ಪ್ರವಾಹ ಭೀತಿ; ಹಂಪಿಗೆ ಬರ್ತಿಲ್ಲ ಪ್ರವಾಸಿಗರು!
•ನೆರೆ ಇಳಿದು ಸಹಜ ಸ್ಥಿತಿಯತ್ತ ಹಂಪಿ •ಆತಂಕದಿಂದ ಪ್ರಯಾಣ ರದ್ದುಗೊಳಿಸಿದ ಪ್ರವಾಸಿಗರು
Team Udayavani, Aug 15, 2019, 11:58 AM IST
ಹೊಸಪೇಟೆ: ನದಿ ಪ್ರವಾಹ ಕಡಿಮೆಯಾದ ಹಿನ್ನೆಲೆಯಲ್ಲಿ ಯಾತ್ರಾರ್ಥಿಗಳು ಹಂಪಿ ಸ್ನಾನಘಟ್ಟದಲ್ಲಿ ನೀರಿಗೆ ಇಳಿಯುತ್ತಿರುವದು.
•ಪಿ.ಸತ್ಯನಾರಾಯಣ
ಹೊಸಪೇಟೆ: ತುಂಗಭದ್ರಾ ನದಿಯ ಪ್ರವಾಹದ ಹಿನ್ನೆಲೆಯಲ್ಲಿ ಐತಿಹಾಸಿಕ ಹಂಪಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಒಮ್ಮೆಲೆ ಕುಸಿದಿದೆ. ಪ್ರವಾಹ ತಗ್ಗಿದ್ದರೂ ಸಹ ಪ್ರವಾಸಿಗರು ಹಂಪಿಗೆ ಬರಲು ಹಿಂದೇಟು ಹಾಕುತ್ತಿದ್ದು, ಶೇ. 65 ರಷ್ಟು ಮಂದಿ ಪ್ರವಾಸ ರದ್ದುಗೊಳಿಸಿದ್ದಾರೆ.
ಮಲೆನಾಡಿನಲ್ಲಿ ಆದ ಅತಿವೃಷ್ಟಿಯಿಂದ ತುಂಗಭದ್ರಾ ಜಲಾಶಯ ಭರ್ತಿಯಾಗಿದ್ದು, ಜಲಾಶಯದಿಂದ ನದಿಗೆ ಹೆಚ್ಚುವರಿ ನೀರು ಹರಿಸಲಾಗಿತ್ತು. ಇದರಿಂದ ನದಿಯಲ್ಲಿ ಪ್ರವಾಹ ಉಂಟಾಗಿ ಐತಿಹಾಸಿಕ ಹಂಪಿಯ 60 ಕ್ಕೂ ಹೆಚ್ಚು ಸ್ಮಾರಕಗಳು ನೀರಿನಲ್ಲಿ ಮುಳುಗಿದ್ದವು. ಅಲ್ಲದೆ ಕೆಲವೆಡೆ ತೆಪ್ಪ ಬಳಸಿ ಪ್ರವಾಸಿಗರನ್ನು ರಕ್ಷಿಸಲಾಗಿತ್ತು. ಹಂಪಿ ಪಕ್ಕದ ವಿರೂಪಾಪುರಗಡ್ಡೆಯ ಹೋಟೆಲ್ ಹಾಗೂ ಲಾಡ್ಜ್ನಲ್ಲಿ ವ್ಯಾಸ್ತವ್ಯ ಹೂಡಿದ್ದ 300ಕ್ಕೂ ಹೆಚ್ಚು ಜನ ಪ್ರವಾಸಿಗರು ಪ್ರವಾಹದಲ್ಲಿ ಸಿಲುಕಿಕೊಂಡಿದ್ದರು. ಎಲ್ಲರನ್ನು ರಕ್ಷಿಸಲಾಗಿದ್ದರೂ ಪ್ರವಾಸಿಗರಲ್ಲಿ ಆತಂಕ ದೂರವಾಗಿಲ್ಲ. ಅಲ್ಲದೆ ಪ್ರವಾಸಿಗರು ತಾತ್ಕಾಲಿಕ ವಾಗಿ ಹಂಪಿಗೆ ಬರದಂತೆ ಸೂಚನೆ ನೀಡಲಾಗಿತ್ತು. ಸದ್ಯ ಹಂಪಿಯಲ್ಲಿ ಪ್ರವಾಹ ಇಳಿದಿದ್ದರೂ ಪ್ರವಾಸಿಗರೇ ಕಾಣುತ್ತಿಲ್ಲ.
ಪ್ರವಾಹ ಭೀತಿಯಿಂದ ಮುಂಗಡವಾಗಿ ಆನ್ಲೈನ್ ಮೂಲಕ ಸ್ಥಳೀಯ ಹೋಟೆಲ್ ಹಾಗೂ ಲಾಡ್ಜ್ಗಳಲ್ಲಿ ರೂಮ್ ಬುಕ್ ಮಾಡಿದ್ದ ಶೇ. 65ರಷ್ಟು ಜನ ಪ್ರವಾಸ ರದ್ದುಗೊಳಿಸಿದ್ದಾರೆ. ಪ್ರವಾಸೋದ್ಯಮ ನಿಗಮದ ಕಮಲಾಪುರದ ಮಯೂರ ಭುವನೇಶ್ವರಿ ಹೋಟೆಲ್, ಹಂಪಿ ಹಾಗೂ ಹೊಸಪೇಟೆ ಹಲವಾರು ಹೋಟೆಲ್ಗಳಲ್ಲಿ ಈಗಾಗಲೇ ಮುಂಗಡವಾಗಿ ಆನ್ಲೈನ್ ಮೂಲಕ ಬುಕಿಂಗ್ ಮಾಡಿದ್ದ ರೂಮ್ಗಳನ್ನು ಪ್ರವಾಸಿಗರು ರದ್ದು ಮಾಡಿದ್ದಾರೆ.
ಜಾಲತಾಣದಲ್ಲಿ ಪೋಸ್ಟ್: ಹಂಪಿ-ಹೊಸಪೇಟೆ ಹಾಗೂ ಕಮಲಾಪುರ ಭಾಗದ ಹೋಟೆಲ್ನವರು ಹಂಪಿಯಲ್ಲಿ ಪ್ರಸ್ತುತ ಯಾವುದೇ ಸಮಸ್ಯೆಯಿಲ್ಲ. ಪ್ರವಾಸಿಗರು ನಿರಾಳವಾಗಿ ಹಂಪಿಗೆ ಬರಬಹುದು ಎಂದು ಸಾಮಾಜಿಕ ಜಾಲತಾಣದಲ್ಲಿ ಸಂದೇಶಗಳನ್ನು ಹರಿಬಿಟ್ಟಿದ್ದಾರೆ.
ರಾಮಲಕ್ಷ್ಮಣ ದೇಗುಲ ಮಾರ್ಗ ಮುಕ್ತ: ನದಿ ಪ್ರವಾಹದಿಂದ ಸ್ಥಗಿತಗೊಂಡಿದ್ದ ಶ್ರೀ ಚಕ್ರತೀರ್ಥ ಕೋದಂಡರಾಮಸ್ವಾಮಿ ದೇವಸ್ಥಾನಕ್ಕೆ ತೆರಳುವ ಹಾಗೂ ತಳವಾರಘಟ್ಟ ಮಾರ್ಗದಿಂದ ವಿಜಯವಿಠಲ ದೇವಸ್ಥಾನಕ್ಕೆ ತೆರಳುವ ಮಾರ್ಗ ಮುಕ್ತವಾಗಿದೆ. ಪ್ರವಾಸಿಗರು ಎಂದಿನಂತೆ ಭೇಟಿ ನೀಡಬಹುದಾಗಿದೆ.
ಶ್ರಾವಣ ಮಾಸ: ರಾಜ್ಯದ ದೂರದ ಜಿಲ್ಲೆ ಹಾಗೂ ಹೊರರಾಜ್ಯದ ಪ್ರವಾಸಿಗರು ಹಂಪಿ ಪ್ರವಾಸವನ್ನು ಮೊಟಕುಗೊಳಿಸಿದ್ದರೆ, ಮತ್ತೂಂದಡೆ ಶ್ರಾವಣ ಮಾಸದ ಅಂಗವಾಗಿ ವಿರೂಪಾಕ್ಷೇಶ್ವರ ಸ್ವಾಮಿ ದರ್ಶನಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಕಳೆದ ಶನಿವಾರದಿಂದ ಸೋಮವಾರದ ಮೂರು ದಿನಗಳ ಸಾಲು ರಜೆ ಒಂದೆಡೆ, ಶ್ರಾವಣಮಾಸದ ವಿಶೇಷ ಪೂಜೆ- ದರ್ಶನಕ್ಕಾಗಿ ಬಳ್ಳಾರಿ, ಕೊಪ್ಪಳ ಹಾಗೂ ರಾಯಚೂರು ಜಿಲ್ಲೆ ಸೇರಿದಂತೆ ನೆರೆ ಆಂಧ್ರದಿಂದ ಹಂಪಿಗೆ ಭಕ್ತರು ಆಗಮಿಸಿದ್ದಾರೆ.