ಮದ್ಯದಂಗಡಿಯಿಂದ ಬಿತ್ತನೆ ಕಾರ್ಯಕ್ಕೆ ತೊಂದರೆ
ಎಲ್ಲೆಲ್ಲೂ ಮಾಕನೂರು ಕ್ರಾಸ್ ಹತ್ತಿರದ ಜಮೀನಿನಲ್ಲಿ ತೆರೆದಿರುವ ಅಂಗಡಿ ಕುಡಿದು ಜಮೀನಿನಲ್ಲೇ ಬಾಟಲು ಎಸೆತ
Team Udayavani, Jun 11, 2019, 7:59 AM IST
ರಾಣಿಬೆನ್ನೂರ: ತಾಲೂಕಿನ ಮಾಕನೂರು ಕ್ರಾಸ್ ರಾಷ್ಟ್ರೀಯ ಹೆದ್ದಾರಿ ಹತ್ತಿರದ ಜಮೀನಿನಲ್ಲಿ ಕುಡಿದು ಬಾಟಲಿಗಳನ್ನು ಎಸೆದಿರುವುದು.
ರಾಣಿಬೆನ್ನೂರ: ತಾಲೂಕಿನ ಮಾಕನೂರು ಕ್ರಾಸ್ ರಾಷ್ಟ್ರೀಯ ಹೆದ್ದಾರಿ ಹತ್ತಿರದ ಜಮೀನಿನಲ್ಲಿ ತೆರೆದಿರುವ ಸಿಎಲ್-2 ಮದ್ಯದ ಅಂಗಡಿಯಿಂದಾಗಿ ಅಕ್ಕ ಪಕ್ಕ ಇರುವ ಕವಲೆತ್ತು, ಕರೂರು, ಮಾಕನೂರು ಗ್ರಾಮದ ಕೆಲ ರೈತರ ಜಮೀನುಗಳಲ್ಲಿ ಕುಡಿದ ಬಾಟಲಿಗಳನ್ನು ಎಸೆಯುತ್ತಿದ್ದು ಇದರಿಂದ ಮುಂಗಾರು ಉಳುಮೆ ಮಾಡುವುದು ರೈತರಿಗೆ ತೀವ್ರ ತಲೆನೋವಾಗಿ ಪರಿಣಮಿಸಿದೆ ಎಂದು ರೈತರು ಆರೋಪಿಸಿದ್ದಾರೆ.
ಅಸಮರ್ಪಕ ಮುಂಗಾರು ಮಳೆಯಿಂದಾಗಿ ಮೊದಲೇ ರೈತರು ಸಂಕಷ್ಟದಲ್ಲಿದ್ದಾರೆ ಆದರೆ, ಇಲ್ಲಿನ ರೈತರು ಮತ್ತೂಂದು ರೀತಿಯ ತೊಂದರೆ ಎದುರಿಸುವಂತಾಗಿದೆ. ಸಿಎಲ್-2 ಬಾರ್ ಅನ್ನು ತೆರೆಯಲು ಅನುಮತಿ ನೀಡಿರುವ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿಯವರ ನಿರ್ಲಕ್ಷ್ಯ ಧೋರಣೆಯಿಂದಾಗಿ ಜನರು ಕುಡಿದು ಸೀಸಗಳನ್ನು ಬಿಸಾಡಿದ್ದಾರೆ.
ಇನ್ನು ಸಂಜೆಯಾದ ಕೂಡಲೇ ಅಂಗಡಿಗೆ ಜಮಾಯಿಸುವ ಕೆಲವರು ಕುಡಿದ ಅಮಲಿನಲ್ಲಿ ಬಾಟಲಿಗಳನ್ನು ಜಮೀನಿನ ತುಂಬೆಲ್ಲಾ ಎಸೆದಿರುವುದಲ್ಲದೆ ಅಲ್ಲಲ್ಲಿ ಬಾಟಲಿಗಳನ್ನು ಒಡೆದು ಚೂರು ಮಾಡಲಾಗಿದೆ. ಇದರಿಂದಾಗಿ ಜಮೀನಿನಲ್ಲಿ ಉಳುಮೆ ಮಾಡಿ ಬಿತ್ತನೆ ಮಾಡುವ ವೇಳೆ ರೈತರ ಕಾಲುಗಳಿಗೆ ಚುಚ್ಚಲಿವೆ ಎಂದು ರೈತರು ಆತಂಕಗೊಂಡಿದ್ದಾರೆ.