ಭದ್ರಾ ಮೇಲ್ದಂಡೆ ಕಾಮಗಾರಿ ಪೂರ್ಣಗೊಳ್ಳಲಿ
ಹಿರಿಯೂರು ತಾಲೂಕಿನಲ್ಲಿ ಬರಗಾಲ ಇರುವುದರಿಂದ ಕೃಷಿಕರಿಗೆ ಸಂಕಷ್ಟ: ಪೂರ್ಣಿಮಾ ಶ್ರೀನಿವಾಸ್
Team Udayavani, May 8, 2019, 5:41 PM IST
ಹಿರಿಯೂರು: ವಾಣಿವಿಲಾಸ ಜಲಾಶಯಕ್ಕೆ ನೀರು ಹರಿಸುವಂತೆ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಒತ್ತಾಯಿಸಿದರು
ಹಿರಿಯೂರು: ತಾಲೂಕಿನಲ್ಲಿ ತೀವ್ರವಾದ ಬರಗಾಲ ಪರಿಸ್ಥಿತಿ ತಲೆದೋರಿದ್ದು ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿಗೂ ಸಂಕಷ್ಟ ಎದುರಾಗಿದ್ದು, ಕೃಷಿಕರ ತೋಟಗಳು ಒಣಗುತ್ತಿವೆ. ಆದ್ದರಿಂದ ಭದ್ರಾ ಮೇಲ್ದಂಡೆ ನೀರಾವರಿ ಯೋಜನೆಯ ಕಾಮಗಾರಿಗಳನ್ನು ಆದಷ್ಟು ಬೇಗ ಮುಗಿಸಿ ವಾಣಿವಿಲಾಸ ಸಾಗರ ಜಲಾಶಯಕ್ಕೆ ನೀರು ಹರಿಸುವಂತೆ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಒತ್ತಾಯಿಸಿದರು.
ವಾಣಿವಿಲಾಸ ಸಾಗರ ಹೋರಾಟ ಸಮಿತಿ ಅಧ್ಯಕ್ಷ ಕಸವನಹಳ್ಳಿ ರಮೇಶ್ ಹಾಗೂ ಕಾರ್ಯಕರ್ತರೊಂದಿಗೆ ವಿಶ್ವೇಶ್ವರಯ್ಯ ಜಲ ಮಂಡಳಿ ನಿಗಮದ ವ್ಯಸ್ಥಾಪಕ ನಿರ್ದೇಶಕರು ಹಾಗೂ ಮುಖ್ಯ ಅಭಿಯಂತರರನ್ನು ಭೇಟಿ ಮಾಡಿದ್ದ ಅವರು ಈ ಯೋಜನೆ ಕಾಮಗಾರಿಗಳನ್ನು ತ್ವರಿತವಾಗಿ ಮುಗಿಸುವಂತೆ ಮನವಿ ಮಾಡಿದರು.
ಮನವಿಗೆ ಸ್ಪಂದಿಸಿದ ವಿಶ್ವೇಶ್ವರಯ್ಯ ಜಲ ಮಂಡಳಿ ನಿಗಮದ ವ್ಯವಸ್ಥಾಪಕರು ಬಾಕಿ ಉಳಿದಿರುವ ಕಾಮಗಾರಿಗಳ ಬಗ್ಗೆ ಶಾಸಕಿಗೆ ವಿವರ ನೀಡಿದರು. ಜೂನ್ ಅಂತ್ಯದೊಳಗೆ ವಿವಿ ಸಾಗರ ಜಲಾಶಯಕ್ಕೆ ನೀರು ಹರಿಸುವುದಾಗಿ ಭರವಸೆ ನೀಡಿದರು.
ಮಾತಿಗೆ ತಪ್ಪಿದಲ್ಲಿ ಹೋರಾಟ ಸಮಿತಿ ನೇತೃತ್ವದಲ್ಲಿ ಮುಂದಿನ ಹೋರಾಟದ ರೂಪುರೇಷೆಗಳನ್ನು ಸಿದ್ಧಪಡಿಸುವುದಾಗಿ ಹೋರಾಟ ಸಮಿತಿ ಅಧ್ಯಕ್ಷ ಕಸವನಹಳ್ಳಿ ರಮೇಶ್ ತಿಳಿಸಿದರು. ಈ ಸಂದರ್ಭದಲ್ಲಿ ಕೃಷಿಕ ಸಮಾಜದ ಅಧ್ಯಕ್ಷ ಹಾಗೂ ಹೋರಾಟ ಸಮಿತಿ ಗೌರವಾಧ್ಯಕ್ಷ ಎಚ್.ಆರ್. ತಿಮ್ಮಯ್ಯ, ರೈತ ಮುಖಂಡರಾದ ಆಲೂರು ಸಿದ್ದರಾಮಣ್ಣ, ಯಳನಾಡು ರಾಮಚಂದ್ರಪ್ಪ, ಡಾ| ಹನುಮಂತರಾಯಪ್ಪ ಮತ್ತಿತರರು ಇದ್ದರು.