ಮಂಗನ ಕಾಯಿಲೆಗೆ ನಿರ್ದಿಷ್ಟ ಔಷಧಿ ಇಲ್ಲ
Team Udayavani, Feb 12, 2019, 7:25 AM IST
ರಾಮನಾಥಪುರ: ಮಂಗನ ಕಾಯಿಲೆಗೆ ಲಸಿಕೆ ಹೊರತುಪಡಿಸಿ ನಿರ್ದಿಷ್ಟವಾದ ಔಷಧಿ ಇಲ್ಲ ಎಂದು ಕೊಣನೂರು ಸಮುದಾಯ ಆರೋಗ್ಯ ಕೇಂದ್ರದ ಆರೋಗ್ಯ ನಿರೀಕ್ಷಕ ಎಂ.ಆರ್. ಆನಂದಗೌಡ ತಿಳಿಸಿದರು.
ಕೊಣನೂರು ಸಮುದಾಯ ಆರೋಗ್ಯ ಕೇಂದ್ರದಲ್ಲಿ ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡಿದ್ದ ಮಾಹಿತಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಈ ಕಾಯಿಲೆಯು ಒಂದು ಕಡೆಯಿಂದ ಇನ್ನೊಂದು ಕಡೆಗೆ ಉಣ್ಣೆಗಳ ಮೂಲಕ ಹರಡುವುದರಿಂದ ಇಂತ ಹುದೇ ನಿರ್ದಿಷ್ಟ ಸ್ಥಳದಲ್ಲಿ ಕಾಯಿಲೆ ಬರುತ್ತದೆ ಎಂದು ಹೇಳಲಾಗದು. ಆದ್ದರಿಂದ ಚುಚ್ಚು ಮದ್ದನ್ನು ಹಾಕಿಸಿಕೊಳ್ಳಬೇಕು ಎಂದರು.
ಕ್ಯಾಸನೂರಿನಲ್ಲಿ ಪತ್ತೆ: ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಕ್ಯಾಸನೂರು ಕಾಡಿನಲ್ಲಿ ಮಂಗನ ಕಾಯಿಲೆ ಪತ್ತೆಯಾದುದರಿಂದ ಈ ರೋಗಕ್ಕೆ ಕ್ಯಾಸನೂರು ಕಾಡಿನ ಕಾಯಿಲೆ ಅಥವಾ ಮಂಗನ ಕಾಯಿಲೆ ಎನ್ನುತ್ತಾರೆ. ಇದು ಕಾಡಿನಲ್ಲಿರುವ ಸೋಂಕು ಪೀಡಿತ ಉಣ್ಣೆಗಳು ಕಚ್ಚುವುದರಿಂದ ಮಾತ್ರ ಬರುತ್ತದೆ ಎಂದರು.
ರೋಗದ ಲಕ್ಷಣಗಳು: ಈ ಕಾಯಿಲೆ ಮನುಷ್ಯ ರಿಂದ ಮನುಷ್ಯರಿಗೆ ಹರಡುವುದಿಲ್ಲ. ಕಾಡಿನಲ್ಲಿ ಮಂಗಗಳು ಸಾಯುವುದೇ ಈ ಕಾಯಿಲೆಯ ಮುನ್ಸೂಚನೆಯಾಗಿದೆ. ಈ ರೋಗದ ಮುಖ್ಯ ಲಕ್ಷಣಗಳೆಂದರೆ ಸತತ ಎಂಟರಿಂದ ಹತ್ತು ದಿನಗಳವರೆಗೆ ಬಿಡದೇ ಜ್ವರ ಬರುವುದು.
ವಿಪರೀತ ತಲೆನೋವು, ಸೊಂಟ ನೋವು, ಕೈಕಾಲು ನೋವು, ನಿಶ್ಯಕ್ತಿ, ಕಣ್ಣು ಕೆಂಪಾಗು ವುದು, ಜ್ವರ ಬಂದ 2 ವಾರಗಳ ನಂತರ ಮೂಗು, ಬಾಯಿ ಹಾಗೂ ಗುದದ್ವಾರ ದಿಂದ ರಕ್ತಸ್ರಾವವಾಗುವುದು, ಸನ್ನಿವಾತ ಅಥವಾ ಮೆದುಳಿನ ಹೊದಿಕೆಯ ಜ್ವರ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ ಎಂದರು.
ಈ ಕಾಯಿಲೆ ಬರದಂತೆ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳೆಂದರೆ ವಾಸಸ್ಥಳದ ಸುತ್ತಮುತ್ತ ಮಂಗ ಸತ್ತಿರುವುದು ಕಂಡೊಡನೆ ಸ್ಥಳೀಯ ಆರೋಗ್ಯಾಧಿಕಾರಿಗಳಿಗೆ ತಿಳಿಸಬೇಕು. ಮಂಗಗಳು ಮೃತಪಟ್ಟಿರುವ ಕಾಡಿನಲ್ಲಿ ಸಂಚರಿಸುವಾಗ ಮೈತುಂಬಾ ಬಟ್ಟೆ ಧರಿಸಿ ಆರೋಗ್ಯ ಇಲಾಖೆಯಿಂದ ವಿತರಿಸಲಾಗುವ ಡಿಎಂಪಿ ತೈಲವನ್ನು ಕೈಕಾಲುಗಳಿಗೆ ಲೇಪಿಸಿ ಕೊಂಡು ಹೋಗಬೇಕು ಮತ್ತು ಕಾಡಿನಿಂದ ಬಂದ ನಂತರ ಸೋಪು ಹಚ್ಚಿ ಬಿಸಿನೀರಿನಿಂದ ಸ್ನಾನ ಮಾಡಬೇಕು ಎಂದು ಸಲಹೆ ನೀಡಿದರು.
ಲಸಿಕೆ ಹಾಕಿಸಿ: ಮಂಗನ ಕಾಯಿಲೆಗೆ ಲಸಿಕೆ ಲಭ್ಯವಿದೆ, ಈ ಲಸಿಕೆಯಿಂದ ಯಾವುದೇ ದುಷ್ಪರಿಣಾಮ ಇರುವುದಿಲ್ಲ. ಈ ಲಸಿಕೆಯನ್ನು ಆರೋಗ್ಯವಂತ ವ್ಯಕ್ತಿ ಸರಿಯಾದ ಪ್ರಮಾಣದಲ್ಲಿ ಆಗಸ್ಟ್ ಮಾಹೆಯಲ್ಲಿ ಮೊದಲ ಮತ್ತು ಒಂದು ತಿಂಗಳ ಅಂತರದಲ್ಲಿ 2ನೇ ಬಾರಿ ಲಸಿಕೆ ಪಡೆಯಬೇಕು. 2ನೇ ಸುತ್ತಿನ ಚುಚ್ಚುಮದ್ದು ಹಾಕಿಸಿ ಕೊಂಡ ನಂತರ ರೋಗ ನಿರೋಧಕ ಶಕ್ತಿ ಬರುತ್ತದೆ. ಗರ್ಭಿಣಿಯರು ಈ ಚುಚ್ಚು ಮದ್ದು ಹಾಕಿಸಿಕೊಳ್ಳಬಾರದು ಎಂದರು.
ಕುಷ್ಠರೋಗ ಚಿಕಿತ್ಸೆ ಪಡೆಯಿರಿ: ಕುಷ್ಠರೋಗವು ಮೈಕ್ರೋಬ್ಯಾಕ್ಟೀರಿಯಂಲೆಪ್ರ ಎಂಬ ಒಂದು ಸೂಕ್ಷ್ಮ ರೋಗಾಣುವಿನಿಂದ ಬರುತ್ತದೆ. ರೋಗ ಪೀಡಿತ ವ್ಯಕ್ತಿಯು ಉಗುಳಿದಾಗ ಹಾಗೂ ಸೀನಿದಾಗ ಅವನಲ್ಲಿರುವ ರೋಗಾಣುಗಳು ಗಾಳಿಯ ಮುಖಾಂತರ ಆರೋಗ್ಯವಂತನ ಶರೀರದಲ್ಲಿ ಪ್ರವೇಶಿಸುತ್ತವೆ ಈ ಕಾಯಿಲೆಗೆ ದೊರಕುವ ಬಹು ಔಷಧಿ ಚಿಕಿತ್ಸೆ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ದೊರೆಯುತ್ತವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ಆರೋಗ್ಯ ಸಹಾ ಯಕ ಜವರೇಗೌಡ, ಶುಶ್ರೂಷಕಿ ನೇತ್ರಾವತಿ, ದಿವ್ಯಾ, ಭವ್ಯಾ, ಕಲಾವತಿ, ಸಾರ್ವಜನಿಕರು, ಆಸ್ಪತ್ರೆಯ ಸಿಬ್ಬಂದಿ ಉಪಸ್ಥಿತರಿದ್ದರು.