ರಸ್ತೆ ನಿರ್ಮಾಣ-ಸ್ವಚ್ಛತೆಗೆ ಒತ್ತಾಯಿಸಿ ಮನವಿ
Team Udayavani, Apr 22, 2019, 3:26 PM IST
ಬ್ಯಾಡಗಿ: ಪಟ್ಟಣದ 19ನೇ ವಾರ್ಡ್ನಲ್ಲಿ ಯುಜಿಡಿ ಕಾಮಗಾರಿ ಮುಗಿದಿದ್ದು, ಡಾಂಬರೀಕರಣ, ಸ್ವಚ್ಛತೆ ಸೇರಿದಂತೆ ಮೂಲ ಸೌಕರ್ಯ ಮರೀಚಿಕೆಯಾಗಿದ್ದು ಕೂಡಲೇ ಸಮಸ್ಯೆ ಸರಿಪಡಿಸುವಂತೆ ನಿವಾಸಿಗಳು ಪುರಸಭೆ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಾರ್ಡ್ ನಿವಾಸಿ ಚೆನ್ನಬಸಪ್ಪ ಹೊಂಬರಡಿ, ಬಡಾವಣೆಗಳಲ್ಲಿ ಯುಜಿಡಿ ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರ ಮಾಡಿರುವ ಯಡವಟ್ಟುಗಳಿಮದಾಗಿ ಯುವಕರಿಂದ ಹಿಡಿದು ವಯೋವೃದ್ಧರು ಪರದಾಡುವಂತಾಗಿದೆ. ಎಲ್ಲೆಂದರಲ್ಲಿ ರಸ್ತೆ ಅಗೆದು ಕಾಮಗಾರಿ ಮುಗಿದ ಬಳಿಕ ಮೊದಲಿನಂತೆ ಮುಚ್ಚದೇ ಹೋಗಿದ್ದಾನೆ. ಪರಿಣಾಮ ರಸ್ತೆಗಳು ಅಪಘಾತ ವಲಯಗಳಾಗಿ ಮಾರ್ಪಟ್ಟಿವೆ. ಕಾಮಗಾರಿ ಮುಗಿದು 8 ತಿಂಗಳು ಕಳೆಯುತ್ತ ಬಂದರೂ ಕೆಲವೇ ಕೇವಲು ರಸ್ತೆಗಳಲ್ಲಿ ಮಾತ್ರ ಡಾಂಬರೀಕರಣ ಮಾಡಿ ನಿರ್ಲಕ್ಷತನ ಮಾಡಲಾಗಿದೆ. ರಸ್ತೆಗಳಲ್ಲಿ ಸಂಚರಿಸಲು ನಿತ್ಯ ತೊಂದರೆಯಾಗಿದ್ದು ಕೂಡಲೇ ಸರಿಪಡಿಸಬೇಕು ಎಂದರು.
ಲಿಂಗರಾಜ ಮಾಳೇನಹಳ್ಳಿ ಮಾತನಾಡಿ, ವಾರ್ಡ್ನಲ್ಲಿನ ಸಮಸ್ಯೆಗಳನ್ನು ಪರಿಹಾರ ಮಾಡುವಲ್ಲಿ ಪುರಸಭೆ ಹಾಗೂ ಜನಪ್ರತಿನಿಧಿಗಳು ವಿಫರಾಗಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ವಾರ್ಡನಲ್ಲಿ ರಸ್ತೆ ಬದಿಯಲ್ಲಿನ ನೀರು ಹರಿಯದೇ ತುಂಬಿರುವ ಗಟಾರಗಳು. ಇದರಿಂದಾಗಿ ಹಲವಾರು ಸಾಂಕ್ರಾಮಿಕ ರೋಗ ಉತ್ಪತ್ತಿಯಾಗುತ್ತಿದ್ದು, ಬಡಾವಣೆ ನಿವಾಸಿಗಳು ಪದೇ ಪದೇ ಆಸ್ಪತ್ರೆಗೆ ಅಲೆದಾಡುವಂತಾಗಿದೆ. ಮಳೆಗಾಲದಲ್ಲಂತೂ ರಸ್ತೆ ನೀರು ಮನೆಗಳಿಗೆ ನುಗ್ಗುತ್ತಿವೆ ಎಂದು ದೂರಿದರು.
ರಾಜು ಆಸಾದಿ ಮಾತನಾಡಿ, 5 ವರ್ಷಗಳ ಕಾಲ ವಾರ್ಡ್ ಅಭಿವೃದ್ಧಿಗೆ ಶ್ರಮಿಸದೆ ಇದೀಗ ಮತ್ತೂಂದು ವಾರ್ಡನಲ್ಲಿ ಚುನಾವಣೆಗೆ ಸ್ಪರ್ಧಿಸಲು ಸಜ್ಜಾಗಿ ನಿಂತಿರುವ ಮಾಜಿ ಸದಸ್ಯರು ತಮ್ಮ ವಾರ್ಡ ಅಭಿವೃದ್ಧಿ ಬಿಟ್ಟು ಇನ್ನೊಬ್ಬರ ವಾರ್ಡನಲ್ಲಿ ರಸ್ತೆ ಆಗಿಲ್ಲ, ಡಾಂಬರೀಕರಣ ಆಗಿಲ್ಲ ಎಂದು ಪ್ರತಿಭಟನೆ ನಡೆಸುತ್ತಿದ್ದಾರೆ. ಮೊದಲು ತಾವು ಪ್ರತಿನಿಧಿಸಿದ್ದ ವಾರ್ಡ್ ಸಮಸ್ಯೆ ಪರಿಹರಿಸಲು ಶ್ರಮಿಸಲಿ ಎಂದು ಹೇಳಿದರು.
ಎಪಿಎಂಸಿ ನಿರ್ದೇಶಕ ವಿಜಯ ಮಾಳಗಿ, ವಿಜಯ ಏಲಿ, ಮಲ್ಲಪ್ಪ ಕಾಟೇನಹಳ್ಳಿ, ವಿಜಯ ಕುದರಿಹಾಳಮಠ, ಶ್ರೀಕಾಂತ, ಈರಣ್ಣ ಬಣಕಾರ ಸೇರಿದಂತೆ ಇನ್ನಿತರರು ಇದ್ದರು.