ಬಕ್ರೀದ್ ಪ್ರಾರ್ಥನೆ ಸಲ್ಲಿಸಿ 31 ಸಾವಿರ ದೇಣಿಗೆ ಸಂಗ್ರಹ
•ಅಂಜುಮನ್ ಇಸ್ಲಾಂ ಕಮಿಟಿ ವತಿಯಿಂದ ಸಹಾಯ ಹಸ್ತ
Team Udayavani, Aug 14, 2019, 1:33 PM IST
ಹನುಮಸಾಗರ: ಅಂಜುಮನ್ ಇಸ್ಲಾಂ ಕಮಿಟಿ ವತಿಯಿಂದ ಸಂತ್ರಸ್ತರಿಗಾಗಿ ಸಂಗ್ರಹಿಸಿದ 31 ಸಾವಿರ ರೂ. ಮೌಲ್ಯದ ಚೆಕ್ಅನ್ನು ಶಾಸಕ ಅಮರೇಗೌಡ ಬಯ್ನಾಪೂರ ಸಮ್ಮುಖದಲ್ಲಿ ಜಿಲ್ಲಾಧಿಕಾರಿ ಪಿ ಸುನಿಲಕುಮಾರ ಅವರಿಗೆ ನೀಡಿದರು.
ಹನುಮಸಾಗರ: ಬಕ್ರೀದ್ ಹಬ್ಬದ ನಿಮಿತ್ತ ಸಾಮೂಹಿಕ ಪ್ರಾರ್ಥನೆ ಸಲ್ಲಿದ ಬಳಿಕ ಇಲ್ಲಿನ ಅಂಜುಮನ್ ಇಸ್ಲಾಂ ಕಮಿಟಿ ವತಿಯಿಂದ ನೆರೆ ಸಂತ್ರಸ್ತರಿಗೆ 31 ಸಾವಿರ ರೂ. ದೇಣಿಗೆ ಸಂಗ್ರಹಿಸಲಾಯಿತು.
ಬಕ್ರೀದ್ ಹಬ್ಬದ ಅಂಗವಾಗಿ ಸಾಮೂಹಿಕ ಪ್ರಾರ್ಥನಾ ಸಮಯದಲ್ಲಿ ಎಲ್ಲಾ ಮುಸ್ಲಿಂ ಬಾಂಧವರು ನೆರೆ ಸಂತ್ರಸ್ತರಿಗೆ ಆ ಅಲ್ಲಾಹನು ಒಳ್ಳೆಯದನ್ನು ಮಾಡಲಿ ಎಂದು ಪ್ರಾರ್ಥಿಸಿದರು. ಆಗಮಿಸಿದ ಎಲ್ಲಾ ಬಾಂಧವರು ತಮ್ಮ ಕೈಲಾಗುವ ಸಹಾಯ ಮಾಡಬೇಕೆಂದು ಸಂಕಲ್ಪ ಮಾಡಿ 31 ಸಾವಿರ ರೂ. ಹಣವನ್ನು ಸಂಗ್ರಹಿಸಿದರು. ನೆರೆ ಸಂತ್ರಸ್ತರ ಪರಿಹಾರ ನಿಧಿ ಖಾತೆಗೆ ಜಮಾ ಮಾಡಿ ಅದರ ರಸೀದಿ ಮತ್ತು ಮನವಿ ಪತ್ರವನ್ನು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಶಾಸಕ ಅಮರೇಗೌಡ ಬಯ್ನಾಪೂರ ಸಮ್ಮುಖದಲ್ಲಿ ಜಿಲ್ಲಾಧಿಕಾರಿಗೆ ವಿತರಿಸಿದರು.
ಅಂಜುಮನ್ ಕಮೀಟಿ ಅಧ್ಯಕ್ಷ ಖಾದರಸಾಬ ತಹಶೀಲ್ದಾರ್ ಮಾತನಾಡಿ, ಬಕ್ರೀದ್ ಹಬ್ಬದ ಆಚರಣೆಯೊಂದಿಗೆ ನೊಂದವರಿಗೆ ಸಹಾಯ ಮಾಡುವ ಉದ್ದೇಶದಿಂದ ಪ್ರಾರ್ಥನಾ ಸಮಯದಲ್ಲಿ ನೆರೆ ಸಂತ್ರಸ್ತರಿಗಾಗಿ ಹಣ ಸಂಗ್ರಹಿಸಲಾಗಿದೆ. ಆ ಹಣವು ನೆರೆ ಸಂತ್ರಸ್ತರಿಗೆ ನೆರವಾಗಲಿ ಎಂದು ಜಿಲ್ಲಾಧಿಕಾರಿಗೆ ಬರೆದ ಮನವಿ ಪತ್ರ ಓದಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಪಿ.ಸುನಿಲಕುಮಾರ, ಅಪರ ಜಿಲ್ಲಾಧಿಕಾರಿ ಆಯಿಷಾ ಬೇಗಂ, ಅಂಜುಮನ್ ಇಸ್ಲಾಂ ಕಮೀಟಿ, ಹಜ್ ಕಮಿಟಿ ಮಾಜಿ ಸದಸ್ಯ ಮೈನುದ್ದೀನಸಾಬ ಖಾಜಿ, ವಕ್ ಬೋರ್ಡ್ ಮಾಜಿ ಸದಸ್ಯ ಗೌಸಮೋಹಿಯುದ್ದೀನಸಾಬ ವಂಟೆಳಿ, ಮೈನುದ್ದೀನಸಾಬ ಮಣಿಯಾರ, ಶಿವಶಂಕರಗೌಡ ಪಾಟೀಲ, ಸೋಮಶೇಖರ ವೈಜಾಪೂರ ಇದ್ದರು.