ಬೇಡಿಕೆ ಈಡೇರಿಕೆಗೆ ಖಾಸಗಿ ಐಟಿಐ ಆಡಳಿತ ಮಂಡಳಿ ಆಗ್ರಹ
ರಾಜ್ಯ ಸಂಘದಿಂದ ಹುಬ್ಬಳ್ಳಿಯಿಂದ ಬೆಂಗಳೂರವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದರು.
Team Udayavani, Mar 5, 2022, 6:21 PM IST
ರಾಣಿಬೆನ್ನೂರ: ವಿದ್ಯಾರ್ಥಿ ಕೇಂದ್ರೀಕೃತ ಅನುದಾನವನ್ನು ರದ್ದುಪಡಿಸಿ ಹಳೇ ಅನುದಾನ ಸಂಹಿತೆಯಂತೆ ಸಿಬ್ಬಂದಿ ವೇತನಕ್ಕೆ ಅನುದಾನ ನೀಡಬೇಕೆಂದು ಒತ್ತಾಯಿಸಿ, ರಾಜ್ಯ ಖಾಸಗಿ ಐಟಿಐ ಆಡಳಿತ ಮಂಡಳಿಗಳ ಸಂಘ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಹಮ್ಮಿಕೊಂಡಿರುವ ಪಾದಯಾತ್ರೆ ಶುಕ್ರವಾರ ರಾಣಿಬೆನ್ನೂರ ನಗರಕ್ಕೆ ಆಗಮಿಸಿತ್ತು.
ಈ ವೇಳೆ ಶಿಕ್ಷಕರ ಹಾಗೂ ಪದವೀಧರ ಘಟಕದ ರಾಜ್ಯಾಧ್ಯಕ್ಷ ಡಾ| ಆರ್.ಎಂ. ಕುಬೇರಪ್ಪ ಅವರು ಇಲ್ಲಿನ ಪಾದಯಾತ್ರೆಗೆ ಚಾಲನೆ ನೀಡಿ ಮಾತನಾಡಿ, 2010ರಲ್ಲಿ ರಾಜ್ಯ ಸರಕಾರ ಜಾರಿಗೊಳಿಸಿರುವ ವಿದ್ಯಾರ್ಥಿ ಕೇಂದ್ರೀಕೃತ ಅನುದಾನವನ್ನು ರದ್ದುಪಡಿಸಿ 1997ರ ಅನುದಾನ ಸಂಹಿತೆಯಂತೆ ಸಿಬ್ಬಂ ದಿ ವೇತನಕ್ಕೆ ಅನುದಾನ ನೀಡಬೇಕೆಂದು ಆಗ್ರಹಿಸಿದರು.
ರಾಜ್ಯದ ವಿವಿಧ ಖಾಸಗಿ ಐಟಿಐ ಆಡಳಿತ ಮಂಡಳಿಗಳು ಕಳೆದ ಒಂದು ದಶಕದಿಂದೀಚೆಗೆ ಸರಕಾರದ ಮೇಲೆ ಒತ್ತಡ ತರಲು ಅನೇಕ ಹೋರಾಟಗಳನ್ನು ನಡೆಸುತ್ತಿದ್ದರೂ ಸರಕಾರ ಸ್ಪಂದಿಸುತ್ತಿಲ್ಲ. ಸರಕಾರದ ಗಮನ ಸೆಳೆಯಲು ಹಾಗೂ ಸೂಕ್ತ ಕ್ರಮಕ್ಕೆ ಆಗ್ರಹಿಸಿ ರಾಜ್ಯ ಸಂಘದಿಂದ ಹುಬ್ಬಳ್ಳಿಯಿಂದ ಬೆಂಗಳೂರವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದರು.
ಸರಕಾರ ರೂಪಿಸುತ್ತಿರುವ ನಿಯಮಾವಳಿಗಳನ್ನು ನೋಡುವುದಾದರೆ ಒತ್ತಾಯಪೂರ್ವಕವಾಗಿ ಖಾಸಗಿ ಐಟಿಐಗಳನ್ನು ಮುಚ್ಚಿಸುವ ಹುನ್ನಾರ ನಡೆದಿದೆ. ಸಂಯೋಜನೆ ಹೊಂದಿ 10 ರಿಂದ 18 ವರ್ಷಗಳಾದರೂ ಸರಕಾರ ಯಾವುದೇ ರೀತಿಯ ಸಹಾಯಧನ ನೀಡಿಲ್ಲ. ಇದರಿಂದ ಐಟಿಐ ಸಿಬ್ಬಂಧಿ ಜೀವನ ಅಧೋಗತಿಯಾಗಿದೆ ಎಂದರು.
ಸಂಘದ ರಾಜ್ಯಾಧ್ಯಕ್ಷ ಮಂಜುನಾಥ, ಅದವೇಶ ಇಟಗಿ, ಡಾ| ನಾರಾಯಣಪ್ಪ, ವೀರೇಶ ಬಣಕಾರ, ಎ.ಬಿ. ಚಿನ್ನಪ್ಪನವರ, ಲೋಹಿತ್ ಕುಂಬಾರ, ಎನ್ .ಡಿ. ಛತ್ರದ, ಪಿ.ಇ.ಆರಾಧ್ಯಮಠ, ಮಂಜುನಾಥ ತಳವಾರ, ಸುಭಾಸ್ ಗೊಲ್ಲರ ಸೇರಿದಂತೆ ಹಾವೇರಿ ಜಿಲ್ಲೆಯ ವಿವಿಧ ತಾಲೂಕುಗಳ ಖಾಸಗಿ ಐಟಿಐ ಮಂಡಳಿಗಳ ಪದಾಧಿಕಾರಿಗಳು ಮತ್ತು ಉಪನ್ಯಾಸಕರು ಇದ್ದರು.