ತಗ್ಗಿದ ವರುಣಾರ್ಭಟ-ತಪ್ಪದ ಪರದಾಟ
ರೈತರ ಬೆಳೆ ನಾಶವಾಗಿ ಕೈಗೆ ಬಂದ ತುತ್ತು ಬಾಯಿಗೆ ಬರದ ಸ್ಥಿತಿ-ಮನೆ ಕಳೆದುಕೊಂಡು ಬೀದಿಗೆ ಬಿದ್ದ ನೂರಾರು ಕುಟುಂಬಗಳು
Team Udayavani, May 22, 2022, 3:39 PM IST
ಹಾವೇರಿ: ಕಳೆದ ಮೂರು ದಿನಗಳಿಂದ ನಿರಂತರವಾಗಿ ಸುರಿಯುತ್ತಿದ್ದ ಮಳೆ ಶನಿವಾರ ಬಿಡುವು ನೀಡಿದೆ. ಒಂದೆರಡು ಬಾರಿ ತುಂತುರು ಮಳೆಯಾಗಿದ್ದು, ದಿನವಿಡೀ ಮೋಡ ಕವಿದ ವಾತಾವರಣ ನಿರ್ಮಾಣಗಿದ್ದರಿಂದ ಚಳಿ, ಗಾಳಿ ಬೀಸುತ್ತಿದೆ.
ಪ್ರತಿ ವರ್ಷ ಏಪ್ರಿಲ್, ಮೇ ತಿಂಗಳಲ್ಲಿ ಬಿರು ಬೇಸಿಗೆಯಲ್ಲಿ ಸೆಕೆಯಿಂದ ಕಂಗೆಡುತ್ತಿದ್ದ ಜನತೆ ಈ ಬಾರಿ ಮಳೆಯಿಂದ ಸಮಸ್ಯೆ ಎದುರಿಸುವಂತಾಯಿತು. ಇತ್ತೀಚಿನ ವರ್ಷಗಳಲ್ಲಿ ಮೇ ತಿಂಗಳಲ್ಲಿ ಈ ರೀತಿ ನಿರಂತರ ಮಳೆ ಬಿದ್ದ ಉದಾಹರಣೆಯಿಲ್ಲ. ಒಂದೆರಡು ಮುಂಗಾರು ಪೂರ್ವ ಮಳೆಯಾಗಿ ಹೋಗುತ್ತಿತ್ತು. ಆದರೆ, ಕಳೆದ ಒಂದು ವಾರದಿಂದ ಈಚೆಗೆ ಬಿದ್ದ ಮಳೆ ಜನರನ್ನು ಹೈರಾಣಾಗಿಸಿದೆ. ಅದರಲ್ಲೂ ರೈತರ ಬೆಳೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದ್ದು, ನೂರಾರು ಬಡ ಕುಟುಂಬಗಳು ಮನೆ ಕಳೆದುಕೊಂಡು ಬೀದಿಗೆ ಬೀಳುವಂತಾಗಿದೆ.
976 ಮನೆ ಹಾನಿ: ಜಿಲ್ಲೆಯಲ್ಲಿ ಕಳೆದ ಏಪ್ರಿಲ್ನಿಂದ ಇಲ್ಲಿಯವರೆಗೆ 968 ಮನೆಗಳು ಭಾಗಶಃ ಹಾಗೂ 8 ಮನೆಗಳು ಪೂರ್ತಿ ಬಿದ್ದು ಹಾನಿಯಾಗಿವೆ. ಈ ಪೈಕಿ 579 ಮನೆಗಳಿಗೆ ಕಳೆದ ಒಂದು ವಾರದಲ್ಲಿ ಬಿದ್ದ ಮಳೆಯಿಂದ ಹಾನಿಯಾಗಿದೆ. ಹಾವೇರಿ ತಾಲೂಕಿನ 247, ರಾಣಿಬೆನ್ನೂರು 176, ಬ್ಯಾಡಗಿ 122, ಹಿರೇಕೆರೂರು 22, ರಟ್ಟಿàಹಳ್ಳಿ 61, ಸವಣೂರು 213, ಶಿಗ್ಗಾವಿ 45 ಹಾಗೂ ಹಾನಗಲ್ಲ ತಾಲೂಕಿನಲ್ಲಿ 82 ಮನೆಗಳಿಗೆ ಹಾನಿಯಾಗಿದೆ.
ಬ್ಯಾಡಗಿ ತಾಲೂಕಿನಲ್ಲಿ 4, ಶಿಗ್ಗಾವಿ 2, ಹಿರೇಕೆರೂರು ಮತ್ತು ರಟ್ಟಿàಹಳ್ಳಿಯಲ್ಲಿ ತಲಾ ಒಂದು ಮನೆಗಳು ಪೂರ್ಣ ಬಿದ್ದು ಹಾಳಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಮುಂಗಾರು ಮಳೆ ಶುರುವಾಗಲಿದ್ದು, ಈ ಸಂದರ್ಭದಲ್ಲಿ ಮನೆ ಕಳೆದುಕೊಂಡವರು ತೀವ್ರ ಸಮಸ್ಯೆ ಎದುರಿಸುವಂತಾಗಿದೆ.
ಮಳೆಯಿಂದಾಗಿ 481 ಹೆಕ್ಟೇರ್ ಕೃಷಿ ಬೆಳೆ ಹಾಗೂ 278 ಹೆಕ್ಟೇರ್ ತೋಟಗಾರಿಕಾ ಬೆಳೆ ಹಾನಿಯಾಗಿದೆ. ರಾಣಿಬೆನ್ನೂರು ತಾಲೂಕಿನಲ್ಲಿ 352 ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಬೆಳೆ ಹಾನಿಯಾಗಿದೆ. ಒಂದು ವಾರದಲ್ಲಿ ಕೃಷಿ, ತೋಟಗಾರಿಕೆ ಸೇರಿದಂತೆ 563 ಹೆಕ್ಟೇರ್ ಬೆಳೆ ಹಾನಿಯಾಗಿದೆ. ಹೊಲಗಳಲ್ಲಿ ರಾಶಿ ಹಾಕಿಟ್ಟಿದ್ದ ಜೋಳ, ಭತ್ತ ನೀರಿಗೆ ಸಿಲುಕಿ ಹಾಳಾಗಿವೆ.
ಮಳೆಯಿಂದ ರಸ್ತೆಗಳು ಹಾಳು: ಈ ಮೊದಲೇ ಹಾಳಾಗಿ ಗುಂಡಿ ಬಿದ್ದಿದ್ದ ರಸ್ತೆಗಳು ನಿರಂತರ ಮಳೆಗೆ ಮತ್ತಷ್ಟು ಹದಗೆಟ್ಟಿವೆ. ಅದರಲ್ಲೂ ಗ್ರಾಮೀಣ ಭಾಗದಲ್ಲಿ ಯಾವ ರಸ್ತೆಗಳ ಸ್ಥಿತಿಯಂತೂ ನೋಡುವಂತೆಯೇ ಇಲ್ಲ. ದೊಡ್ಡ ಗುಂಡಿಗಳಲ್ಲಿ ನೀರು ನಿಂತು ವಾಹನ ಸಂಚಾರವೇ ಬೇಡ ಎಂಬ ಸ್ಥಿತಿಗೆ ಬಂದಿವೆ. ನಗರ ಪ್ರದೇಶಗಳ ರಸ್ತೆಗಳ ಸ್ಥಿತಿಯೂ ಇದರಿಂದ ಹೊರತಾಗಿಲ್ಲ. ಚರಂಡಿ ನೀರು ರಸ್ತೆ ಮೇಲೆ ಹರಿದು ಡಾಂಬರು ಕಿತ್ತುಹೋಗಿವೆ.
ಮೇ ತಿಂಗಳಲ್ಲೇ ಕೆರೆ-ಕಟ್ಟೆಗಳು ಭರ್ತಿಯಾಗಿರುವುದು ದಾಖಲೆಯ ಸಂಗತಿಯಾಗಿದೆ. ಬಹುತೇಕ ಎಲ್ಲ ಕೆರೆಗಳು ತುಂಬಿವೆ. ಬತ್ತಿ ಹೋಗಿದ್ದ ವರದಾ ನದಿ ತುಂಬಿ ಹರಿಯುತ್ತಿದೆ. ಇದರಿಂದ ಈ ಸಲದ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತಾಗಿದೆ.