ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯ
Team Udayavani, Dec 31, 2019, 2:34 PM IST
ಹಿರೇಕೆರೂರ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ರಟ್ಟಿಹಳ್ಳಿ ತಾಲೂಕಿನ ತಡಕನಹಳ್ಳಿ ಗ್ರಾಮದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಎದುರು ಪ್ರತಿಭಟನೆ ನಡೆಸಿದರು.
ಸರ್ಕಾರದ ಯಾವುದೇ ಸಹಾಯಧನ ಅಥವಾ ಮಾಸಾಶನ ರೈತರ ಖಾತೆಗೆ ಜಮೆ ಆದರೆ ಅದನ್ನು ಕೃಷಿ ಸಾಲಕ್ಕೆ ಜಮೆ ಮಾಡಿಕೊಳ್ಳಬಾರದು. ರೈತರಿಗೆ ದೀರ್ಘಾವಧಿ ಸಾಲ ನೀಡುವಾಗ ಆ ರೈತರ ಜಮೀನು ಅಡಮಾನ ಕೊಟ್ಟಿರುವಾಗ ಬೇರೆಯವರ ಜಾಮೀನು ಪಡೆಯಬಾರದು, ರಾಷ್ಟ್ರೀಕೃತ ಬ್ಯಾಂಕ್ಗಳಂತೆ ಗ್ರಾಮೀಣ ಬ್ಯಾಂಕ್ಗಳಲ್ಲಿಯೂ ಜಾಮೀನು ರಹಿತ ಸಾಲ ನೀಡಬೇಕು.
ಮೃತಪಟ್ಟ ರೈತರ ಸಾಲದ ಮೇಲಿನ ಬಡ್ಡಿಯನ್ನು ಬಿಟ್ಟು ಅಸಲು ಮಾತ್ರ ಪಡೆಯಬೇಕು. ಬ್ಯಾಂಕಿನಲ್ಲಿ ಸಣ್ಣ ಕೈಗಾರಿಕೆ ಹೆಸರಿನಲ್ಲಿ ಬಡ ರೈತರಿಗೆ 2 ಲಕ್ಷ ರೂ. ಮಂಜೂರು ಮಾಡಿ, ರೈತರಿಗೆ ಕೇವಲ 1.30 ಲಕ್ಷ ರೂ. ನೀಡಿ ತಲಾ 70 ಸಾವಿರ ರೂ. ವಂಚಿಸಲಾಗಿದೆ. ಇದಕ್ಕೆ ಕಾರಣರಾದ ಅಧಿಕಾರಿ ಹಾಗೂ ಏಜೆಂಟ್ ವಿರುದ್ಧ ಕ್ರಮ ಕೈಗೊಂಡು ರೈತರಿಗೆ ನ್ಯಾಯ ದೊರಕಿಸಿ ಕೊಡಬೇಕೆಂದು ರೈತರು ಆಗ್ರಹಿಸಿದರು.
ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಆರ್.ವಿ. ಕೆಂಚಳ್ಳೇರ, ತಾಲೂಕು ಘಟಕದ ಅಧ್ಯಕ್ಷ ಶಂಕ್ರಪ್ಪ ಶಿರಗಂಬಿ, ಗೌರವಾಧ್ಯಕ್ಷ ಬಸನಗೌಡ ಗಂಗಪ್ಪನವರ, ಕರಬಸಪ್ಪ ಬಸಾಪುರ, ಶಂಭಣ್ಣ ಮುತ್ತಗಿ, ಸೋಮಣ್ಣ ಚಪ್ಪರದಹಳ್ಳಿ ಹಾಗೂ ಇತರರು ಹಾಜರಿದ್ದರು.