ಕೃಷಿ ಇಲಾಖೆ ಸೌಲಭ್ಯ ಸದ್ಬಳಕೆಯಾಗಲಿ
Team Udayavani, Oct 7, 2019, 3:10 PM IST
ಆಲೂರು: ರೈತರು ಕೃಷಿ ಇಲಾಖೆಯ ಸೌಲಭ್ಯವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಾಲೂಕು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಶ್ರೀನಾಥ್ ಚಿಮ್ಮಲಗಿ ತಿಳಿಸಿದರು.
ಪಟ್ಟಣದಲ್ಲಿರುವ ಕೃಷಿ ಕಚೇರಿಯಲ್ಲಿ ರೈತರಿಗೆ ಇಲಾಖೆ ವತಿಯಿಂದ ರಿಯಾಯಿತಿ ನೀಡ ಲಾಗುತ್ತಿರುವ ಧನದಡಿ ಟಾರ್ಪಲ್ಗಳನ್ನು ವಿತರಣೆ ಮಾತನಾಡಿದ ಅವರು, ಸರ್ಕಾರ ರೈತರ ಅಭಿವೃದ್ಧಿಗಾಗಿ ಅನೇಕ ಜನಪರ ಕಾರ್ಯ ಕ್ರಮಗಳನ್ನು ಆಯೋಜಿಸುತ್ತಿದೆ ಎಂದರು.
ಕೃಷಿ ಇಲಾಖೆ ಯಿಂದ ರೈತರಿಗೆ ನೀಡುವ ಟಿಲ್ಲರ್, ಬಿತ್ತನೆ ಬೀಜ, ರಸಗೊಬ್ಬರ, ಸಾವಯವ ಗೋಬ್ಬರ ಸೇರಿದಂತೆ ಇತರೆ ಆನೇಕ ಉಪಕರಣಗಳನ್ನು ರಿಯಾಯಿತಿ ದರದಲ್ಲಿ ನೀಡಲಾಗುತ್ತಿದೆ. ಅರ್ಹ ರೈತರು ಸೂಕ್ತ ದಾಖಲೆಗಳನ್ನು ನೀಡಿ ಈ ಸೌಲಭ್ಯ ಪಡೆಯಬೇಕು ಎಂದರು.
ಈಗಾಗಲೇ ತಾಲೂಕಿನ ಕಸಬಾ ಹೋಬಳಿ ಹಾಗೂ ಕೆ.ಹೊಸಕೋಟೆ ಹೋಬಳಿಗಳಿಗೆ 450 ಟಾರ್ಪಲ್ಗಳನ್ನು ವಿತರಿಸುತ್ತಿದೆ. ಪಾಳ್ಯ ಹೋಬಳಿ ಹಾಗೂ ಕುಂದೂರು ಹೊಬಳಿಗಳಿಗೆ ಟಾರ್ಪಲ್ಗಳು ಬರಬೇಕಾಗಿದ್ದು ಮುಂದಿನ ವಾರದಲ್ಲಿ ಬರುವ ನಿರೀಕ್ಷೆ ಇದೆ ಎಂದರು.
ಸಾಮಾನ್ಯ ವರ್ಗದ ರೈತರಿಗೆ ಒಂದು ಟಾರ್ಪಲ್ ಜೊತೆಗೆ ಜಿಂಕ್ ಮತ್ತು ಬೋರೆಕ್ಸ್ ಪೌಡರ್ ಸೇರಿ 1,200 ರೂ. ಹಾಗೂ ಎಸ್ಸಿ,ಎಸ್ಟಿ ರೈತರಿಗೆ ಒಂದು ಟಾರ್ಪಲ್ ಜೊತೆಗೆ ಜಿಂಕ್ ಮತ್ತು ಬೋರೆಕ್ಸ್ ಪೌಡರನ್ನು 400 ರೂ.ಗಳಿಗೆ ನೀಡಲಾಗುತ್ತಿದೆ. ಒಟ್ಟು 850 ರೈತರಿಗೆ ಟಾರ್ಪಲ್ಗಳನ್ನು ವಿತರಣೆ ಮಾಡಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾಲೂಕಿನ ಕೃಷಿ ಇಲಾಖೆಯ ತಾಂತ್ರಿಕ ಅಧಿಕಾರಿ ಯೋಗಾ ನಂದ್, ಕೃಷಿ ಅಧಿಕಾರಿ ಮಲ್ಲಿಕಾರ್ಜುನ್, ಮಹಂತೇಶ್, ಮೋಹನ್, ಆತ್ಮ ತಾಂತ್ರಿಕ ಯೋಜನಾಧಿಕಾರಿ ಕಿಶೋರ್ ಹಾಗೂ ಇಲಾಖೆಯ ಸಿಬ್ಬಂದಿ ಹಾಜರಿದ್ದರು.