ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ತಹಶೀಲ್ದಾರ್ಗೆ ಮನವಿ
Team Udayavani, Nov 2, 2019, 12:03 PM IST
ಹಿರೇಕೆರೂರ: ದೇವಸ್ಥಾನಗಳಿಗೆ ತಸ್ತಿಕ ನಿಗದಿ ಪಡಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿ ಹಿರೇಕೆರೂರ-ರಟ್ಟಿಹಳ್ಳಿ ತಾಲೂಕು ಅರ್ಚಕರ ಹಾಗೂ ಪೂಜಾರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಹಿರೇಕೆರೂರ-ರಟ್ಟಿಹಳ್ಳಿ ತಾಲೂಕಿಗೆ ಒಳಪಡುವ 221 ದೇವಸ್ಥಾನಗಳಲ್ಲಿ 86 ದೇವಸ್ಥಾನಗಳು ತಸ್ತಿಕ ಪಡೆಯುತ್ತಿವೆ. ಇನ್ನು 100 ದೇವಸ್ಥಾನಗಳು ವರ್ಷಾಸನ ಪಡೆಯುತ್ತಿವೆ. ಇನ್ನುಳಿದ 25 ದೇವಸ್ಥಾನಗಳು ತಸ್ತಿಕ ಹಾಗೂ ವರ್ಷಾಸನ ನಿಗದಿಯಾಗಿರುವುದಿಲ್ಲ. ಕೂಡಲೇ ಇವುಗಳಿಗೆ ತಸ್ತಿಕ ಹಾಗೂ ವರ್ಷಾಸನ ನಿಗದಿಮಾಡಬೇಕು.
ಮುಜರಾಯಿ ದೇವಸ್ಥಾನಗಳಿಗೆ ಒಳಪಟ್ಟ ಅರ್ಚಕರು ದೇವಸ್ಥಾನಗಳಲ್ಲಿ ಹಬ್ಬ, ಹುಣ್ಣಿಮೆ, ಅಮವಾಸೆ, ಹಾಗೂ ವಿಶೇಷ ಸಂದರ್ಭದಲ್ಲಿ ವಿಶೇಷ ಪೂಜಾ ವಿಧಿವಿಧಾನ ಹಾಗೂ ದೇವಾಲಯಗಳ ಸ್ವಚ್ಛತೆಯ ಬಗ್ಗೆ ಚಾಚು ತಪ್ಪದೆ ಕಾರ್ಯ ನಿರ್ವಹಿಸುತ್ತಿದ್ದೇವೆ. ಆದರೂ ತಾಲೂಕಿನ ಅರ್ಚಕರ ಹಾಗೂ ಪೂಜಾರರು ಹಲವಾರು ತೊಂದರೆಗಳನ್ನು ಅನುಭವಿಸುತ್ತಿದ್ದು, ಇವುಗಳಿಂದ ಕೂಡಲೇ ಮುಕ್ತಿ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಹಿರೇಕೆರೂರು ತಾಲೂಕು ಘಟಕದ ಅಧ್ಯಕ್ಷ ಪರಮೇಶಪ್ಪ ಹೂಗಾರ, ವಿಜಯ ಪೂಜಾರ, ಶಿದ್ಲಿಂಗಪ್ಪ ಪೂಜಾರ, ಮಾರುತೆಪ್ಪ ದಾಸರ, ಗಿರೀಶ್ ನಾಡಗೇರ, ಗೋಪಾಲ ದ್ಯಾವಕ್ಕಳವರ, ಇಮಾಮಸಾಬ ಎಲದಳ್ಳಿ, ಗುರುಚಾರಿ ಬಡಿಗೇರ, ಜಗದೀಶ ಪೂಜಾರ, ದೇವೆಂದ್ರಪ್ಪ ಪೂಜಾರ, ಈರಣ್ಣ ಕಾಲ್ವಿಹಳ್ಳಿ, ನಾಗಪ್ಪ ಪೂಜಾರ, ಈರಣ್ಣ ಬಡಿಗೇರ, ದಯಾನಂದ ಹಿರೇಮಠ, ಶ್ರೀಕಾಂತ ಬಡಿಗೇರ, ಗಂಗಾಧರ ಪೂಜಾರ, ಈರಪ್ಪ ಪೂಜಾರ ಇತರರಿದ್ದರು.