ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರಿಗೆ ಸಿಕ್ತಿಲ್ಲ ಸೂಕ್ತ ಚಿಕಿತ್ಸೆ!
ಸಾವಿನ ಕುರಿತಾಗಿಯೂ ನಿಖರವಾಗಿ ವರದಿ ಬರುತ್ತಿಲ್ಲ
Team Udayavani, Jul 25, 2020, 9:16 AM IST
ಕಲಬುರಗಿ: ಕೋವಿಡ್ ಗೇ ದೇಶದಲ್ಲೇ ಮೊದಲ ಸಾವು ಸಂಭವಿಸಿದ ಕಲಬುರಗಿ ಜಿಲ್ಲೆಯಲ್ಲಿ ಈಗ ಕೋವಿಡ್ ತನ್ನ ಎಲ್ಲೇ ಮೀರಿ ಸಾಗುತ್ತಿದೆ. ವಾಸ್ತವವಾಗಿ ಸೋಂಕಿತರ ಸಂಖ್ಯೆ ಹಾಗೂ ದಿನಾಲು ಸಾವನ್ನಪ್ಪುತ್ತಿರುವ ಕುರಿತಾಗಿ ನಿಖರವಾದ ಮಾಹಿತಿ ಬರುತ್ತಿಲ್ಲ ಎಂಬ ಆತಂಕಕಾರಿ ಅಂಶ ಕೇಳಿ ಬರುತ್ತಿದೆ.
ಏಕೆಂದರೆ ನಾಲ್ಕು ದಿನಗಳ ಹಿಂದೆ ಇಎಸ್ಐಯಲ್ಲಿ ಆಕ್ಸಿಜೆನ್ ಕೊರತೆ ಇಲ್ಲವೇ ಸೋರಿಕೆಯಾಗಿ ಎಂಟು ಜನರು ಮೃತಪಟ್ಟಿದ್ದಾರೆ ಎನ್ನಲಾಗುತ್ತಿದೆ. ಅದೇ ರೀತಿ ಚಿತ್ತಾಪುರ ತಾಲೂಕಿನ 30 ಶುದ್ಧ ಕುಡಿಯುವ ನೀರಿನ ಘಟಕ ನಿರ್ವಹಿಸುತ್ತಿದ್ದ ವ್ಯಾಪಾರಿಯೊಬ್ಬರು ಕೋವಿಡ್ ದಿಂದ ಮೃತಪಟ್ಟಿದ್ದಾರೆ. ಹೀಗೆ ಅಲ್ಲಲ್ಲಿ ಕೋವಿಡ್ ದಿಂದ ಮೃತಪಟ್ಟಿದ್ದಾರೆಂಬ ವರದಿ ಕೇಳಿ ಬರುತ್ತಲೇ ಇದೆ. ಆದರೆ ಹೆಲ್ತ್ ಬುಲೆಟನ್ದಲ್ಲಿ ಈ ವರದಿಯೇ ಇನ್ನೂವರೆಗೆ ಬಂದಿಲ್ಲ. ಇದನ್ನೆಲ್ಲ ನೋಡಿದರೆ ಕೊರೊನಾಗೆ ಸಂಬಂಧಿಸಿದಂತೆ ಎಲ್ಲವನ್ನು ಮುಚ್ಚಿಡಲಾಗುತ್ತಿದೆಯೇ? ಎಂಬ ಸಂಶಯ ಕಾಡುತ್ತಿದೆ. ಕೋವಿಡ್ ಸೋಂಕಿತರಿಂದ ಇಎಸ್ಐ, ಜೀಮ್ಸ್ ಹಾಗೂ ನಿಗದಿಪಡಿಸಲಾದ ಖಾಸಗಿ ಆಸ್ಪತ್ರೆಗಳೆರಡೂ ಫುಲ್ ಆಗಿವೆ. ಹೀಗಾಗಿ ದಿನಾಲು ಬರುತ್ತಿರುವ 200 ಅಧಿಕ ಸೋಂಕಿತರಿಗೆ ಚಿಕಿತ್ಸೆ ಏಲ್ಲಿ ಎನ್ನುವಂತಾಗಿದೆ.
ಬಲ್ಲ ಮಾಹಿತಿಗಳ ಪ್ರಕಾರ ಪರೀಕ್ಷೆ ಇನ್ನಷ್ಟು ಹೆಚ್ಚಾದರೆ ಹಾಗೂ ವರದಿ ಬೇಗ ಬಂದರೆ ದಿನಾಲು 500ದಿಂದ ಸಾವಿರ ಜನರಿಗೆ ಕೊರೊನಾ ದೃಢಪಡುವ ಸಾಧ್ಯತೆಗಳೇ ಹೆಚ್ಚು. ಕೊರೊನಾಗೆ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ ಎಂಬುದು ಸೋಂಕಿತರ ಅಳಲಾಗಿದೆ. ಉಸಿರಾಟದಿಂದ ಬಳಲುವವರಿಗೆ ಸಕಾಲಕ್ಕೆ ವೆಂಟಿಲೇಟರ್, ಆಕ್ಸಿಜೆನ್ ದೊರೆಯದ ಕಾರಣದಿಂದ ಸಾವನ್ನಪ್ಪುತ್ತಿದ್ದಾರೆಂಬುದು ಬಹಿರಂಗ ಸತ್ಯ. ಜನಪ್ರತಿನಿಧಿಗಳು ದೂರ: ಜಿಲ್ಲಾಧಿಕಾರಿಗಳೇ ಕೋವಿಡ್ ರೋಗದ ಕುರಿತಾಗಿ ಸಭೆಗಳನ್ನು ನಡೆಸುತ್ತಾ ನಿಗಾ ವಹಿಸುತ್ತಿದ್ದಾರೆ. ಪರೀಕ್ಷೆ ವೇಗ ಹಾಗೂ ಚಿಕಿತ್ಸೆ ನೀಡುವ ಸಂಬಂಧ ಸಭೆಯಲ್ಲೇ ಸೂಚನೆ ನೀಡುತ್ತಿದ್ದಾರೆ. ಚಿಕಿತ್ಸೆ ಕುರಿತಾಗಿ ಸಮರ್ಪಕ ಮಾಹಿಯೇ ಜಿಲ್ಲಾಡಳಿತದಿಂದ ಹೊರ ಬರುತ್ತಿಲ್ಲ ಎಂಬುದು ಸಾರ್ವಜನಿಕರ ಕೊರಗಾಗಿದೆ. ಇನ್ನೂ ಉಸ್ತುವಾರಿ ಸಚಿವರಾಗಿರುವ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಮೂರು ತಿಂಗಳಿನಿಂದ ಕಲಬುರಗಿಯತ್ತ ಸುಳಿದಿಲ್ಲ. ಕಳೆದ ಮೇ 2ರಂದು ಉಸ್ತುವಾರಿ ಸಚಿವರು ಕಲಬುರಗಿಗೆ ಬಂದು ಹೋಗಿದ್ದೆ ಕೊನೆ ಭೇಟಿಯಾಗಿದೆ.
ಅಂದು ಆಗಮಿಸಿದ್ದ ಸಚಿವರು ಅಧಿಕಾರಿಗಳ ಸಭೆ ನಡೆಸಿದರು. ಕೋವಿಡ್ ಸೋಂಕಿತರ ಪತ್ತೆಗಾಗಿ ಮನೆ-ಮನೆ ಸಮೀಕ್ಷೆ ನಡೆಸಿ ಎಂದು ಸೂಚನೆ ಕೊಟ್ಟು ಹೋದವರು ಇಂದಿನವರೆಗೂ ಕಲಬುರಗಿಯತ್ತ ಮುಖ ಮಾಡಿಲ್ಲ. ಕಲಬುರಗಿಯಲ್ಲೇ ನಡೆಸಬೇಕಿದ್ದ ಕಲ್ಯಾಣ ಕರ್ನಾಟಕ ಮಂಡಳಿಯ ಕ್ರಿಯಾ ಯೋಜನೆ ಸಭೆಯನ್ನೂ ಸಹ ಬೆಂಗಳೂರಿನಲ್ಲೇ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಇನ್ನೂ ಶಾಸಕರಂತು ತಾವಾಯಿತು ತಮ್ಮ ಪಾಡು ಎನ್ನುವಂತಿದ್ದಾರೆ.
ಸಂಸದರಂತು ಬೆಂಗಳೂರು-ನವದೆಹಲಿಗೆ ಹೋಗಿ ಬಂದು ಕೋವಿಡ್ ಸಂಬಂಧವಾಗಿ ಮಾಹಿತಿ ಪಡೆಯುತ್ತಿದ್ದರೂ ಫಲಿತಾಂಶದಲ್ಲಿ ಮಾತ್ರ ಏನು ಪ್ರಗತಿ ಕಾಣಾ¤ ಇಲ್ಲ. ಕೋವಿಡ್ ಗೆ ಸೂಕ್ತ ಚಿಕಿತ್ಸೆ ಸಿಕ್ತಾ ಇಲ್ಲ. ಖಾಸಗಿ ಆಸ್ಪತ್ರೆಗಳು ಶೇ.50ರಷ್ಟು ಕೋವಿಡ್ ಸೊಂಕಿತರಿಗೆ ಬೆಡ್ ಮೀಸಲಿಡುತ್ತಿಲ್ಲ ಎಂದು ಸಂಸದರಿಗೆ ಕೇಳಿದರೆ ಎಲ್ಲ ಜವಾಬ್ದಾರಿ ಡಿಸಿಯವರಿಗೆ ನೀಡಲಾಗಿದೆ ಎಂದಿರುವುದನ್ನು ನೋಡಿದರೆ ಜನಪ್ರತಿನಿಧಿಗಳು ಕಲಬುರಗಿಯಲ್ಲಿ ಯಾವ ನಿಟ್ಟಿನಲ್ಲಿ ನಿಗಾ ವಹಿಸುತ್ತಿದ್ದಾರೆ ಎಂಬುದು ನಿರೂಪಿಸುತ್ತದೆ. ಇಎಸ್ಐ ಆಸ್ಪತ್ರೆಯಲ್ಲಿ ಕೋವಿಡ್ ಪರೀಕ್ಷಾ ಕೇಂದ್ರ ಇನ್ನೂ ಕಾರ್ಯಾರಂಭ ಮಾಡದಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪರೀಕ್ಷಾ ಕೇಂದ್ರ ಶುರು ಮಾಡಲಿಕ್ಕಾಗದವರು ಏನು ಮಾಡ್ತಾರೆ ಎಂಬ ಪ್ರಶ್ನೆಗೆ ಜನಪ್ರತಿನಿಧಿಗಳ ಬಳಿ ಉತ್ತರವೇ ಇಲ್ಲ. ಹತ್ತಾರು ದಿನ ಕಳೆದರೂ ಕೋವಿಡ್-19 ಪರೀಕ್ಷೆ ವರದಿ ಬಾರದಿರುವುದು ಸಹ ಆತಂಕ ಉಂಟು ಮಾಡಿದೆ. ಆಸ್ಪತ್ರೆಗೆ ದಾಖಲಾದವರು ನೆಗೆಟಿವ್ ಕುರಿತಾಗಿ ನೀಡಲಾದ ವರದಿಯೂ ಸಹ ಹತ್ತಾರು ದಿನಗಳು ಕಳೆದರೂ ವರದಿ ಬಾರದೇ ಇರುವುದರಿಂದ ಸೋಂಕಿತರು ವಿನಾಕಾರಣ ನರಳುವಂತಾಗಿದೆ.
ಖಾಸಗಿ ಆಸ್ಪತ್ರೆಗಳು ಶೇ.50 ಬೆಡ್ ಮೀಸಲಿಡುತ್ತಿಲ್ಲ : ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಸೋಂಕಿತರಿಗೆ ಶೇ.50ರಷ್ಟು ಬೆಡ್ ಗಳು ಮೀಸಲಿಡಬೇಕೆಂದು ನಿರ್ದೇಶನ ಕಲಬುರಗಿ ಪಾಲನೆಯಾಗುತ್ತಿಲ್ಲ. ಬಸವೇಶ್ವರ ಆಸ್ಪತ್ರೆ ಹಾಗೂ ಧನ್ವಂತರಿ ಆಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್ ತೆರೆದು ಬೆಡ್ಗಳು ಮೀಸಲಿಟ್ಟರೂ ನಿರ್ದೇಶನುಸಾರ ಬೆಡ್ ಮೀಸಲಿಟ್ಟಿಲ್ಲ. ಉಳಿದ ಖಾಸಗಿ ಪ್ರತಿಷ್ಠಿತ ಆಸ್ಪತ್ರೆಗಳು ಕೋವಿಡ್ ಗೆ ಚಿಕಿತ್ಸೆ ನೀಡಲು ಮುಂದೆ ಬರುತ್ತಿಲ್ಲ. ಸಣ್ಣ-ಸಣ್ಣ ಖಾಸಗಿ ಆಸ್ಪತ್ರೆಗಳ ವೈದ್ಯರು ತಮ್ಮ ಪ್ರಾಣದ ಹಂಗು ತೊರೆದು ಜನಸಾಮಾನ್ಯರ ಅನಾರೋಗ್ಯಕ್ಕೆ ಚಿಕಿತ್ಸೆ ನೀಡಲಾರಂಭಿಸಿದರೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖಾಧಿಕಾರಿಗಳು ತನಿಖೆ ನೆಪದಲ್ಲಿ ಕಿರುಕುಳ ಕೊಡುತ್ತಿರುವುದಲ್ಲದೇ ಆಸ್ಪತ್ರೆ ಬಂದ್ ಮಾಡುತ್ತೇನೆ ಎಂದು ಎಚ್ಚರಿಸುತ್ತಿರುವುದು ಆತ್ಮಾವಲೋಕನಕ್ಕೆ ದಾರಿ ಮಾಡಿಕೊಟ್ಟಿದೆ.
ಜೀಮ್ಸ್, ಇಎಸ್ಐ ಆಸ್ಪತ್ರೆ, ಬಸವೇಶ್ವರ ಆಸ್ಪತ್ರೆ ಹಾಗೂ ಧನ್ವಂತರಿ ಸೇರಿದಂತೆ ಎಲ್ಲಾ ಕೋವಿಡ್ ಆಸ್ಪತ್ರೆಗಳು ಬಹುತೇಕ ಭರ್ತಿಯಾಗಿವೆ. ಕಲಬುರಗಿ ಮತ್ತು ಯಾದಗಿರಿ ಜಿಲ್ಲೆ ಸೇರಿ ಸುಮಾರು 46 ಲಕ್ಷ ಜನಸಂಖ್ಯೆವಿದ್ದು, ಇದರಲ್ಲಿ ಶೇ.1 ಜನರಿಗೂ ಸೋಂಕು ತಗುಲಿದರೂ ಅವರ ಆರೈಕೆಗಾಗಿ 46 ಸಾವಿರ ಬೆಡ್ಗಳು ಬೇಕಾಗುತ್ತವೆ. ಆದರೆ ಸಂಖ್ಯೆಯಲ್ಲಿ ಕಲಬುರಗಿ ಜಿಲ್ಲಾಡಳಿತ ಯಾವುದೇ ಸಿದ್ಧತೆ ಮಾಡಿಕೊಂಡಿಲ್ಲ. ಸದ್ಯ ಇರುವ ಕೋವಿಡ್ ಆಸ್ಪತ್ರೆಗಳಲ್ಲಿ ಸೂಕ್ತ ವ್ಯವಸ್ಥೆಗಳಿಲ್ಲ. ರೋಗಿಯ ಪ್ರಥಮ ಮತ್ತು ದ್ವಿತೀಯ ಸಂಪರ್ಕದ ವ್ಯಕ್ತಿಗಳನ್ನು ಐಸೋಲೇಶನ್ಗೆ ಒಳಪಡಿಸಲು ಯಾವುದೇ ರೀತಿಯ ವ್ಯವಸ್ಥೆ ಕಲ್ಪಿಸಿಲ್ಲ. ತಜ್ಞರು ಮತ್ತು ತಮ್ಮ ಸಚಿವ ಸಂಪುಟದ ಸಹೋದ್ಯೋಗಿಗಳೆ ಹೇಳಿರುವಂತೆ ಅಕ್ಟೋಬರ್, ನವೆಂಬರ್ ತಿಂಗಳಲ್ಲಿ ರೋಗವು ಇನ್ನಷ್ಟು ಉಲ್ಬಣಗೊಳ್ಳುತ್ತದೆ ಎಂದು ಬಾಯಿಂದ ಹೇಳುತ್ತಿದ್ದಾರೆ. ಆದರೆ ಯಾವುದೇ ರೀತಿಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳದೇ ಇರುವುದು ಆಡಳಿತದ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿತನ ತೋರಿಸುತ್ತದೆ.– ಬಿ.ಆರ್. ಪಾಟೀಲ್, ಮಾಜಿ ಶಾಸಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್
Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ
Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ
Lok Sabha elections ನಂತರ ರಾಜ್ಯ ವಿಧಾನಸಭೆ ವಿಸರ್ಜನೆಯಾದರೂ ಆಶ್ಚರ್ಯವಿಲ್ಲ: ಯತ್ನಾಳ್