ಮೆಣಸಿನಕಾಯಿ ಸುರಕ್ಷತೆಗೆ ವಾಕ್ಯೂಮ್ ಪ್ಯಾಕಿಂಗ್
•ನೂತನ ತಂತ್ರಜ್ಞಾನ ಅಳವಡಿಕೆಯಿಂದ 10ವರ್ಷ ಮೆಣಸಿನಕಾಯಿ ಸುರಕ್ಷಿತ: ಸುಬ್ರಮಣ್ಯ
Team Udayavani, Jun 23, 2019, 11:28 AM IST
ಬ್ಯಾಡಗಿ: ಎಪಿಎಂಸಿ ಆವರಣದಲ್ಲಿ 160 ರೂ.ಕೋಟಿ ವೆಚ್ಚದಲ್ಲಿ ನಿರ್ಮಿಸಲುದ್ದೇಶಿಸಿರುವ ವಾಕ್ಯೂಮ್ ಪ್ಯಾಕಿಂಗ್ ಪದ್ಧತಿ ಅನುಷ್ಠಾನ ಸಭೆಯನ್ನುದ್ದೇಶಿಸಿ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಸುಬ್ರಮಣ್ಯ ಮಾತನಾಡಿದರು.
ಬ್ಯಾಡಗಿ: ಮೆಣಸಿನಕಾಯಿ ಕೆಡದಂತೆ ವಾಕ್ಯೂಮ್ ಪ್ಯಾಕಿಂಗ್ ಪದ್ಧತಿ ಅನುಷ್ಠಾನ ಜಾರಿಗೊಳಿಸುವುದು ಸೇರಿದಂತೆ ಬ್ಯಾಡಗಿ ಮೂಲತಳಿ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ, ಪ್ರತ್ಯೇಕ ಚಿಲ್ಲಿ ಬೋರ್ಡ್ ಸ್ಥಾಪನೆಗೆ ಒತ್ತು ನೀಡಲಾಗುವುದು. ಈ ಮೂಲಕ ರೈತ ಸಮುದಾಯ ಹಾಗೂ ಯುವ ವರ್ತಕರಿಗೆ ಅನುಕೂಲ ಕಲ್ಪಿಸುವುದಾಗಿ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಸುಬ್ರಮಣ್ಯ ಭರವಸೆ ನೀಡಿದರು.
ಪಟ್ಟಣದ ಎಪಿಎಂಸಿ ಆವರಣದಲ್ಲಿ 160 ರೂ. ಕೋಟಿ ವೆಚ್ಚದಲ್ಲಿ ನಿರ್ಮಿಸಲುದ್ದೇಶಿಸಿರುವ ವಾಕ್ಯೂಮ್ ಪ್ಯಾಕಿಂಗ್ ಪದ್ಧತಿ ಅನುಷ್ಠಾನದ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಬ್ಯಾಡಗಿ ಮಾರುಕಟ್ಟೆ ಏಷ್ಯಾ ಖಂಡದಲ್ಲೇ ಮೆಣಸಿನಕಾಯಿ ವ್ಯಾಪಾರಕ್ಕೆ ಪ್ರಸಿದ್ಧಿ ಪಡೆದಿದೆ. ಈಗಾಗಲೇ ಸಾಕಷ್ಟು ಹೈಬ್ರೀಡ್ ತಳಿಗಳನ್ನು ಪರಿಚಯಿಸಲಾಗಿದೆ. ಆದರೆ, ಇಲ್ಲಿನ ತಳಿಯನ್ನು ಉಳಿಸಿಕೊಳ್ಳುವ ಪ್ರಯತ್ನ ಆಗದಿರುವುದು ದುರದೃಷ್ಟಕರ ಸಂಗತಿ ನೈಸರ್ಗಿಕ ಬಣ್ಣ ಹೊಂದಿರುವ ಬ್ಯಾಡಗಿ ಉಳಿಸಿಕೊಳ್ಳದಿದ್ದರೇ ಮಾರುಕಟ್ಟೆ ಭವಿಷ್ಯಕ್ಕೂ ಪೆಟ್ಟು ಬೀಳಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ನೂತನ ತಂತ್ರಜ್ಞಾನ ಅಳವಡಿಕೆ ಮಾಡುವುದರಿಂದ ಮಾರುಕಟ್ಟೆಯನ್ನು ಅತ್ಯಂತ ವೇಗವಾಗಿ ಬೆಳೆಸಬಹುದಾಗಿದೆ. ಮಾರುಕಟ್ಟೆ ಅಭಿವೃದ್ಧಿಗೆ ಅವಶ್ಯವಿರುವ ವಾಕ್ಯೂಮ್ ಪ್ಯಾಕಿಂಗ್ನಿಂದ ಸುಮಾರು 10 ವರ್ಷ ಅದನ್ನು ಸಂಗ್ರಹಿಸಿಡಬಹುದಾಗಿದೆ. ಕೋಟಿಗಟ್ಟಲೇ ಹಣ ವ್ಯಯಿಸಿ ಕೋಲ್ಡ್ ಸ್ಟೋರೆಜ್ ನಿರ್ಮಿಸುವುದಕ್ಕಿಂತ ಹೆಚ್ಚು ಲಾಭ ರೈತನಿಗಾಗಲಿದೆ. ಹೀಗಾಗಿ ಮಾರುಕಟ್ಟೆ ಆವರಣಲ್ಲಿಯೇ ರೈತರ ಅನುಕೂಲಕ್ಕಾಗಿ ವಾಕ್ಯೂಮ್ ಪ್ಯಾಕಿಂಗ್ ಪದ್ಧತಿ ಅಳವಡಿಸುತ್ತಿರುವುದಾಗಿ ತಿಳಿಸಿದರು.
ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಮಾತನಾಡಿ, ವಾಕ್ಯೂಮ್ ಪ್ಯಾಕಿಂಗ್ ರೈತರಿಗೆ ಹೆಚ್ಚು ಅನುಕೂಲವಾಗಲಿದೆ. ಅದರಲ್ಲಿ ಸಂಗ್ರಹಿಸಿಟ್ಟಿರುವ ಮೆಣಸಿನಕಾಯಿ ಬೀಜಗಳು ಮರುಬಳಕೆಗೆ ರೈತರಿಗೆ ಬರುತ್ತದೆ ಎಂದಾದರೆ ನಮ್ಮದೇನೂ ಅಭ್ಯಂತರವಿಲ್ಲ ಎಂದರ.
ಪ್ಯಾಕಿಂಗ್ ಮೇಲಿನ ವೆಚ್ಚ ಹಾಗೂ ದಾಸ್ತಾನು ಮಾಡಿದ ಮೆಣಸಿನಕಾಯಿ ಬೆಳೆಗಳ ಮೇಲೆ ಮಾಡಿದ ಸಾಲದ ಬಡ್ಡಿ ದರ ಅತ್ಯಂತ ಕಡಿಮೆ ದರಕ್ಕೆ ನಿಗದಿಪಡಿಸುವ ಮೂಲಕ ರೈತರಿಗೆ ಲಾಭದಾಯಕವಾಗಿ ಮಾಡುವಂತೆ ಮನವಿ ಮಾಡಿದರು.
ಮಾಜಿ ಶಾಸಕ ಸುರೇಶಗೌಡ ಪಾಟೀಲ ಮಾತನಾಡಿ, ಕೇಂದ್ರ ಸರ್ಕಾರ ಜಿಎಸ್ಟಿಯನ್ನು ಅಳವಡಿಸಿದ್ದು, 2ನೇ ಹಂತದಲ್ಲಿ ಅದು ಆಕರಣೆಯಾಗಬೇಕಾಗಿದೆ. ಆದರೆ, ರಾಜ್ಯ ಸರ್ಕಾರ ಮಧ್ಯವರ್ತಿಗಳಾಗಿರುವ ದಲಾಲರನ್ನು ಈ ವ್ಯವಸ್ಥೆಯಲ್ಲಿ ಅಳವಡಿಸಿದ್ದು, ಇದರಿಂದ ದಲಾಲರಿಗೆ ಅನವಶ್ಯಕವಾಗಿ ಆರ್ಥಿಕ ಹೊರೆಯಾಗುತ್ತಿದ್ದರೇ, ಶೇ.1 ರಷ್ಟು ಜಿಎಸ್ಟಿ ತುಂಬಬೇಕಾಗಿದ್ದ ಖರೀದಿದಾರರರು ಶೇ.5 ರಷ್ಟು ಹಣವನ್ನು ತುಂಬಿ ರಿಫಂಡ್ಗಾಗಿ ವಾಣಿಜ್ಯ ತೆರಿಗೆ ಇಲಾಖೆಗೆ ಮುಗಿಬೀಳಬೇಕಾಗುತ್ತದೆ. ಕೂಡಲೇ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ತೆಲಂಗಾಣ ಮತ್ತು ಆಂಧ್ರ ಮಾದರಿಯಲ್ಲಿ ರಾಜ್ಯವನ್ನೂ ಸಹ ಜಿಎಸ್ಟಿ ತುಂಬುವುದರಿಂದ ಮುಕ್ತಗೊಳಿಸುವಂತೆ ಮನವಿ ಮಾಡಿದರು.
ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಮಾಜಿ ರಾಜ್ಯಾಧ್ಯಕ್ಷ ಎಸ್.ಆರ್.ಪಾಟೀಲ ಮಾತನಾಡಿ, ಮೆಣಸಿನಕಾಯಿ ಮೇಲೆ ಈ ವರೆಗೂ ಯಾವುದೇ ತಂತ್ರಜ್ಞಾನ ಬಳಕೆಯಾಗಿಲ್ಲ. ಬೆಳೆ ಕಟಾವು ಆದ ಬಳಿಕ ಅದರ ಮೇಲಿನ ನೈಸರ್ಗಿಕ ಬಣ್ಣಕ್ಕೆ ಧಕ್ಕೆಯಾಗದಂತೆ ಒಣಗಿಸುವ ವಿಧಾನಕ್ಕೆ ನೂತನ ತಂತ್ರಜ್ಞಾನ ಅಳವಡಿಸಬೇಕಾಗಿದೆ. ಹಸಿ ಇರುವಂತಹ ಮೆಣಸಿನಕಾಯಿ ಕಟಾವು ಮಾಡುವ ರೈತರು ಅವೈಜ್ಞಾನಿಕವಾಗಿ ಎಲ್ಲೆಂದರಲ್ಲಿ ಒಣಗಿಸಿಕೊಂಡು ಮಾರುಕಟ್ಟೆಗೆ ಮಾರಾಟಕ್ಕೆ ತರುತ್ತಿದ್ದಾರೆ. ಇಂತಹ ಮಾಲನ್ನು ಪಡೆದಂತಹ ಸ್ಥಳೀಯ ವರ್ತಕರೂ ಸಹ ವಿದೇಶಗಳಿಗೆ ರಫ್ತು ಮಾಡಿದಂತಹ ಮೆಣಸಿನಕಾಯಿ ತಿರಸ್ಕೃತಗೊಂಡು ನಷ್ಟ ಅನುಭವಿಸಿದ ಉದಾಹರಣೆಗಳು ಸಾಕಷ್ಟಿವೆ ಎಂದರು.
ಕೃಷಿ ವಿವಿ ಕುಲಪತಿ ಎಂ.ಬಿ. ಛಟ್ಟಿ ಮಾತನಾಡಿ, ವಾಕ್ಯೂಮ್ ಪ್ಯಾಕಿಂಗ್ ಪದ್ಧತಿಯು ಬೆಲ್ಜಿಯಂ ತಂತ್ರಜ್ಞಾನ ಅಳವಡಿಸಲಾಗಿದೆ. ಕಡಿಮೆ ಸ್ಥಳದಲ್ಲಿಯೇ ಲಕ್ಷಗಟ್ಟಲೇ ಚೀಲಗಳನ್ನು ಸಂಗ್ರಹಿಸಿಡಬಹುದಾಗಿದೆ, ಅಲ್ಲದೇ ಮಳೆ, ಗಾಳಿ, ಚಳಿ ಇವುಗಳ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಒಂದು ಬಾರಿ ಪ್ಯಾಕಿಂಗ್ ಮಾಡಿದ ಮಾಲನ್ನು ಮತ್ತೆ ಬೇರೆಡೆಗ ಸಂಗ್ರಹಿಸುವ ಅಗತ್ಯವಿಲ್ಲ. ಇದರಲ್ಲಿ ಸುಮಾರು 15 ವಿಜ್ಞಾನಿಗಳನ್ನು ತೊಡಗಿಸಲಾಗಿದ್ದು, ಸಾಧಕ ಬಾಧಕಗಳ ಬಗ್ಗೆ ಮತ್ತು ಅನುಷ್ಠಾನದ ಕುರಿತು ಅಧ್ಯಯನ ನಡೆಸುತ್ತಿದ್ದಾರೆ. ಬೆಲೆ ಕುಸಿತಗೊಂಡರೂ ರೈತರು ಭಯಪಡಬೇಕಾಗಿಲ್ಲ, ಸುಮಾರು 10 ವರ್ಷಗಳ ಕಾಲ ಮೆಣಸಿನಕಾಯಿ ತನ್ನ ಮೂಲ ಸ್ವರೂಪವನ್ನು ಕಳೆದುಕೊಳ್ಳುವುದಿಲ್ಲ ಎಂದು ತಿಳಿಸಿದರು.
ವರ್ತಕರ ಸಂಘದ ಕಾರ್ಯದರ್ಶಿ ರಾಜು ಮೋರಿಗೇರಿ ಮಾತನಾಡಿ, ಮೆಣಸಿನಕಾಯಿ ಬೆಳೆಯನ್ನು ವಿಮೆ ವ್ಯಾಪ್ತಿಗೆ ತಂದಾಗ ಮಾತ್ರ ರೈತ ಧೈರ್ಯವಾಗಿ ಮೆಣಸಿನಕಾಯಿ ಬೆಳೆಯಬಲ್ಲ. ಅಂತಹ ಒಂದು ಪ್ರಯತ್ನಕ್ಕೆ ಉಭಯ ಸರ್ಕಾರ ವಿಫಲವಾಗಿದ್ದು, ಈ ನಿಟ್ಟಿನಲ್ಲಿ ಗಂಭೀರ ಚಿಂತನೆ ನಡೆಸಬೇಕಾಗಿದ್ದು, ಅಗತ್ಯ ವಸ್ತುಗಳ ಪಟ್ಟಿಯಲ್ಲಿ ಮೆಣಸಿನಕಾಯಿ ಸೇರ್ಪಡೆ ಮಾಡುವ ಮೂಲಕ ರೈತರಿಗೆ ಉತ್ತೇಜನ ನೀಡುವಂತಹ ಕಾರ್ಯಕ್ರಮವಾಗಬೇಕಾಗಿದೆ. ಅಲ್ಲದೇ ಮೆಣಸಿನಕಾಯಿ ಬೆಳೆಗಳ ಕುರಿತು ಕೃಷಿ ವಿವಿಯಿಂದ ಈ ವರೆಗೂ ಯಾವುದೇ ಲೇಖನಗಳು ಪ್ರಕಟವಾಗಿ ರೈತನಿಗೆ ತಲುಪಿದ ಉದಾಹರಣೆಗಳಿಲ್ಲ. ಹೀಗಾಗಿ ಸದರಿ ಬೆಳೆಯು ಪ್ರಚಾರದ ಕೊರತೆ ಅನುಭವಿಸುತ್ತಿದೆ ಎಂದರು.
ಎಪಿಎಂಸಿ ಅಧ್ಯಕ್ಷ ಕೆ.ಎಸ್. ನಾಯ್ಕರ್, ಉಪಾಧ್ಯಕ್ಷ ಉಳಿವೆಪ್ಪ ಕುರವತ್ತಿ, ಕಾರ್ಯದರ್ಶಿ ನ್ಯಾಮಗೌಡ ಸದಸ್ಯರಾದ ಶಶಿಧರ ದೊಡ್ಡಮನಿ, ಚನ್ನಬಸಪ್ಪ ಹುಲ್ಲತ್ತಿ, ವನಿತ ಗುತ್ತಲ, ಡಿ.ಬಿ.ತೋಟದ, ಕುಮಾರಪ್ಪ ಚೂರಿ, ಮಾರುತಿ ಕೆಂಪಗೊಂಡರ, ಅಶೋಕ ಕಟಗಿ, ವೀರಭದ್ರಪ್ಪ ಗೊಡಚಿ, ಶಂಭನಗೌಡ ಪಾಟೀಲ, ಶಕುಂತಲ ದಾನಮ್ಮನವರ, ವರ್ತಕರಾದ ಸುರೇಶ ಮೇಲಗಿರಿ, ಶ್ರೀನಿವಾಸ ಬೆಟಗೇರಿ, ಎನ್.ಎಂ.ದೇಸೂರ, ಎಂ.ಎನ್.ಆಲದಗೇರಿ, ಜೆ.ವಿ.ರೋಣದ, ರಾಜು ಮಾಳಗಿ, ವಿಜಯಲಕ್ಷಿ ್ಮೕ ಇದ್ದರು.