ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ
Team Udayavani, Jan 21, 2020, 4:19 PM IST
ರಾಣಿಬೆನ್ನೂರ: ಕಟ್ಟಡ ಕಾರ್ಮಿಕರ ಮತ್ತು ಇತರ ಕಾರ್ಮಿಕರ ವಿವಿಧ ಬೇಡಿಕೆಗಳಿಗಾಗಿ ಒತ್ತಾಯಿಸಿ. ತಾಲೂಕು ಕಟ್ಟಡ ಕಾರ್ಮಿಕರ ಸಂಘದ ಪದಾಧಿಕಾರಿಗಳು ಸೋಮವಾರ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ಮೂಲಕ ತೆರಳಿ ತಹಶೀಲ್ದಾರ್ಅವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನಾಕಾರರು ಕಟ್ಟಡ ಕಾರ್ಮಿಕರ ಮತ್ತು ಇತರ ಕಾರ್ಮಿಕರ ವಿವಿಧ ಬೇಡಿಕೆಗಳಾದ ಗೃಹ ಭಾಗ್ಯ ಯೋಜನೆಯಡಿಯಲ್ಲಿ 2 ಲಕ್ಷ ರೂ.ಗಳ ಸಹಾಯಧನದ ಜತೆಗೆ ಇಲಾಖೆಯಿಂದ ಶೇ.4 ರಷ್ಟು 3 ಲಕ್ಷ ರೂ. ಸಾಲ ನೀಡಬೇಕು. ಉಪಕರಣಗಳ ಖರೀದಿಗಾಗಿ 5 ಸಾವಿರ ರೂಪಾಯಿಗಳಿಂದ 2 ಲಕ್ಷಕ್ಕೆ ಹೆಚ್ಚಿಸಬೇಕು. ಮಾಸಿಕ ಪಿಂಚಣಿಯನ್ನು 2 ಸಾವಿರ ರೂ. ದಿಂದ 5 ಸಾವಿರ ರೂ.ಗೆ ಹೆಚ್ಚಿಸಬೇಕು. ವೈದ್ಯಕೀಯ ಸಹಾಯಧನ 25 ಸಾವಿರ ರೂ.ಗಳಿಗೆ ಹೆಚ್ಚಿಸಬೇಕು. ಅಪಘಾತ ಪರಿಹಾರ ಯೋಜನೆಯಲ್ಲಿ ಮರಣ ಹೊಂದಿದ ಕಾರ್ಮಿಕರಿಗೆ ಎಫ್ಐಆರ್ ಅನ್ನು ಪರಿಗಣಿಸಬಾರದು.
ಕಾರ್ಮಿಕರಿಗೆ ಸಿಗುವ ಎಲ್ಲ ಸೌಲಭ್ಯಗಳು ಇಲಾಖೆ ವ್ಯಾಪ್ತಿಯಲ್ಲಿ ಒದಗಿಸಬೇಕು. ನರೇಗಾ ಯೋಜನೆಯಡಿ ದುಡಿಯುವ ಕಾರ್ಮಿಕರ ಹಕ್ಕು ಮೊಟಕುಗೊಳಿಸಬಾರದು. ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣೆ ನಡೆಸಬೇಕು. ಗ್ರಾಮೀಣ ಕಟ್ಟಡ ಕಾರ್ಮಿಕರಿಗೆ ಉಚಿತ ಬಸ್ ಪಾಸ್ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದರು. ತಾಲೂಕಾಧ್ಯಕ್ಷ ಶಿವಮೂರ್ತಿ ಡೊಳ್ಳಿನ, ಕಾರ್ಯದರ್ಶಿ ಫೈರೂಝ್ ಖಾನ್ ಪಾಟೀಲ, ಹರೀಶ್ ಚೌರದ, ಅಜಯ್ಕುಮಾರ ಹಡಪದ, ನಿಂಗವ್ವ ಉರ್ಮಿ, ಮಾತವ್ವಗೊಬ್ಬಿ, ಮೈಲವ್ವ ಮಳ್ಳಪ್ಪನವರ, ಪ್ರೇಮಾ ಏಳುಕುರಿ, ಜಯಶೀಲಾ ರಣೆಬೆನ್ನೂರ, ಯಲ್ಲಪ್ಪ ಕೆಂಚರಡ್ಡಿ, ಮಾಲತೇಶ ಜ್ಯೋಗಿ, ಭರಲಿಂಗಪ್ಪ ಮಿರ್ಜಿ, ಗುಡ್ಡಪ್ಪ ಉರ್ಮಿ, ವೆಂಕೋಬ ದಾಸರ, ಹಾಲೇಶ ಪುಟ್ಟಣ್ಣನವರ, ರವಿ ದೊಳ್ಳಿನ, ಮಾರುತಿ ಕಳ್ಳಿಮನಿ ಇದ್ದರು.