ಮುಂಗಾರು ಕೊರತೆ: ಆಲೂ ಬಿತ್ತನೆ ಇಳಿಮುಖ
Team Udayavani, Jun 14, 2019, 3:58 PM IST
ಅರಕಲಗೂಡು ತಾಲೂಕಿನಲ್ಲಿ ಬಿತ್ತನೆಯಲ್ಲಿ ತೊಡಗಿರುವ ರೈತ.
ಅರಕಲಗೂಡು: ಪೂರ್ವ ಮುಂಗಾರು ಕೈಕೊಟ್ಟಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಪ್ರಮಖ ವಾಣಿಜ್ಯ ಬೆಳೆಯಾದ ಆಲೂಗಡ್ಡೆ ಬಿತ್ತನೆಗೆ ರೈತರು ಹಿಂದೇಟು ಹಾಕಿದ್ದು, ಮಸುಕಿನ ಜೋಳ ಹಾಗೂ ತಂಬಾಕು ಬೆಳೆಯಲು ಆದ್ಯತೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಈ ಬಾರಿ ಆಲೂಗೆಡ್ಡೆ ಬಿತ್ತನೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಲಿದೆ.
40 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಜೋಳ ಬಿತ್ತನೆ: ಕಳೆದ ಸಾಲಿನಲ್ಲಿ ಮೇ ತಿಂಗಳಿನಲ್ಲೆ ಮುಂಗಾರು ಪ್ರಾರಂಭವಾಗಿದ್ದರಿಂದ ಬಹುತೇಕ ಬಿತ್ತನೆ ಜೂನಿನಲ್ಲಿ ಮುಗಿದಿತ್ತು. ಸುಮಾರು 35ಸಾವಿರ ಎಕರೆ ಪ್ರದೇಶದಲ್ಲಿ ಜೋಳ ಬೆಳೆಯಲಾಗಿತ್ತು. ಆದರೆ ಈ ಬಾರಿ ಇದರ ಪ್ರಮಾಣ ಅಧಿಕವಾಗಲಿದ್ದು ಸರಿಸುಮಾರು 40ಸಾವಿರ ಎಕರೆ ದಾಟುವ ಸಾಧ್ಯತೆಗಳು ಇವೆ ಎಂದು ಅಂದಾಜಿಸಲಾಗಿದೆ. ಆಲೂಗೆಡ್ಡೆ ಕಳೆದ ಸಾಲಿನಲ್ಲಿ 2,500 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದು, ಈ ಬಾರಿ 1,500 ಹೆಕ್ಟೇರ್ಗು ಕಡಿಮೆ ಬೆಳೆಯಾಗಬಹುದು ಎಂದು ತಿಳಿದುಬಂದಿದೆ.
ಆಲೂರಿನಲ್ಲಿ ಕೃಷಿ ಚಟುವಟಿಕೆ ಆರಂಭ:
ತಾಲೂಕಿನಲ್ಲಿ ಮೋಡ ಕವಿದ ವಾತಾವರಣವಿದ್ದು, ಕೃಷಿ ಚಟುವಟಿಕೆ ಆರಂಭವಾಗಿದೆ ಪೂರ್ವ ಮುಂಗಾರು ಕೈಕೊಟ್ಟ ಹಿನ್ನೆಲೆಯಲ್ಲಿ ಆಲೂಗಡ್ಡೆ ಬೆಳೆ ಯವ ರೈತರ ಸಂಖ್ಯೆ ಕಡಿಮೆಯಾಗಿದ್ದು, ಮುಸುಕಿನ ಜೋಳವನ್ನು ಬೆಳೆಯಲು ರೈತರು ಆಸಕ್ತರಾಗಿದ್ದಾರೆ.
ದಟ್ಟವಾದ ಮೋಡ ಮುಸುಕಿದ ವಾತಾವರಣ ವಿರುವುದಲ್ಲದೆ ಆಗಾಗ ಮಳೆ ಸಿಂಚನ ಉಂಟಾಗುತ್ತಿದೆ. ಚಳಿ ಅಧಿಕವಾಗಿರುವುದರಿಂದ ಜನಸಾಮಾನ್ಯರು, ಜಾನುವಾರುಗಳು ಮೈ ಮುದುಡಿಕೊಂಡು ಓಡಾಡುತ್ತಿದ್ದಾರೆ. ಕಳೆದವಾರ ಹದ ಮಳೆಹಾದ ಹಿನ್ನೆಲೆಯಲ್ಲಿ ಎರಡು ದಿನಗಳಿಂದ ರೈತರು ಕೃಷಿ ಚಟುವಟಿಕೆ ಯಲ್ಲಿ ತೊಡಗಿಕೊಂಡರು. ಬಹುತೇಕ ಮುಸುಕಿನ ಜೋಳವನ್ನು ಬಿತ್ತನೆ ಮಾಡುತ್ತಿದ್ದಾರೆ.
ಜಿಲ್ಲೆಯ ವಾಣಿಜ್ಯ ಬೆಳೆಯಾಗಿರುವ ಆಲೂಗಡ್ಡೆ ಬೆಳೆಯನ್ನು ಕಳೆದ ಎರಡು ದಶಕದ ಹಿಂದೆ ರೈತರು ಬೆಳೆದು ಅಧಿಕ ಲಾಭ ಗಳಿಸುತ್ತಿದ್ದರು. ಆದರೆ ಹವಾಮಾನ ಏರುಪೇರಾಗುತ್ತಿರುವ ಕಾರಣ ಇತ್ತೀಚೆಗೆ ಆಲೂಗಡ್ಡೆ ಬೆಳೆಯಲು ರೈತರು ಆಸಕ್ತಿ ತೋರುತ್ತಿಲ್ಲ. ಈ ವರ್ಷ ಕೇವಲ 50-60 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಆಲೂ ಬಿತ್ತನೆ ಮಾಡಿದ್ದಾರೆ. ಈಗಾಗಲೆ ಸುಮಾರು 3,600 ಹೆಕ್ಟೇರ್ ಪ್ರದೇಶದಲ್ಲಿ 650 ಕ್ವಿಂಟಾಲ್ ಮುಸುಕಿನ ಜೋಳ ಬಿತ್ತನೆ ಮಾಡಲಾಗಿದೆ.