ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಿ
Team Udayavani, Dec 29, 2019, 11:50 AM IST
ಹೊನ್ನಾಳಿ: 2008ರಲ್ಲಿ ಪ್ರಾರಂಭವಾದ ದಿ.ಜಿ.ಮಲ್ಲಿಕಾರ್ಜುನಪ್ಪ ಮತ್ತು ಹಾಲಮ್ಮ ಚಾರಿಟೇಬಲ್ ಟ್ರಸ್ಟ್ ದಾವಣಗೆರೆ ವತಿಯಿಂದ ಪ್ರತಿ ವರ್ಷ ಸಾಮೂಹಿಕ ವಿವಾಹ, ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕಗಳು, ಬ್ಯಾಗ್ ವಿತರಣೆ, ಬಡ ವಿದ್ಯಾರ್ಥಿಗಳಿಗೆ ಸಹಾಯ ಸೇರಿದಂತೆ ಅನೇಕ ಸಾಮಾಜಿಕ ಕೆಲಸಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದರು.
ನ್ಯಾಮತಿ ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆ ಆವರಣದಲ್ಲಿ ದಿ.ಜಿ.ಮಲ್ಲಿಕಾರ್ಜುನಪ್ಪ ಮತ್ತು ಹಾಲಮ್ಮ ಚಾರಿಟೇಬಲ್ ಟ್ರಸ್ಟ್ ದಾವಣಗೆರೆ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಉಚಿತ ನೋಟ್ ಶಾಲಾ ಕಾಲೇಜು ಬ್ಯಾಗ ಮತ್ತು ನೋಟ್ಬುಕ್ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರ
ಹಾಗೂ ದಾನಿಗಳಿಂದ ಹೇರಳವಾಗಿ ಸಹಾಯ ದೊರೆಯುತ್ತಿದ್ದು, ವಿದ್ಯಾರ್ಥಿಗಳು ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಟ್ಟು ಸತತ ಅಭ್ಯಾಸ ಮಾಡಿ ಮುಂದೆ ಬರಬೇಕು ಎಂದ ಅವರು, ಪೋಷಕರು ತಮ್ಮ ಮಕ್ಕಳ ಶಿಕ್ಷಣದ ಬಗ್ಗೆ ಪ್ರತಿ ದಿನ ಪರಿಶೀಲಿಸಬೇಕು ಎಂದು ಹೇಳಿದರು.
ವಿದ್ಯಾರ್ಥಿಗಳು ಕಾಟಾಚಾರಕ್ಕೆ ಓದಬಾರದು ಮನಸ್ಸನ್ನು ಹಿಡಿದಿಟ್ಟುಕೊಂಡು ಅಭ್ಯಾಸ ಮಾಡಿದರೆ ಶಿಕ್ಷಣ ಕ್ಷೇತ್ರದಲ್ಲಿ ಮುಂದೆ ಬರಲು ಸಾಧ್ಯ. ಒಂದು ಕಾಲದಲ್ಲಿ ಆಸ್ತಿ, ಅಂತಸ್ತು, ಧನಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತಿದ್ದರು ಆದರೆ ಇಂದು ಹೆಚ್ಚು ಶಿಕ್ಷಣಕ್ಕೆ ಮಹತ್ವ ಬಂದಿದೆ ಇದನ್ನರಿತು ಎಲ್ಲಾ ವಿದ್ಯಾರ್ಥಿಗಳು ಶ್ರಮ ಹಾಕಿ ಅಭ್ಯಾಸ ಮಾಡಿ ಎಂದು ಕಿವಿಮಾತು ಹೇಳಿದರು.
ಶಾಸಕ ಎಂ.ಪಿ.ರೇಣುಕಾಚಾರ್ಯ ಕೇವಲ ಎರಡು ತಿಂಗಳಲ್ಲಿ ರೂ.2ಕೋಟಿ ಅನುದಾನವನ್ನು ನ್ಯಾಮತಿ ತಾಲೂಕಿಗೆ ತಂದಿದ್ದಾರೆ. ಮುಂದಿನ ದಿನಗಳಲ್ಲಿ ಇಬ್ಬರು ಕೈ ಜೋಡಿಸಿ ಹೆಚ್ಚಿನ ಅನುದಾನ ತಂದು ವಿವಿಧ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಿಎಂ ರಾಜಕೀಯ ಕಾರ್ಯದರ್ಶಿ ಶಾಸಕ ಎಂ.ಪಿ.ರೇಣುಕಾಚಾರ್ಯ ಮಾತನಾಡಿ, ಹಿಂದಿನ ಎರಡು ಅವ ಧಿಯಲ್ಲಿ ಸಂಸದರಾಗಿದ್ದ ದಿ.ಜಿ.ಮಲ್ಲಿಕಾರ್ಜುನಪ್ಪ ಜಿಲ್ಲಾದ್ಯಂತ ಸಂಚರಿಸಿ ಜನರ ಕಷ್ಟ ಸುಖಗಳನ್ನು ಆಲಿಸಿ ಹೆಚ್ಚಿನ ಕೆಲಸ ಮಾಡಿದ್ದರು ಎಂದು ಹೇಳಿದರು.
ತಂದೆ ಜಿ.ಮಲ್ಲಿಕಾರ್ಜುನಪ್ಪ ಅವರ ದಾರಿಯಲ್ಲಿ ಸಾಗಿದ ಸಂಸದ ಜಿ.ಎಂ.ಸಿದ್ದೇಶ್ವರ ಅವರು ಪ್ರತಿ ಹಳ್ಳಿಗಳಿಗೂ ತೆರಳಿ ಉತ್ತಮ ಕೆಲಸ ಕಾರ್ಯ ಮಾಡಿದ ಪ್ರಯುಕ್ತ ಸತತ ನಾಲ್ಕು ಬಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ ಎಂದು ಹೇಳಿದರು.
ಹಳ್ಳಿ ಜನರು ತಾಲೂಕು ಕೇಂದ್ರಕ್ಕೆ ಬಂದಾಗ ತಮ್ಮ ಕೆಲಸಗಳಿಗೆ ಕಚೇರಿಗಳಿಗೆ ಅಲೆದಾಡಬಾರದು ಎಂದು ಎಲ್ಲಾ ಕಚೇರಿಗಳು ಒಂದೇ ಸ್ಥಳದಲ್ಲಿರಬೇಕು ಎಂದು ಬೃಹತ್ ಕಟ್ಟಡಗಳ ಸಂಕಿರ್ಣ ನಿರ್ಮಿಸಲಾಗುವುದು. ಇದಕ್ಕಾಗಿ ರೂ.15ರಿಂದ 20ಕೋಟಿ ಅನುದಾನದ ಬೇಡಿಕೆಯನ್ನು ಸರ್ಕಾರದ ಮುಂದೆ
ಮಂಡಿಸಲಾಗಿದೆ ಎಂದು ಹೇಳಿದರು.
ನನ್ನ ಹಿಂದಿನ ಅವ ಧಿಯಲ್ಲಿ ನ್ಯಾಮತಿ ಹಾಗೂ ಸುರಹೊನ್ನೆ ಅವಳಿ ಗ್ರಾಮಗಳಿಗೆ ತುಂಗಭದ್ರಾ ನದಿಯಿಂದ ನೀರು ಸರಬರಾಜು ಮಾಡಲಾಗಿತ್ತು. ಈಗ ನ್ಯಾಮತಿ ಗ್ರಾಪಂ ಅನ್ನು ಮೇಲ್ದರ್ಜೆಗೇರಿಸಿ ಪ.ಪಂ ಮಾಡಲಾಗುವುದು. ಈಗಾಗಲೇ ಸಚಿವ ಸಂಪುಟದಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.
ತಾಪಂ ಪ್ರಭಾರಿ ಅಧ್ಯಕ್ಷ ಎಸ್ .ಪಿ.ರವಿಕುಮಾರ್, ಜಿ.ಪಂ ಸದಸ್ಯರಾದ ಉಮಾ ರಮೇಶ್, ಮಹೇಶ್, ತಾ.ಪಂ ಸದಸ್ಯರಾದ ಸಿದ್ದಲಿಂಗಪ್ಪ, ಹನುಮಂತಪ್ಪ, ಬಿಜೆಪಿ ತಾಲೂಕು ಅಧ್ಯಕ್ಷ ಜೆ.ಕೆ.ಸುರೇಶ್, ಪ್ರಾಂಶುಪಾಲ ವಿ.ಪಿ.ಪೂರ್ಣಾನಂದ, ಬಿಇಒ ಜಿ.ಇ.ರಾಜೀವ್, ಎಸ್ಡಿಎಂಸಿ ಪದಾಧಿಕಾರಿಗಳು ಇತರರು ಉಪಸ್ಥಿತರಿದ್ದರು. ಜಿಎಂಐಟಿ ಟ್ರಸ್ಟ್ ಸಲಹಾ ಸಮಿತಿ ಕಾರ್ಯದರ್ಶಿ ಶಿವರುದ್ರಯ್ಯ ಪ್ರಾಸ್ತಾವಿಕ ಮಾತನಾಡಿದರು.