ಪಡಿತರ ಅಕ್ಕಿ ಕಾಳಸಂತೆಯಲ್ಲಿ ಮಾರಾಟ
Team Udayavani, Feb 9, 2021, 2:47 PM IST
ಹೊಳೆನರಸೀಪುರ: ತಾಲೂಕಿನ ನ್ಯಾಯಬೆಲೆ ಅಂಗಡಿಗಳಿಗೆ ಪೂರೈಕೆ ಆಗಬೇಕಾದ ಅಕ್ಕಿಯನ್ನು ತ್ರೋರಾತ್ರಿ ಕಾಳಸಂತೆಗೆ ಕೊಂಡೊಯ್ಯಲಾಗುತ್ತಿದೆ ಎಂದು ಪಡಿತರ ಚೀಲ ಎತ್ತುವಳಿದಾರರು ಸೋಮವಾರ ಗೋದಾಮು ಮುಂದೆ ಪ್ರತಿಭಟಿಸಿದರು.
ಆಹಾರ ಮತ್ತು ನಾಗರಿಕ ನಿಗಮದ ಮಳಿಗೆಯ ವ್ಯವಸ್ಥಾಪಕ ಕೃಷ್ಣಪ್ಪ ಅವರು, ಈ ಕೃತ್ಯ ಮಾಡುತ್ತಿದ್ದಾರೆ, ಅವರ ವಿರುದ್ಧ ತಾವುಗಳು ಅನೇಕ ಬಾರಿ ಪ್ರತಿರೋಧ ವ್ಯಕ್ತಪಡಿಸಿದ್ದರೂ ಅವರು ತಮ್ಮ ಚಾಳಿ ಬಿಟ್ಟಿಲ್ಲ, ಜೊತೆಗೆ ವ್ಯವಸ್ಥಾಪಕ ಕೃಷ್ಣಪ್ಪ ಅವರಿಗೂ ನಮಗೂ ಯಾವುದೇ ಸಂಬಂಧವಿಲ್ಲ, ಆದರೂ, ತಮ್ಮನ್ನು ಅವಾಚ್ಯ ಶಬ್ದಗಳಿಂದ ನಿಧಿಸುವುದನ್ನು ಮಾಡುತ್ತಾರೆ. ಕೂಡಲೇ ಜಿಲ್ಲಾ ಆಹಾರ ನಾಗರಿಕ ಅಧಿಕಾರಿಗಳು ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.
ಪ್ರತಿಭಟನೆ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಶಿರಸ್ತೇದಾರ್ ಲೋಕೇಶ್, ಎತ್ತುವಳಿದಾರರ ದೂರನ್ನು ಆಲಿಸಿ ಗೋದಾಮಿನಲ್ಲಿ ಇರುವ ಪಡಿತರ ಅಕ್ಕಿ ಮೂಟೆಗಳ ಪರಿಶೀಲನೆ ನಡೆಸಿ, ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು.
ಎತ್ತುವಳಿದಾರರ ಪ್ರಕಾರ ತಾಲೂಕಿನಲ್ಲಿ 118 ಪಡಿತರ ಅಂಗಡಿ, 25 ಹಾಸ್ಟೇಲ್, 258 ಅಂಗನವಾಡಿ ಕೇಂದ್ರ ಇದ್ದು, ಪ್ರತಿ ತಿಂಗಳು ಪಡಿತರ ಆಹಾರ ವಿತರಣೆ ವೇಳೆ ಅಂಗಡಿಗಳಿಂದ ತಲಾ 500 ರೂ. ಹಣ, ಒಂದು ಬ್ಯಾಗ್ ಅಕ್ಕಿಮೂಟೆಯನ್ನು ವ್ಯವಸ್ಥಾಪಕ ಕೃಷ್ಣಪ್ಪ ಪಡೆಯುತ್ತಿದ್ದು, ವಸೂಲಿ ಮಾಡುವ ಅಕ್ಕಿಯನ್ನು ಕಾಳಸಂತೆಯಲ್ಲಿ ರಾತ್ರಿ ವೇಳೆ ಸಾಗಿಸುತ್ತಿದ್ದಾರೆ ಎಂದು ಆರೋಪಿಸಿದರು.
ಇದನ್ನೂ ಓದಿ :ಬೈಕ್ಗೆ ಕಾರು ಡಿಕ್ಕಿ ಹೊಡೆದು ಶಿಕ್ಷಕ ಸ್ಥಳದಲ್ಲಿಯೇ ಸಾವು
ಈ ಬಗ್ಗೆ ಕೃಷ್ಣಪ್ಪ ಅವರನ್ನು ಸಂಪರ್ಕಿಸಿದಾಗ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ, ಆದರೆ, ಶಿರಸ್ತೇದಾರ್ ಲೋಕೇಶ್ ಮಾಹಿತಿ ನೀಡಿ, ಪ್ರತಿಭಟನೆ ನಡೆಸುತ್ತಿರುವ ಎತ್ತುವಳಿದಾರರ ಆರೋಪವನ್ನು ಆಲಿಸಿ, ತನಿಖೆ ಮಾಡಿಸುವುದಾಗಿ ತಿಳಿಸಿದರು. ಎತ್ತುವಳಿದಾರರಾದ ಶಿವು, ವಸಂತ್, ಮಂಜು, ಯೋಗೇಶ್ ಮತ್ತಿತರರು ಇದ್ದರು.