ಭೀಮಾದಿಂದ ಅಮರ್ಜಾಗೆ ನೀರು
ಕಾಮಗಾರಿ ಪೂರ್ಣಗೊಂಡಲ್ಲಿ ಪ್ರವಾಹ ತಗ್ಗಿಸಲು ಪೂರಕ •ನಾಲ್ಕು ದಿನದಲ್ಲಿ ಹರಿಯಿತು 30 ಟಿಎಂಸಿ ಅಡಿ ನೀರು
Team Udayavani, Aug 10, 2019, 1:11 PM IST
ಕಲಬುರಗಿ: ಬಿಸಿಲು ನಾಡಿನ ಜೀವನಾಡಿ ಭೀಮಾ ನದಿಯಲ್ಲಿ ಆಗಾಗ್ಗೆ ಪ್ರವಾಹ ಬಂದು ಆತಂಕ ಎದುರಾಗುವುದನ್ನು ತಕ್ಕಮಟ್ಟಿಗೆ ತಗ್ಗಿಸಲು ಹಾಗೂ ಅನಗತ್ಯವಾಗಿ ಹರಿದು ಹೋಗುವ ನೀರನ್ನು ಬಳಸುವ ನಿಟ್ಟಿನಲ್ಲಿ ನೀರು ತುಂಬಿಸುವ ಯೋಜನೆ ಕಾಮಗಾರಿಗೆ ಟೆಂಡರ್ ಅಂತಿಮವಾಗಿ ಕಾಮಗಾರಿ ಶುರುವಾಗಿದೆ.
ಮಳೆಗಾಲದಲ್ಲಿ ಭೀಮಾ ನದಿಯಲ್ಲಿ ಪ್ರವಾಹ ಬಂದಾಗ ಹರಿದು ಹೋಗುವ ಹೆಚ್ಚುವರಿ ನೀರನ್ನು ಭೋರಿ ನದಿ ಹಾಗೂ ಆಳಂದ ತಾಲೂಕಿನ ಅಮರ್ಜಾ ಜಲಾಶಯಕ್ಕೆ ಜತೆಗೆ ಅಫಜಲಪುರ, ಆಳಂದ ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವ 319 ಕೋಟಿ ರೂ. ವೆಚ್ಚದ ಕಾಮಗಾರಿಗೆ ಚಾಲನೆ ಸಿಕ್ಕಿದ್ದು, 2021ರ ಮಾರ್ಚ್ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳಿಸುವ ಸಮಯ ನಿಗದಿ ಮಾಡಲಾಗಿದೆ.
ಭೀಮಾ ಏತ ನೀರಾವರಿ ಬಳ್ಳೂಂಡಗಿ ಜಾಕ್ವೆಲ್ದಿಂದ ಭೋರಿ ಹಾಗೂ ಅಮರ್ಜಾ ಜಲಾಶಯಕ್ಕೆ, ಅಫಜಲಪುರ ತಾಲೂಕಿನ 10 ಮತ್ತು ಆಳಂದ ತಾಲೂಕಿನ ಮೂರು ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿ ಇದಾಗಿದೆ. ಬಳ್ಳುಂಡಗಿಯಿಂದ ಒಟ್ಟು 44 ಕಿ.ಮೀ ಉದ್ದದ ಕಬ್ಬಿಣದ 1.8 ಅಳತೆಯ ಪೈಪ್ಲೈನ್ ಮುಖಾಂತರ ನೀರು ತುಂಬಿಸುವ ಕಾಮಗಾರಿಯ ಟೆಂಡರ್ನ್ನು ವಿಜಯಪುರ ಜಿಲ್ಲೆಯ ಜಿ. ಶಂಕರ ಪಡೆದಿದ್ದಾರೆ.
ಭೀಮಾ ಏತ ನೀರಾವರಿ ಬಳ್ಳುಂಡಗಿ ಜಾಕ್ವೆಲ್ದಿಂದ ಹತ್ತು ದಿನಗಳ ಹಿಂದಷ್ಟೇ ಕಾಮಗಾರಿ ಆರಂಭವಾಗಿದೆ. ಆದರೆ ಮಳೆ ಹಿನ್ನೆಲೆಯಲ್ಲಿ ಕಾಮಗಾರಿ ಸ್ಥಗಿತವಾಗಿದೆ. ಅಕ್ಟೋಬರ್ ನಂತರ ಕಾಮಗಾರಿ ಚುರುಕಾಗಿ ಒಂದೂವರೆ ವರ್ಷದೊಳಗೆ ಮುಗಿಯಲಿದೆ ಎನ್ನುತ್ತಾರೆ ನೀರಾವರಿ ಇಲಾಖೆ ಅಧಿಕಾರಿಗಳು.
ಅಂತರ್ಜಲ ಹೆಚ್ಚಳಕ್ಕೆ ಪೂರಕ-ಕೇಂದ್ರೀಯ ವಿವಿಗೆ ನೀರು: ಮಳೆಗಾಲದಲ್ಲಿ ಭೀಮಾ ನದಿಯಿಂದ ಹೆಚ್ಚುವರಿಯಾಗಿ ಹರಿದು ಹೋಗುವ ನೀರನ್ನು ಕೆರೆಗೆ ಹಾಗೂ ಜಲಾಶಯಗಳಿಗೆ ತುಂಬಿದರೆ ಅಫಜಲಪುರ ಹಾಗೂ ಆಳಂದ ತಾಲೂಕಿನಲ್ಲಿ ಅಂತರ್ಜಲ ಹೆಚ್ಚಳಕ್ಕೆ ಪೂರಕವಾಗುವುದು. ಅಲ್ಲದೇ ತೋಟಗಾರಿಕೆ ಕೃಷಿಗೆ ಸಹಕಾರಿಯಾಗಲಿದೆ. ಭೀಮಾ ನದಿಯುದ್ದಕ್ಕೂ ಇರುವ ನೀರಾವರಿ ಕೃಷಿ ಈ ಯೋಜನೆ ಪೂರ್ಣಗೊಂಡಲ್ಲಿ ತಾಲೂಕಿನಾದ್ಯಂತ ವಿಸ್ತರಣೆಯಾಗಲಿದೆ.
ಕಡಗಂಚಿ ಬಳಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಆರಂಭದಿಂದಲೂ ಕುಡಿಯುವ ನೀರಿನ ತೊಂದರೆ ತೀವ್ರವಾಗಿ ಅನುಭವಿಸುತ್ತಿದೆ. ಕೆಲವು ಸಲ ನೀರಿನ ತೊಂದರೆಯಿಂದ ರಜೆ ನೀಡಲಾಗಿದೆ. ಆದರೆ ಈ ಯೋಜನೆ ಪೂರ್ಣಗೊಂಡು ಅಮರ್ಜಾ ಜಲಾಶಯಕ್ಕೆ ನೀರು ತುಂಬಿದಲ್ಲಿ ಕೇಂದ್ರೀಯ ವಿವಿಗೆ ಶಾಶ್ವತವಾಗಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬಹುದಾಗಿದೆ. ಅಲ್ಲದೇ ಅಫಜಲಪುರ ತಾಲೂಕಿನ ಬಂದರವಾಡ ಬಳಿಯೂ 68 ಕೋಟಿ ರೂ. ವೆಚ್ಚದಲ್ಲಿ ಜಾಕವೆಲ್ವೊಂದನ್ನು ರೂಪಿಸಲು ಡಿಪಿಆರ್ ರೂಪಿಸಲಾಗಿದೆ. ಇದಕ್ಕೂ ಟೆಂಡರ್ ಕರೆಯಲು ಮುಂದಾಗಲಾಗಿದೆ.
ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕನ್ನು ಪ್ರವೇಶಿಸಿ ಜಿಲ್ಲೆಯಲ್ಲಿ 110 ಕಿ.ಮೀ ಭೀಮಾ ನದಿ ಹರಿಯಲಿದ್ದು, ಕೃಷ್ಣಾ ನೀರು ಹಂಚಿಕೆ ಪ್ರಾಧಿಕಾರದ ಪ್ರಕಾರ 15 ಟಿಎಂಸಿ ನೀರು ಬಳಸುವ ಅಧಿಕಾರವಿದೆ. ಭೀಮಾ ಏತ ನೀರಾವರಿ ಹಾಗೂ ಸನ್ನತಿ ಮತ್ತು ಕೆಬಿಜೆಎನ್ಎಲ್ ಕಾಮಗಾರಿಗಳಿಂದ ಈ ನೀರನ್ನು ಬಳಕೆ ಮಾಡಲಾಗುತ್ತಿದೆ. ಆದರೂ ಒಟ್ಟಾರೆ ಹಂಚಿಕೆ ಪ್ರಮಾಣದ ನೀರು ಸಂಪೂರ್ಣ ಬಳಕೆ ಮಾಡಲಿಕ್ಕಾಗುತ್ತಿಲ್ಲ. ಭೋರಿ ಹಾಗೂ ಅಮರ್ಜಾ ಜಲಾಶಯ ಮತ್ತು ಕೆರೆಗಳಿಗೆ ನೀರು ತುಂಬಿಸುವ ಈ ಯೋಜನೆ ಪೂರ್ಣಗೊಂಡಲ್ಲಿ ಆಗಾಗ್ಗೆ ಎದುರಾಗುವ ಭೀಮಾ ನದಿ ಪ್ರವಾಹ ಸ್ವಲ್ಪ ಮಟ್ಟಿಗೆ ತಗ್ಗಿಸುವುದರ ಜತೆಗೆ ನೀರಾವರಿ ಕೃಷಿ ಹೆಚ್ಚಳ ಹಾಗೂ ಅಂತರ್ಜಲ ಹೆಚ್ಚಳಕ್ಕೆ ಪೂರಕವಾಗಲಿದೆ. ವಿಳಂಬವಾಗದೇ ಕಾಮಗಾರಿ ನಿಗದಿತ ಸಮಯದೊಳಗೆ ಮುಗಿಯಬೇಕು ಎನ್ನುತ್ತಾರೆ ರೈತರು ಹಾಗೂ ಸಾರ್ವಜನಿಕರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್
Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ
Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ
Lok Sabha elections ನಂತರ ರಾಜ್ಯ ವಿಧಾನಸಭೆ ವಿಸರ್ಜನೆಯಾದರೂ ಆಶ್ಚರ್ಯವಿಲ್ಲ: ಯತ್ನಾಳ್
Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ ಸಾವು