ಅತ್ತೂರುನಲ್ಲೂರು ಗ್ರಾಮದಲ್ಲಿ ಮತ್ತೆ ಹುಲಿ ದಾಳಿ: ಹಸು ಬಲಿ
Team Udayavani, Jun 26, 2018, 11:28 AM IST
ಮಡಿಕೇರಿ: ಹುಲಿ ದಾಳಿಗೆ ಮತ್ತೂಂದು ಹಸು ಬಲಿಯಾಗಿರುವ ಘಟನೆ ಸುಂಟಿಕೊಪ್ಪ ಸಮೀಪದ ಅತ್ತೂರು
ನಲ್ಲೂರು ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನಿವಾಸಿ ರಾಬರ್ಟ್ ಎಂಬರಿಗೆ ಸೇರಿದ 3 ವರ್ಷ 9 ತಿಂಗಳು ಪ್ರಾಯದ, ಗಬ್ಬದ ಹಸುವಿನ ಮೇಲೆ ಹುಲಿ ದಾಳಿ ಮಾಡಿ ಕೊಂದು ಹಾಕಿದೆ. ಮೇಯಲು ಹೋಗಿದ್ದ ಹಸು ಕಳೆದೆರಡು ದಿನಗಳಿಂದ ಕಾಣೆಯಾಗಿತ್ತು. ಮನೆಯ ಹತ್ತಿರವಿರುವ ತೊರೆಯ ಬದಿಯಲ್ಲಿ ನೀರು ಕುಡಿಯಲು ಹೋದ ಸಂದರ್ಭ ಹತ್ತಿರದ ಮೀನುಕೊಲ್ಲಿ ಅರಣ್ಯದಿಂದ ಬಂದ ಹುಲಿ ದಾಳಿ ಮಾಡಿರುವ ಬಗ್ಗೆ ಸಂಶಯ ವ್ಯಕ್ತವಾಗಿದೆ.
ಮಾಹಿತಿ ದೊರೆತ ಮೇರೆಗೆ ಉಪವಲಯ ಅರಣ್ಯಾಧಿಕಾರಿ ಕನ್ನಂಡ ರಂಜನ್ ಹಾಗೂ ಸಿಬಂದಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಕೊಂದ ಮಾರನೆಯ ದಿನ ಹುಲಿ ಬಂದು ಹಸುವಿನ ಹಿಂಬದಿಯ ಮಾಂಸವನ್ನು ತಿಂದು ಹಾಕಿದೆ. ಚೆಟ್ಟಳ್ಳಿ ಪಶುವೈದ್ಯಾಧಿಕಾರಿ ಡಾ| ಸಂಜೀವ ಕುಮಾರ್ ಸಿಂಧೆ ಅವರು ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಸುತ್ತಮುತ್ತಲ ಪ್ರದೇಶದಲ್ಲಿ ಹುಲಿಯ ಚಲನವಲನ ಇರುವ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಿದ್ದಾರೆ.