Team Udayavani, Oct 3, 2019, 5:24 PM IST
ಶಿವಶಂಕರ ಕಂಠಿ
ಹುಬ್ಬಳ್ಳಿ: ಇಂದಿನ ದಿನಮಾನಗಳಲ್ಲಿ ಪ್ರತಿಯೊಬ್ಬರಿಗೂ ಪ್ಲಾಸ್ಟಿಕ್ ಸರ್ವಸ್ವ ಎಂಬಂತಾಗಿದೆ. ಇದರ ಅತಿ ಬಳಕೆ ನಿಸರ್ಗದ ಮೇಲೂ ದುಷ್ಪರಿಣಾಮ ಬೀರುತ್ತಿದೆ. ಇದರಿಂದ ಪರಿಹಾರ ಪುನರ್ ಬಳಕೆಯ ಪೇಪರ್ ಮತ್ತು ಬಟ್ಟೆ ಉಪಯೋಗದಿಂದ ಮಾತ್ರ ಸಾಧ್ಯ ಎಂಬುದನ್ನು ನಗರದ ಇಂದಿರಾ ಗಾಜಿನಮನೆಯಲ್ಲಿ ಬುಧವಾರ ನಡೆದ ಪರಿಸರಸ್ನೇಹಿ ವಸ್ತುಗಳಿಂದ ತಯಾರಿಸಿದ ಉತ್ಪನ್ನಗಳು ಸಾರಿ ಸಾರಿ ಹೇಳುತ್ತಿದ್ದವು.
ಇಂದಿನ ಮಾರುಕಟ್ಟೆಯಲ್ಲಿ ಬಹುತೇಕವಾಗಿ ಪ್ಲಾಸ್ಟಿಕ್ನಿಂದ ತಯಾರಿಸಿದ ಪ್ಯಾಕಿಂಗ್ ಹಾಗೂ ಅಲಂಕಾರಿಕ ವಸ್ತುಗಳೇ ಹೆಚ್ಚು. ಜನರು ಸಹಿತ ಯಾವುದೇ ವಸ್ತು ಕೊಂಡುಕೊಳ್ಳಬೇಕೆಂದರು ಮನೆಯಿಂದ ಬರಿಗೈಯಲ್ಲಿ ಮಾರುಕಟ್ಟೆಗೆ, ಸಂತೆಗೆ ಹೋಗುತ್ತಾರೆ. ಅಲ್ಲಿ ಅಂಗಡಿಕಾರರು ಕೊಡುವ ನಿಷೇಧಿತ ಪ್ಲಾಸ್ಟಿಕ್ನಲ್ಲಿ ದಿನಬಳಕೆ ವಸ್ತುಗಳನ್ನು ತೆಗೆದುಕೊಂಡು ಬರುವುದು ಸಾಮಾನ್ಯ. ಇದರಿಂದ ಮನೆಯಲ್ಲೂ ಪ್ಲಾಸ್ಟಿಕ್ ಸಂಗ್ರಹ ಹೆಚ್ಚಾಗಿ, ಜೊತೆಗೆ ಮನೆಯ ಸುತ್ತಮುತ್ತ, ಕಸದ ತೊಟ್ಟಿ ಹಾಗೂ ರಸ್ತೆ ಬದಿಗಳಲ್ಲಿ ಪ್ಲಾಸ್ಟಿಕ್ಗಳು ಕಾಣಿಸುತ್ತವೆ. ಇದನ್ನು ಸುಟ್ಟರೆ ಪರಿಸರದಲ್ಲಿ ಮಾಲಿನ್ಯವುಂಟಾಗಿ ಜನ-ಜಾನುವಾರು ಮೇಲೆ ದುಷ್ಪರಿಣಾಮ ಬೀರುತ್ತದೆ. ಅಲ್ಲದೆ ಮಣ್ಣಿನೊಳಗೆ ಪ್ಲಾಸ್ಟಿಕ್ ಬೆರೆತು ವಿಷಕಾರಿ ಆಗುತ್ತಿದೆ. ಜಾನುವಾರುಗಳು ಪ್ಲಾಸ್ಟಿಕ್ ತಿಂದು ಮಾರಕ ಕಾಯಿಲೆಗೆ ಒಳಗಾಗುತ್ತಿವೆ. ಹೀಗಾಗಿ ಪ್ಲಾಸ್ಟಿಕ್ ಬಳಕೆ ಮಾಡದಂತೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಸರಕಾರ ಹಾಗೂ ಸಂಘ-ಸಂಸ್ಥೆಗಳಿಂದ ನಡೆಯುತ್ತಿವೆ.
ಹಲವು ಸಂಘ-ಸಂಸ್ಥೆಗಳು ಪ್ಲಾಸ್ಟಿಕ್ಗೆ ಪರ್ಯಾಯವಾಗಿ ಬಟ್ಟೆ ಹಾಗೂ ಕಾಗದದಿಂದ ಕೈಚೀಲ ಸೇರಿದಂತೆ ಪ್ಯಾಕಿಂಗ್ ಮಾಡಲು ಅವಶ್ಯವುಳ್ಳ ಉತ್ಪನ್ನಗಳನ್ನು ತಯಾರಿಸುತ್ತಿವೆ. ಆ ಮೂಲಕ ಸಮಾಜದಲ್ಲಿ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಲು ಶ್ರಮಿಸುತ್ತಿವೆ. ಮಹಿಳಾ ಅಭಿವೃದ್ಧಿ ಸಂಘಗಳು, ಗೃಹ ಮತ್ತು ಗುಡಿ ಕೈಗಾರಿಕೆಗಳು ಆಹಾರ ಸಾಮಗ್ರಿ, ದಿನಸಿ ವಸ್ತು, ಬೇಕರಿ ಉತ್ಪನ್ನ, ಹೋಟೆಲ್ ತಿಂಡಿ, ಕಿರಾಣಿ ಸಾಮಗ್ರಿ, ಕಾಯಿಪಲ್ಲೆ, ಚಹಾಪುಡಿ, ಕಾಫಿ ಪುಡಿ ಸೇರಿದಂತೆ ಇನ್ನಿತರೆ ವಸ್ತುಗಳನ್ನು ಪ್ಯಾಕಿಂಗ್ ಮಾಡಲು; ಸಭೆ-ಸಮಾರಂಭ, ಮದುವೆ ಸೇರಿದಂತೆ ಇನ್ನಿತರೆಡೆಗಳಲ್ಲಿ ಬಳಸಲು; ಆಸ್ಪತ್ರೆಗಳಲ್ಲಿ ಎಕ್ಸರೇ ಮತ್ತಿತರಕ್ಕೆ ಬಳಕೆ ಮಾಡಲು ಹಾಗೂ ವಿವಿಧ ಕಾರ್ಯಕ್ರಮಗಳಲ್ಲಿ ಬಳಕೆ ಮಾಡಲು ಅವಶ್ಯವಾದ ಉತ್ಪನ್ನಗಳನ್ನು ಸಿದ್ಧಪಡಿಸಿ ಮಾರಾಟ ಮಾಡುತ್ತಿವೆ. ಬುಧವಾರ ಗಾಂಧಿ ಜಯಂತಿ ಅಂಗವಾಗಿ ಹಾಗೂ ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿಸಲು ಪ್ಲಾಸ್ಟಿಕ್ ವಸ್ತುಗಳಿಗೆ ಪರ್ಯಾಯವಾಗಿ ಪರಿಸರ ಸ್ನೇಹಿ ವಸ್ತುಗಳಾದ ಬಟ್ಟೆಯ ಬ್ಯಾಗ್, ಕಾಗದದ ಬ್ಯಾಗ್, ಮಡಿಕೆ ಕಪ್ಗ್ಳು ಮುಂತಾದ ಪ್ಯಾಕಿಂಗ್ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮೇಳ ನಡೆಯಿತು. ಬೆಂಗಳೂರು, ಮೈಸೂರು, ಮಡಿಕೇರಿ ಸೇರಿದಂತೆ ವಿವಿಧಡೆಯಿಂದ ಆಗಮಿಸಿದ 45ಕ್ಕೂ ಅಧಿಕ ಪರಿಸರಸೇ°ಹಿ ವಸ್ತುಗಳ ತಯಾರಕರು ಕಾಗದ, ಬಟ್ಟೆಯಿಂದ ತಯಾರಿಸಿದ ಉತ್ಪನ್ನಗಳು ಹಾಗೂ ಆಕರ್ಷಕವಾದ ಮಣ್ಣಿನ ಮಡಿಕೆ, ಬಿದಿರು, ಕಬ್ಬು, ಇತರೆ ವಸ್ತಗಳಿಂದ ತಯಾರಿಸಿದ ಬುಟ್ಟಿ, ಗೃಹ ಅಲಂಕಾರ ವಸ್ತುಗಳನ್ನು ಪ್ರದರ್ಶಿಸಿದರು.
ಧಾರವಾಡದ ಶ್ರೀ ಸಾಯಿ ಎಂಟರ್ಪ್ರೈಸಿಸ್ನ ಮಾಲಕರಾದ ಜ್ಯೋತಿ ಹಿರೇಮಠ ಆರು ವರ್ಷಗಳಿಂದ ಬಟ್ಟೆ ಅಂಗಡಿ, ಬೇಕರಿ, ಹೋಟೆಲ್, ಕಿರಾಣಿ ಅಂಗಡಿ, ಕಾಫಿ ಪುಡಿ, ಚಹಾಪುಡಿ ಪ್ಯಾಕಿಂಗ್, ಕಾಯಿಪಲ್ಲೆ, ಮದುವೆ,
ಸಭೆ-ಸಮಾರಂಭ ಸೇರಿದಂತೆ ಆಸ್ಪತ್ರೆಗಳಲ್ಲೂ ಬಳಕೆಗೆ ಅವಶ್ಯವಾದ ಮರುಬಳಕೆ ಮಾಡಬಹುದಾದಂತಹ
ಬಟ್ಟೆ, ಕೈಯಿಂದ ತಯಾರಿಸಿದ ಕಾಗದ, ಡುಪ್ಲೆಕ್ಸ್ ಕಾಗದ, ನೈಸರ್ಗಿಕ ಕಾಗದ, ಕ್ರಾಫ್ಟ್ ಕಾಗದ ಸೇರಿದಂತೆ 95ಕ್ಕೂ
ವಿವಿಧ ಬಗೆಯ ಪರಿಸರ ಸ್ನೇಹಿ ಉತ್ಪನ್ನಗಳನ್ನು ತಯಾರಿಸಿ ಮಾರುಕಟ್ಟೆ ಮಾಡುತ್ತಿದ್ದಾರೆ. ಪ್ಲಾಸ್ಟಿಕ್ಗೆ ಪರ್ಯಾಯವಾಗಿ ಮರುಬಳಕೆಯ ಪರಿಸರಸ್ನೇಹಿ ಉತ್ಪನ್ನಗಳನ್ನು ತಯಾರಿಸುತ್ತಿದ್ದು, ಜನರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ನಮ್ಮ ಉತ್ಪನ್ನಗಳು ವಿದೇಶಗಳಿಗೂ ರಫ್ತು ಮಾಡಲಾಗುತ್ತಿದೆ. ಪ್ಲಾಸ್ಟಿಕ್ ಉತ್ಪನ್ನಗಳ ಬೆಲೆಯಲ್ಲೇ ಪರಿಸರ ಸ್ನೇಹಿ ಉತ್ಪನ್ನಗಳು ಲಭ್ಯವಿವೆ ಎನ್ನುತ್ತಾರೆ ಜ್ಯೋತಿ ಹಿರೇಮಠ.