ಹಾಸನದ ವಾಸ್ತವಾಂಶ ಅರಿತು ಮಾತನಾಡಲಿ
Team Udayavani, Jul 9, 2018, 6:20 AM IST
ಹಾಸನ: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಂಡಿಸಿರುವ ಬಜೆಟ್ನ್ನು ಹಾಸನ, ಮಂಡ್ಯ, ರಾಮನಗರ ಬಜೆಟ್ ಎಂದು ಟೀಕಿಸುತ್ತಿರುವ ಬಿಜೆಪಿ ಮುಖಂಡರ ತಂಡ ಹಾಸನಕ್ಕೆ ಬಂದು ವಾಸ್ತವಾಂಶ ಏನಿದೆ ಎಂಬುದನ್ನು ಪರಿಶೀಲಿಸಿ ಆನಂತರ ಮಾತನಾಡಲಿ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ತಿರುಗೇಟು ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಗತ್ಯವಿದ್ದರೆ ಹಾಸನಕ್ಕೆ ಘೋಷಣೆಯಾಗಿರುವ ಕೆಲವು ಯೋಜನೆಗಳನ್ನು ತ್ಯಾಗ ಮಾಡಲೂ ಸಿದ್ಧನಿದ್ದೇನೆ ಎಂದು ಹೇಳಿದರು.
ಕಳೆದ 10 ವರ್ಷಗಳಿಂದ ಹಾಸನ ಜಿಲ್ಲೆಯ ಒಂದು ಸಣ್ಣ ಯೋಜನೆಗೂ ಬಿಜೆಪಿ ಸರ್ಕಾರ ಸ್ಪಂದಿಸಲಿಲ್ಲ. ಕಾಂಗ್ರೆಸ್ ಸರ್ಕಾರದಲ್ಲೂ ಕುಡಿಯುವ ನೀರಿನ ಅನುದಾನಕ್ಕೂ ಭಿಕ್ಷೆ ಬೇಡಿದ್ದೇವೆ. ಯಡಿಯೂರಪ್ಪ, ಈಶ್ವರಪ್ಪ, ಜಗದೀಶ ಶೆಟ್ಟರ್ ಸೇರಿ ಬಿಜೆಪಿಯ ತಂಡ ಹಾಸನ ಜಿಲ್ಲೆಗೆ ಬಂದು ಪರಿಶೀಲನೆ ನಡೆಸಲಿ ಎಂದು ಸವಾಲು ಹಾಕಿದರು.