ಕಾನೂನು ಸಾಕ್ಷರತಾ ರಥಕ್ಕೆ ಚಾಲನೆ
ಎಲ್ಲರಿಗೂ ಕಾನೂನು ಅರಿವು ಅಗತ್ಯ: ನ್ಯಾ. ಪೂರ್ಣಿಮಾ
Team Udayavani, Jun 7, 2019, 11:08 AM IST
ಸಕಲೇಶಪುರ ತಾಲೂಕಿನ ಬಾಗೆ ಗ್ರಾಮದಲ್ಲಿ ಕಾನೂನು ಸಾಕ್ಷರತಾ ರಥದೊಂದಿಗೆ ತಾಲೂಕು ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಸಕಲೇಶಪುರ: ಜನ ಸಾಮಾನ್ಯರ ಮನೆ ಬಾಗಿಲಿಗೆ ಹೋಗಿ ಕಾನೂನಿನ ಬಗ್ಗೆ ತಿಳಿವಳಿಕೆ ಮೂಡಿಸುವುವ ನಿಟ್ಟಿನಲ್ಲಿ ಕಾನೂನು ಸಾಕ್ಷರತಾ ರಥ ಕಾರ್ಯನಿರ್ವಹಿಸುತ್ತಿದೆ ಎಂದು ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷೆ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶೆ ಪೂರ್ಣಿಮಾ ಎನ್. ಪೈ ಹೇಳಿದರು.
ತಾಲೂಕಿನ ಬಾಗೆ ಗ್ರಾಮದಲ್ಲಿ ಕಾನೂನು ಸಾಕ್ಷರತಾ ರಥದೊಂದಿಗೆ ತಾಲೂಕು ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಆಯೋಜಿಸಲಾಗಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಬಹುತೇಕ ಜನರಿಗೆ ಕಾನೂನಿನ ಬಗ್ಗೆ ಅರಿವು ಕಡಿಮೆ ಇದೆ. ಸಣ್ಣ ಪುಟ್ಟ ಪ್ರಕರಣಗಳಿಗೆ ದೂರು ದಾಖಲಿಸಿದರೆ ವಿನಾಕಾರಣ ನ್ಯಾಯಾಲಯಕ್ಕೆ ಅಲೆದಾಡ ಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಲೋಕ ಅದಾಲತ್ ಮುಖಾಂತರ ಪ್ರಕರಣಗಳನ್ನು ರಾಜಿ ಸಂಧಾನದ ಮುಖಾಂತರ ಬಗೆಹರಿಸಿಕೊಳ್ಳುವ ಬಗ್ಗೆ ಗ್ರಾಮಾಂತರ ಪ್ರದೇಶಗಳಲ್ಲಿ ಸಂಚಾರಿ ರಥ ಅರಿವು ಮೂಡಿಸುತ್ತಿದೆ ಎಂದರು.
ಹಿರಿಯ ನ್ಯಾಯಾಲಯದಲ್ಲಿ ಸುಮಾರು 950 ಪ್ರಕರಣಗಳು ಹಾಗೂ ಕಿರಿಯ ನ್ಯಾಯಾಲಯದಲ್ಲಿ ಸುಮಾರು 2ಸಾವಿರ ಪ್ರಕರಣಗಳು ಬಾಕಿಯಿದ್ದು ಇನ್ನೊಂದು ವರ್ಷದ ಒಳಗೆ ಎಲ್ಲಾ ಪ್ರಕರಣಗಳನ್ನು ಬಗೆಹರಿಸಲಾಗುವುದು ಎಂದು ಹೇರು.
ಈ ಸಂದರ್ಭದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಕಾರ್ಯದರ್ಶಿ ಹಾಗೂ ಸಿವಿಲ್ ನ್ಯಾಯಾಧೀಶ ನಾಗೇಶ್ ಪಾಟೀಲ್, ಹೆಚ್ಚುವರಿ ಸಿವಿಲ್ ನ್ಯಾಯಧೀಶ ಹರೀಶ್ ಜಾಧವ್, ವಕೀಲರ ಸಂಘದ ಅಧ್ಯಕ್ಷ ಯಶ್ವಂತ್, ಕಾರ್ಯದರ್ಶಿ ಜ್ಯೋತಿ,ವಕೀಲ ಷಣ್ಮುಖ, ಪಾರ್ವತಿ ಮತ್ತಿತರರು ಹಾಜರಿದ್ದರು.