ಪ್ರವಾಸಿ ತಾಣವಾಗಿ ದೊಡ್ಡಕೆರೆ ಅಭಿವೃದ್ಧಿ: ಕೋಳಿವಾಡ
Team Udayavani, Oct 23, 2019, 9:56 AM IST
ರಾಣಿಬೆನ್ನೂರ: ಜನರ ಜೀವನಾಡಿಯಾಗಿರುವ ಸುಮಾರು 6 ಸಾವಿರ ಎಕರೆ ವಿಸ್ತಾರವುಳ್ಳ ನಗರದ ದೊಡ್ಡಕೆರೆಯನ್ನು ಹೂಳೆತ್ತುವುದರ ಜತೆಗೆ ಸುಂದರ ಪ್ರವಾಸಿ ತಾಣವನ್ನಾಗಿ ಮಾಡಲು ಈಗಾಗಲೇ ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದು ವಿಧಾನಸಭಾ ಮಾಜಿ ಅಧ್ಯಕ್ಷ ಕೆ.ಬಿ.ಕೋಳಿವಾಡ ಹೇಳಿದರು.
ಮಂಗಳವಾರ ನಗರದ ದೊಡ್ಡಕೆರೆ ತುಂಬಿ ಕೋಡಿ ಬಿದ್ದು ನೀರು ಹರಿದ ಹಿನ್ನೆಲೆಯಲ್ಲಿ ಕೆರೆಗೆ ಬಾಗಿನ ಅರ್ಪಿಸಿ ಮಾತನಾಡಿದ ಅವರು, ದೊಡ್ಡಕೆರೆಯನ್ನು ಸಂಪೂರ್ಣವಾಗಿ ಸೌಂದಯೀಕರಣದೊಂದಿಗೆ ಪ್ರೇಕ್ಷಣೀಯ ಹಾಗೂ ವಾಯುವಿಹಾರ ಸ್ಥಳವನ್ನಾಗಿಸಲು 29.30 ಕೋಟಿ ರೂ. ಹಾಗೂ ಈ ಕೆರೆ ಸೇರಿದಂತೆ ಚಳಗೇರಿ, ಹುಣಸಿಕಟ್ಟಿ ಮತ್ತಿತರ ತಾಲೂಕಿನ ಕೆರೆಗಳಿಗೆ ತುಂಗಭದ್ರ ನದಿಯಿಂದ ನೀರು ತುಂಬಿಸಲು ಅಂದಾಜು 100 ಕೋಟಿ ರೂ. ಮಂಜೂರು ಮಾಡಲು ಶ್ರಮಿಸಿದ್ದೇನೆ ಎಂದರು.
ಪ್ರಸ್ತುತ ಮಳೆ ನೀರಿನಿಂದ ಕೆರೆಯ ಒಡಲು ತುಂಬಿ ಕೋಡಿ ಬಿದ್ದು ಹರಿಯುತ್ತಿರುವುದು ಸಂತಸ ತಂದಿದೆ. ಇದರಿಂದ ಬೇಸಿಗೆ ಕಾಲದಲ್ಲಿ ಪ್ರಾಣಿ ಪಕ್ಷಿ ಮತ್ತು ನಾಗರಿಕರಿಗೆ ಬಹಳಷ್ಟು ಅನುಕೂಲವಾಗಲಿದೆ. ಇದನ್ನು ಸರ್ವರೂ ಸಂರಕ್ಷಿಸಲು ಮುಂದಾಗಬೇಕು. ಕೆರೆಯ ದಂಡೆಯ ಮೇಲೆ ಮರ ಗಿಡಗಳನ್ನು ಬೆಳೆಸಲು ಎಲ್ಲರೂ ಶ್ರಮಿಸಬೇಕಿದೆ ಎಂದರು.
ನಗರಸಭೆ ಸದಸ್ಯರಾದ ಶಶಿಧರ ಬಸೇನಾಯ್ಕ, ಜಯಶ್ರೀ ಪಿಸೆ, ತಾಪಂ ಸದಸ್ಯೆ ಚೈತ್ರಾ ಮಾಗನೂರು, ಬಸವರಾಜ ಹುಚ್ಚಗೊಂಡರ. ಶೇರುಖಾನ್ ಖಾಬೂಲಿ, ಪ್ರಕಾಶ ಜೈನ, ಸಣ್ಣತಮ್ಮಪ್ಪ ಬಾರ್ಕಿ, ಮಂಜುನಾಥ ಗುಂಟೂರು, ಮಧು ಕೋಳಿವಾಡ, ಪುಟ್ಟಪ್ಪ ಮರಿಯಮ್ಮನವರ, ರಾಜಣ್ಣ ಮೋಟಗಿ ಸೇರಿದಂತೆ ಮತ್ತಿತರು ಇದ್ದರು.