ಸ್ಟ್ರೈಕ್ ಫ್ರಾಂ ಹೋಂ ವಿನೂತನ ಹೋರಾಟ
Team Udayavani, Jul 29, 2020, 1:54 PM IST
ಗುತ್ತಲ: ರಾಜ್ಯ ಸರ್ಕಾರ ಪಿಂಚಣಿ ವಂಚಿತ ಶಾಲಾ-ಕಾಲೇಜುಗಳ ನೌಕರರಿಗೆ ಪಿಂಚಣೆ ನೀಡಬೇಕೆಂದು ಆಗ್ರಹಿಸಿ ಸಂಘದ ಎಲ್ಲ ಪಿಂಚಣಿ ವಂಚಿತ ನೌಕರರು ಸೋಮವಾರದಿಂದ ಜು.31ರವರೆಗೆ ರಾಜ್ಯಾದ್ಯಂತ ಸ್ಟ್ರೈಕ್ ಫ್ರಾಂ ಹೋಂ ಹೋರಾಟಕ್ಕೆ ಮುಂದಾಗಿದ್ದಾರೆ.
ಅನುದಾನಿತ ಶಾಲೆ ಕಾಲೇಜುಗಳ ಪಿಂಚಣಿ ವಂಚಿತರ ನೌಕರರ ಸಂಘದ ರಾಜ್ಯಾಧ್ಯಕ್ಷ ಜಿ. ಹನುಮಂತಪ್ಪ ಪಟ್ಟಣದ ತಮ್ಮ ನಿವಾಸದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಅನೇಕರು ಅನುದಾನಿತ ಶಾಲೆಗಳಲ್ಲಿ ಸೇವೆ ಸಲ್ಲಿಸಿ ಬಿಡಿಗಾಸ ಪಿಂಚಣೆಯಿಲ್ಲದೆ ಕಷ್ಟದ ಜೀವನ ನಡೆಸುತ್ತಿದ್ದಾರೆ. ಅನೇಕರು ಸೇವೆಯಲ್ಲಿದ್ದಾಗಲೇ ಸಾವನ್ನಪಿದ್ದಾರೆ. ಇನ್ನೂ ಕೆಲವರು ನಿವೃತ್ತಿಯ ನಂತರ ಮೃತರಾಗಿದ್ದಾರೆ. ಇಂತಹ ಕುಟುಂಬಗಳಿಗೆ ಸರ್ಕಾರ ಪಿಂಚಣೆಯನ್ನು ನೀಡುತ್ತಿದ್ದರೆ ಎಲ್ಲರ ಸ್ಥಿತಿ ಉತ್ತಮವಾಗಿರುತ್ತಿತ್ತು. ಅನೇಕ ವರ್ಷಗಳಿಂದ ಹೋರಾಟ ಮಾಡುತ್ತಾ ಬಂದಿದ್ದರೂ ಸಹ ಕುಂಟು ನೆಪ, ಸುಳ್ಳು ಭರವಸೆಗಳನ್ನು ನೀಡುತ್ತಾ ಬಂದಿದ್ದು ಎಲ್ಲ ಪಿಂಚಣಿ ವಂಚಿತರಿಗೆ ನೋವಾಗಿದೆ. ಸರ್ಕಾರ ನಮ್ಮ ಬೇಡಿಕೆಯನ್ನು ಈಡೇರಿಸುವವರೆಗೆ ಹೋರಾಟ ನಿರಂತರವಾಗಿರುತ್ತದೆ ಎಂದು ಸ್ಪಷ್ಟಪಡಿಸಿದರು.