ಬಳಕೆ ಇಲ್ಲದೇ ಪಾಳು ಬಿದ್ದಯಾತ್ರಿ ನಿವಾಸ
99 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ ಕಟ್ಟಡ ಹಸ್ತಾಂತರಿಸಿಕೊಳ್ಳಲು ಒಪ್ಪದ ದೇವಸ್ಥಾನ ಸಮಿತಿ
Team Udayavani, Sep 27, 2019, 1:15 PM IST
ಶಶಿಕಾಂತ ಕೆ.ಭಗೋಜಿ
ಹುಮನಾಬಾದ: ಕಲ್ಯಾಣ ಕರ್ನಾಟಕದ ಬೀದರ ಜಿಲ್ಲೆ ಹುಮನಾಬಾದ ಇತಿಹಾಸ ಪ್ರಸಿದ್ಧ ಶ್ರೀ ವೀರಭದ್ರೇಶ್ವರ ದೇವಸ್ಥಾನಕ್ಕೆ ಪ್ರತಿ ವರ್ಷ ಜನವರಿ ತಿಂಗಳಲ್ಲಿ ನಡೆಯುವ ಜಾತ್ರೆ ಸೇರಿದಂತೆ ವರ್ಷವಿಡೀ ನಡೆಯುವ ಶುಭ ಕಾರ್ಯಕ್ರಮಕ್ಕೆ ಆಗಮಿಸುವ ಭಕ್ತರ ವಾಸ್ತವ್ಯಕ್ಕೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ದೇವಸ್ಥಾನ ಮುಂಭಾಗದಲ್ಲಿ ನಿರ್ಮಿಸಲಾಗಿರುವ ಯಾತ್ರಿ ನಿವಾಸ ನಿರ್ವಹಣೆ ಕೊರತೆಯಿಂದ ಪಾಳು ಬಿದ್ದಿದೆ.
ಕ್ಷೇತ್ರದ ಶಾಸಕ ರಾಜಶೇಖರ ಬಿ. ಪಾಟೀಲ ಅವರು ಅಂದಿನ ಪ್ರವಾಸೋದ್ಯಮ ಖಾತೆ ಸಚಿವರ ಮೇಲೆ ಒತ್ತಡ ಹೇರಿ ಬಿಡುಗಡೆ ಮಾಡಿಸಿದ್ದ 99 ಲಕ್ಷ ರೂ.ಅನುದಾನದ ಕಟ್ಟಡ ನಿರ್ಮಾಣ ಕಾಮಗಾರಿಗೆ 2013ನೇ ಸಾಲಿನಲ್ಲಿ ಶಂಕುಸ್ಥಾಪನೆ ನೆರವೇರಿಸಿದ್ದರು. ಆರಂಭದಲ್ಲಿ ಒಂದೂವರೆ ವರ್ಷಕ್ಕೂ ಅಧಿಕ ಕಾಲ ಕಾರಣಾಂತರ ಕಟ್ಟಡ ಕಾಮಗಾರಿ ನೆನಗುದಿಗೆ ಬಿದ್ದತ್ತು.
ತದನಂತರ ಮಾಧ್ಯಮಗಳಲ್ಲಿ ವಸ್ತುಸ್ಥಿತಿ ವರದಿ ಪ್ರಕಟವಾದ ಬಳಿಕ ಎಚ್ಚೆತ್ತುಕೊಂಡ ಚುನಾಯಿತ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕಾಮಗಾರಿ ಚುರುಕುಗೊಳಿಸಿ 2015ರಲ್ಲಿ ಉದ್ಘಾಟಿಸಿದ್ದರು.
ಯಾತ್ರಿ ನಿವಾಸದಲ್ಲಿ ಏನೇನಿದೆ: ಒಟ್ಟು 13 ಕೋಣೆಗಳಿವೆ. ಪ್ರತಿ ಕೋಣೆಗೆ ಸ್ನಾನ ಮತ್ತು ಶೌಚಾಲಯ ಸೌಲಭ್ಯ ಕಲ್ಪಿಸಲಾಗಿದೆ. ಪ್ರತಿ ಕೋಣೆಗಳಲ್ಲಿ ಮಂಚಗಳ ವ್ಯವಸ್ಥೆ ಮಾಡಲಾಗಿದೆ. ಮೂಲಸೌಲಭ್ಯ ಕೊರತೆ ಹಿನ್ನೆಲೆಯಲ್ಲಿ ಅತ್ಯಂತ ಅವಶ್ಯವಿರುವ ನೀರಿಗಾಗಿ ಕೊಳವೆಬಾವಿ ತೋಡಿಸಲಾಗಿದೆ. ವಿದ್ಯುತ್ ಸಂಪರ್ಕ ಪಡೆಯಲಾಗಿದೆ. ಪ್ರತಿ ಕೋಣೆಗಳಿಗೂ ಫ್ಯಾನ್ ಅಳವಡಿಸಲಾಗಿದೆ.
ಹೆಚ್ಚುವರಿ 25 ಲಕ್ಷ ರೂ.: ಕಟ್ಟಡ ನಿರ್ಮಾಣವಾದ ನಂತರ ಸೂಕ್ತ ರಕ್ಷಣೆ ಇಲ್ಲದ್ದರಿಂದ ಅಗತ್ಯತೆ ಮನಗಂಡ ಶಾಸಕರು ಆವರಣ ಗೋಡೆ ನಿರ್ಮಾಣಕ್ಕಾಗಿ ಪುನಃ 25 ಲಕ್ಷ ರೂ.ಅನುದಾನ ಬಿಡುಗಡೆ ಮಾಡಿಸಿ ಕಾಮಗಾರಿ ಚುರುಕುಗೊಳಿಸುವಂತೆ ಸೂಚಿಸಿದ್ದರ ಪರಿಣಾಮ ಅಷ್ಟೇ ವೇಗದಲ್ಲಿ ಕಾಮಗಾರಿ ಏನೋ ನಡೆಯಿತು.
ಆದರೆ 1.25 ಕೋಟಿ ರೂ. ಅನುದಾನದಲ್ಲಿ ನಿರ್ಮಾಣವಾದ ಬೃಹತ್ ಅತ್ಯಾಕರ್ಷಕ ಕಟ್ಟಡ ಉದ್ದೇಶಿತ ಕೆಲಸಕ್ಕೆ ಬಳಸುವ ಕಾರ್ಯ ಮಾತ್ರ ನಡೆಯಲಿಲ್ಲ.
ಈಗ ಏನೇನಿದೆ: 1.25 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಕಟ್ಟಡದಲ್ಲಿನ ಬಹುತೇಕ ಕೋಣೆಗಳೆಲ್ಲವೂ ಈಗ ಉಂಡಾಡಿಗಳ ತಾಣಗಳಾಗಿ ಮಾರ್ಪಟ್ಟಿವೆ. ಕಿಟಕಿಗಳ ಗಾಜು ಸಂಪೂರ್ಣವಾಗಿ ಒಡೆದು ಹೋಗಿವೆ. ಇನ್ನೂ ಪ್ರವೇಶ ದ್ವಾರದಲ್ಲೇ ಒಡೆದ ಮದ್ಯದ ಬಾಟಲ್ಗಳು, ಅಲ್ಲಲ್ಲಿ ಕಣ್ಣಾಡಿಸಿದ ಕಡೆ ಸಿಗುವ ಕಾಂಡೋಂಗಳೂ ಯಾತ್ರಿಕರನ್ನು ಸ್ವಾಗತಿಸಲು ಸಿದ್ಧವಾಗಿರುತ್ತವೆ. ಇನ್ನೂ ಯಾತ್ರಿ ನಿವಾಸ ಆವರಣದಲ್ಲಿ ಗಿಡಗಂಟೆ ಬೆಳೆದ ಹಿನ್ನೆಲೆಯಲ್ಲಿ ಮೇಲುಸ್ತುವಾರಿಗೆ ಯಾರೂ ಇಲ್ಲದ್ದರಿಂದ ಆಸುಪಾಸಿನ ಜನರು ಬಿಡಿ ಜಾಗವನ್ನು ಶೌಚಕ್ಕಾಗಿ ಬಳಸುತ್ತಿರುವ ಕಾರಣ ಆ ಜಾಗ ಮಂದಿ ಹೋದ ನಂತರ ಹಂದಿಗಳ ತಾಣವಾಗಿ ಮಾರ್ಪಡುತ್ತದೆ.
ಹಸ್ತಾಂತರವಾಗಿಲ್ಲ: ಕಾಮಗಾರಿ ಅಪೂರ್ಣ ಸ್ಥಿತಿಯಲ್ಲಿ ಇರುವ ಕಾರಣ ದೇವಸ್ಥಾನ ಸಮಿತಿ ಅದನ್ನು ಹಸ್ತಾಂತರಿಸಿಕೊಳ್ಳಲು ಒಪ್ಪಿಲ್ಲ. ಅತ್ತ ನಿರ್ವಹಣೆಯೂ ಇಲ್ಲದೇ ದೇವಸ್ಥಾನ ಸಮಿತಿ ಇತ್ತ ಭೂಸೇನಾ ನಿಗಮದ ಧೋರಣೆಯಿಂದಾಗಿ ಕಟ್ಟಡಕ್ಕೆ ಅನಾಥಪ್ರಜ್ಞೆ ಕಾಡುತ್ತಿದೆ.
ಬಳಕೆ ಇಲ್ಲದೇ ಪಾಳು ಬಿದ್ದ ಕಟ್ಟಡಕ್ಕೆ ಸಂಬಂಧಿಸಿದಂತೆ ಶಾಸಕ ರಾಜಶೇಖರ ಬಿ. ಪಾಟೀಲ ಅವರು ಈಚೆಗೆ ತಾಲೂಕು ಆಡಳಿತ ಏರ್ಪಡಿಸಿದ್ದ ಕಾರ್ಯಕ್ರಮವೊಂದರಲ್ಲಿ ತಾತ್ಕಾಲಿಕ ಮೇಲುಸ್ತುವಾರಿ ಮಾಡುತ್ತಿರುವ ವ್ಯಕ್ತಿಗಳ ಹೆಸರು ತೆಗೆದುಕೊಂಡು ಬಹಿರಂಗವಾಗಿಯೇ ಸಾರ್ವಜನಿಕರ ಸಮ್ಮುಖದಲ್ಲೇ ಬೇಸರ ವ್ಯಕ್ತಪಡಿಸಿರುವುದನ್ನು ಇಲ್ಲಿ ಸ್ಮರಿಸಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು
ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್ಕಮ್ ಹೊಟೇಲ್ನಲ್ಲಿ ವ್ಯವಸ್ಥೆ
BJP ಶ್ರೀರಾಮುಲುಗೆ ಗೆಲುವು ಅನಿವಾರ್ಯ; ಕ್ಷೇತ್ರ ವಶಕ್ಕೆ ಕೈ ತವಕ
Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ
ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ