ಕಾಗಿನೆಲೆ ಗ್ರಾಪಂ ಅಧ್ಯಕ್ಷೆ ಗುತ್ತೆವ್ವ ಗುಡಿಸಲಿಗೆ ಸಭಾಪತಿ ಬಸವರಾಜ ಹೊರಟ್ಟಿ ಭೇಟಿ
Team Udayavani, Sep 19, 2021, 8:16 PM IST
ಬ್ಯಾಡಗಿ: ತಾಲೂಕಿನ ಕಾಗಿನೆಲೆ ಗ್ರಾಮಕ್ಕೆ ಭೇಟಿ ನೀಡಿದ್ದ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಗ್ರಾಪಂ ಅಧ್ಯಕ್ಷೆ ಗುತ್ತೆವ್ವ ನಾಗರಾಜ ದುರಗಮುರಗಿ ಅವರ ಗುಡಿಸಲಿಗೆ ಭೇಟಿ ನೀಡಿ ಅಚ್ಚರಿ ಮೂಡಿಸಿದರು.
ಕಳೆದ ಗ್ರಾಪಂ ಚುನಾವಣೆಯಲ್ಲಿ ಕಾಗಿನೆಲೆ ಗ್ರಾಪಂನ 4ನೇ ವಾರ್ಡ್ನಿಂದ ಸ್ಪರ್ಧಿಸಿ ಜಯ ಗಳಿಸಿ ನಂತರ ಅಧ್ಯಕ್ಷ ಸ್ಥಾನದ ಮೀಸಲಾತಿ ಮೂಲಕ ಮೊದಲ ಬಾರಿಗೆ ಕಾಗಿನೆಲೆ ಗ್ರಾಪಂ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದರು. ಈ ಕುರಿತು ಮಾಹಿತಿ ಪಡೆದ ಹೊರಟ್ಟಿ ಅವರು, ಕಾಗಿನೆಲೆಯಿಂದ ತೆರಳುವ ಮಾರ್ಗಮಧ್ಯೆ ರಸ್ತೆ ಪಕ್ಕದಲ್ಲೇ ಇರುವ ಗ್ರಾಪಂ ಅಧ್ಯಕ್ಷೆ ಗುತ್ತೆವ್ವ ಅವರ ಗುಡಿಸಲಿಗೆ ಭೇಟಿ ನೀಡಿ ಕೆಲಕಾಲ ಚರ್ಚೆ ನಡೆಸಿದರು.
ನಂತರ ದುರಗಮುರಗಿ ವೃತ್ತಿಯ ಡೋಲು ಬಾರಿಸುವಂತೆ ಗುತ್ತೆವ್ವ ಅವರಲ್ಲಿ ಕೇಳಿಕೊಂಡರು. ಸಭಾಪತಿಗಳ ಆಶಯದಂತೆ ಗುತ್ತೆವ್ವ ಡೋಲು ಬಾರಿಸಿದರು. ಕಾಗಿನೆಲೆ ವ್ಯಾಪ್ತಿಯ ಗ್ರಾಪಂನಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುವಂತೆ ಅಧ್ಯಕ್ಷೆ ಗುತ್ತೆವ್ವ ಅವರಿಗೆ ಹೊರಟ್ಟಿ ಸಲಹೆ ನೀಡಿದರು.