ರಾಜ್ಯ ಸರಕಾರದಿಂದ “ಭೂವಸ್ತ್ರ ‘ ಯೋಜನೆ ಜಾರಿ
Team Udayavani, Feb 14, 2019, 1:00 AM IST
ಕಾಸರಗೋಡು: ಜಿಲ್ಲೆಯ ಹುರಿಹಗ್ಗ ಕಾರ್ಮಿಕರಿಗೆ ರಾಜ್ಯ ಸರಕಾರದ ಹುರಿಹಗ್ಗ ಭೂವಸ್ತ್ರ (ಮ್ಯಾಟ್)ಯೋಜನೆ ವರದಾನ ರೂಪದಲ್ಲಿ ಜಾರಿಗೊಂಡಿದೆ.
2017-18ನೇ ಆರ್ಥಿಕ ವರ್ಷದಲ್ಲಿ ಈ ಯೋಜನೆಗಾಗಿ ಜಿಲ್ಲೆಯಲ್ಲಿ 19 ಲಕ್ಷ ರೂ. ವೆಚ್ಚ ಮಾಡಲಾಗಿದೆ. ಹುರಿಹಗ್ಗ ಉದ್ದಿಮೆಗೆ ಪುನಶ್ಚೇತನ ಒದಗಿಸುವ, ಹುರಿಹಗ್ಗ ಕಾರ್ಮಿಕರಿಗೆ ಹೆಚ್ಚುವರಿ ದುಡಿಮೆಯ ದಿನಗಳನ್ನು ಒದಗಿಸುವ ಉದ್ದೇಶದಿಂದ ಭೂವಸ್ತ್ರ ಯೋಜನೆ ರೂಪಿಸಲಾಗಿದೆ. 2017ರಲ್ಲಿ ಈ ಯೋಜನೆ ಜಾರಿಗೆ ತರಲಾಗಿದೆ. ಹುರಿಹಗ್ಗ ಸೊಸೈಟಿಗಳ ಸದಸ್ಯರು ಪ್ರಧಾನವಾಗಿ ಈ ಯೋಜನೆಯ ಫಲಾನುಭವಿಗಳಾಗಿದ್ದಾರೆ.
ಈ ವರ್ಷ ಹೆಚ್ಚುವರಿ ಪಂಚಾಯತ್ಗಳಲ್ಲಿ ಈ ಯೋಜನೆ ಜಾರಿಗೊಳಿಸುವ ಉದ್ದೇಶವಿದೆ ಎಂದು ಅ ಧಿಕಾರಿಗಳು ತಿಳಿಸಿದರು.
ಕಾಯರ್ ಬೋರ್ಡ್ ಮೂಲಕ ಜಾರಿ
ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಯೊಂದಿಗೆ ಕೈಜೋಡಿಸಿ ವಿವಿಧ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಕಾಯರ್ ಬೋರ್ಡ್ ಮೂಲಕ ಯೋಜನೆ ಜಾರಿಗೊಳ್ಳಲಿದೆ.
ಹತ್ತು ಹಲವು ವಿಧದಲ್ಲಿ ಉಪಯೋಗಿ
ವಿವಿಧ ಗ್ರಾಮ ಪಂಚಾಯತ್ಗಳಲ್ಲಿ ಜಲಾಶಯಗಳ ಸಂರಕ್ಷಣೆ, ಕಿರು ಅಣೆಕಟ್ಟುಗಳ ನಿರ್ಮಾಣ, ನಡೆವ ಹಾದಿ ನಿರ್ಮಾಣ ಇತ್ಯಾದಿಗಳಿಗೆ ಹುರಿಹಗ್ಗ ಭೂವಸ್ತ್ರ ಬಳಸಲಾಗುತ್ತಿದೆ. ಮಣ್ಣು ಕೊಚ್ಚಿ ಹೋಗದಂತೆ ಸಂರಕ್ಷಣೆ ನೀಡಲು ತಡೆಗೋಡೆ ನಿರ್ಮಾಣ ನಡೆಸಲಾಗುವುದು.
ಕೃಷಿ ಜಾಗಗಳಿಗೆ ನೀರು ಹರಿದು ಬರುವ ವ್ಯವಸ್ಥೆ, ಕೆರೆ ಇತ್ಯಾದಿ ಜಲಾಶಯಗಳ ಪಾರ್ಶ್ವಭಿತ್ತಿ ನಿರ್ಮಾಣ, ರಸ್ತೆ ನಿರ್ಮಾಣಗಳಿಗೆ, ಗೋಡೆ ನಿರ್ಮಾಣ ಇತ್ಯಾದಿಗಳಿಗೆ ಇದು ಬಳಕೆಯಾಗಲಿದೆ. ಒಂದು ಚದರಡಿ ಭೂವಸ್ತ್ರ ರಚನೆಗೆ 65 ರೂ. ಗಳಂತೆ ಇದರ ಮಾರಾಟ ನಡೆಯಲಿದೆ. ಬೇಡಿಕೆಗನುಸಾರ ಭೂವಸ್ತ್ರದ ನೇಕಾರಿಕೆಯೂ ನಡೆಯಲಿದೆ.
ಪರಂಪರಾಗತ ಹುರಿಹಗ್ಗ ಉದ್ದಿಮೆ ವಲಯದ ಕಾರ್ಮಿಕರನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಈ ಯೋಜನೆ ರಚಿಸಲಾಗಿದೆ. ಹುರಿಹಗ್ಗ ಕಾರ್ಮಿಕರು ಕಾಯಕವಿಲ್ಲದೆ ಮನೆಯಲ್ಲಿ ಕೂರಬೇಕಾದ ಸ್ಥಿತಿ ಇರಬಾರದು ಎಂಬ ಉದ್ದೇಶದಿಂದ ಮತ್ತು ಹುರಿಹಗ್ಗ ಉದ್ದಿಮೆಗೆ ಉತ್ತೇಜನ ನೀಡುವ ಗುರಿಯೊಂದಿಗೆ ಈ ಯೋಜನೆ ಜಾರಿಗೊಳ್ಳುತ್ತಿದೆ.
ಮಧೂರು, ಪಳ್ಳಿಕ್ಕರೆ, ವಲಿಯಪರಂಬ, ಪಡನ್ನ, ಕಯ್ಯೂರು-ಚೀಮೇನಿ, ಪಿಲಿಕೋಡ್, ಅಜಾನೂರ್, ಮಡಿಕೈ, ಕಿನಾನೂರ್-ಕರಿಂದಳಂ, ಪನತ್ತಡಿ ಎಂಬ ಗ್ರಾಮ ಪಂಚಾಯತ್ಗಳಲ್ಲಿ ಈ ಯೋಜನೆ ಜಾರಿಗೊಳಿಸಲಾಗಿದೆ.