Lok Sabha Election;ಹಾಸನದಲ್ಲಿ ನಾಮಪತ್ರ ಅರ್ಜಿಗೆ ಪೂಜೆ: ಪ್ರೀತಂ ಗೌಡ ಬೆಂಬಲಿಗನ ಹೊಸ ವರಸೆ
ಬಂಡಾಯದ ನಡೆ ಅಲ್ಲ, ಬಿಜೆಪಿ ಪರ ಪ್ರಚಾರ: ಕಿರಣ್ ಗೌಡ
Team Udayavani, Mar 24, 2024, 12:25 AM IST
ಹಾಸನ: ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಯಾಗಿದ್ದರೆ, ಹಾಸನ ಕ್ಷೇತ್ರದಲ್ಲಿ ಮಾತ್ರ ಗೊಂದಲ ಮುಗಿದಿಲ್ಲ. ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ, ಮಾಜಿ ಶಾಸಕ ಪ್ರೀತಂ ಗೌಡ ಅವರ ಆಪ್ತ, ಹೊಟೇಲ್ ಉದ್ಯಮಿ ಎಚ್.ಪಿ.ಕಿರಣ್ ಗೌಡ ಅವರು ಶುಕ್ರವಾರ ನಾಮಪತ್ರ ಅರ್ಜಿ ಪಡೆದಿದ್ದರು. ಶನಿವಾರ ಅದಕ್ಕೆ ಪೂಜೆ ಸಲ್ಲಿಸಿ ಪ್ರಚಾರ ಆರಂಭಿಸಿದರು. ಶನಿವಾರ ಬೆಳಗ್ಗೆ ನಗರದ ವಿವಿಧ ದೇವಾಲಯಗಳಿಗೆ ತಮ್ಮ ಬೆಂಬಲಿಗರೊಂದಿಗೆ ತೆರಳಿದ ಕಿರಣ್ ಗೌಡ, ನಾಮಪತ್ರ ಅರ್ಜಿಗೆ ಪೂಜೆ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಅವರು, ಬಿಜೆಪಿ-ಜೆಡಿಎಸ್ ಮೈತ್ರಿ ಆಗಿದ್ದರೂ ಹಾಸನ ಕ್ಷೇತ್ರದ ಅಭ್ಯರ್ಥಿ ಯಾರೆಂದು ಅಂತಿಮ ಆಗಿಲ್ಲ. ಹೀಗಾಗಿ ಟಿಕೆಟ್ ಆಕಾಂಕ್ಷಿಯಾಗಿರುವ ನಾನು, ಟಿಕೆಟ್ ಸಿಗಬಹುದು ಎಂಬ ವಿಶ್ವಾಸದಲ್ಲಿ ಪ್ರಚಾರ ಆರಂಭಿಸಿದ್ದೇನೆ ಎಂದರು.