15 ದಿನಗಳಲ್ಲಿ ಪರಿಹಾರ: ಸಚಿವ ಆರ್.ಅಶೋಕ್
ಕೊಡಗು ಜಿಲ್ಲೆಯ ಬೆಳೆ ಹಾನಿ ಪ್ರದೇಶಕ್ಕೆ ಕಂದಾಯ ಸಚಿವರ ಭೇಟಿ
Team Udayavani, Nov 23, 2021, 5:45 AM IST
ಸೋಮವಾರಪೇಟೆ: ಅಕಾಲಿಕ ಮಳೆಯಿಂದ ಕಾಫಿ ಬೆಳೆಗಾರರಿಗೆ ಅತೀ ಹೆಚ್ಚಿನ ನಷ್ಟವಾಗಿದ್ದು, ಮರು ಸಮೀಕ್ಷೆ ಮಾಡಿಸಿ 15 ದಿನಗಳ ಒಳಗೆ ಸರಕಾರಕ್ಕೆ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದರು.
ಸೋಮವಾರಪೇಟೆ ತಾಲೂಕು ಕಚೇರಿಯಲ್ಲಿ ಸೋಮವಾರ ಸಂಜೆ ನಡೆದ ಅಕಾಲಿಕ ಮಳೆಯಿಂದ ಬೆಳೆಹಾನಿ ಪರಿಶೀಲನ ಸಭೆಯಲ್ಲಿ ಅವರು ಮಾತನಾಡಿದರು.
ಕೊಡಗಿನಲ್ಲಿ ರೈತರೇ ಕಾಫಿ ಬೆಳೆಯುತ್ತಿದ್ದು, ಅಕಾಲಿಕ ಮಳೆಯಿಂದ ಪ್ರತೀ ವರ್ಷ ನಷ್ಟ ಅನುಭವಿಸುತ್ತಿರುವ ಬಗ್ಗೆ ಬೆಳೆಗಾರರು ಮನವರಿಕೆ ಮಾಡಿದ್ದಾರೆ. ಬೆಳೆಗಾರರ 10 ಎಚ್.ಪಿ. ವಿದ್ಯುತ್ ಚಾಲಿತ ಪಂಪ್ಸೆಟ್ಗಳಿಗೆ ಉಚಿತ ವಿದ್ಯುತ್ ಕಲ್ಪಿಸುವ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ, ತೀರ್ಮಾನ ಕೈಗೊಳ್ಳುತ್ತೇವೆ. ಕಾಫಿಯನ್ನು ಕೃಷಿಬೆಳೆ ಎಂದು ಪರಿಗಣಿಸುವ ಬಗ್ಗೆ ಕೇಂದ್ರ ಸರಕಾರಕ್ಕೆ ಮನವರಿಕೆ ಮಾಡಿಕೊಡುವ ಪ್ರಯತ್ನ ನಡೆದಿದೆ ಎಂದರು.
ಇದನ್ನೂ ಓದಿ:ಪ್ರವಾಹ ಪೀಡಿತ ಪ್ರದೇಶಗಳಿಗೆ ಇಲಾಖಾ ಸಚಿವರ ಭೇಟಿ: ಸಿಎಂ
ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ.
ಕೊಡಗಿನಲ್ಲಿ 3 ಜೀವಹಾನಿಯಾಗಿದೆ. ತಲಾ 5 ಲಕ್ಷ ರೂ. ಪರಿಹಾರ ನೀಡಲಾಗುತ್ತದೆ. ಒಟ್ಟು 40,878 ಹೆಕ್ಟೇರ್ನಲ್ಲಿ ಬೆಳೆಹಾನಿಯಾಗಿದೆ. ಅದರಲ್ಲಿ 38,500 ಹೆಕ್ಟೇರ್ನಲ್ಲಿ ಕಾಫಿ ಫಸಲು ಹಾನಿಯಾಗಿದೆ ಎಂದು ಹೇಳಿದರು. ಶೇ. 30ಕ್ಕಿಂತ ಹೆಚ್ಚಿನ ಹಾನಿಯಾಗಿದ್ದರೆ ಸೂಕ್ತ ಪರಿಹಾರ ಕಲ್ಪಿಸಲಾಗುವುದು. ಕೊಡಗಿನಲ್ಲಿ ಮುಂಗಾರಿನಲ್ಲಿ 127 ಕೋಟಿ ರೂ. ಹಾನಿಯಾಗಿದೆ ಎಂದು ಹೇಳಿದರು.
ರಾಜ್ಯದ ಯಾವುದೇ ಭಾಗದಲ್ಲಿ ರೈತರಿಗೆ ತಾವು ಬೆಳೆದ ಬೆಳೆ ನಷ್ಟವಾದಲ್ಲಿ ತತ್ಕ್ಷಣವೇ ಸರಕಾರದ ವತಿಯಿಂದ ಅವರ ಖಾತೆಗೆ ಹಣ ಜಮೆಯಾಗಬೇಕು ಎಂದರು.
ಜಿಲ್ಲಾಧಿಕಾರಿ ಡಾ| ಬಿ.ಸಿ. ಸತೀಶ್, ತಹಶೀಲ್ದಾರ್ ಗೋವಿಂದರಾಜು, ವಿವಿಧ ಇಲಾಧಿಕಾರಿಗಳು ಇದ್ದರು.