೋಸಾಗಾಟ ಮಾಡುವವರ ವಿರುದ್ದ ಪೋಲಿಸರು ಕಠಿಣ ಕ್ರಮ ಕೈಗೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂದು ಭಜರಂಗದಳ ಜಿಲ್ಲಾ ಸುರಕ್ಷಾ ಪ್ರಮುಖ್ ಕೌಶಿಕ್ ಆರೋಪಿಸಿದ್ದಾರೆ.