ಎಸ್ ಡಿಪಿಐ, ಆರ್ ಎಸ್ಎಸ್ ಎರಡೂ ಸಂಘಟನೆಗಳನ್ನು ನಿಷೇಧ ಮಾಡಲಿ: ಶಿವರಾಜ ತಂಗಡಗಿ
Team Udayavani, Aug 20, 2020, 3:00 PM IST
ಕೊಪ್ಪಳ: ಆರ್ ಎಸ್ಎಸ್ ಹಾಗೂ ಎಸ್ ಡಿಪಿಐ ಒಂದು ನಾಣ್ಯದ ಎರಡು ಮುಖಗಳು, ಈ ಎರಡೂ ಸಂಘಟನೆಗಳನ್ನು ಸರ್ಕಾರ ನಿಷೇಧ ಮಾಡಲಿ ಎಂದು ಮಾಜಿ ಸಚಿವ ಶಿವರಾಜ ತಂಗಡಗಿ ಅವರು ಒತ್ತಾಯಿಸಿದರು.
ಕೊಪ್ಪಳದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಬೆಂಗಳೂರಿನ ಕೆ.ಜಿ ಹಳ್ಳಿ ಹಾಗೂ ಡಿ.ಜೆ ಹಳ್ಳಿ ಗಲಭೆ ನೋಡಿದರೆ ನಿಜಕ್ಕೂ ಸರ್ಕಾರಕ್ಕೆ ನಾಚಿಕೆ ಬರಬೇಕು. ಆರ್ ಎಸ್ಎಸ್ ರಾಜ್ಯದಲ್ಲಿ ಎಷ್ಟು ಗಲಭೆ ಮಾಡಿಲ್ಲ. ಅವರ ಮೇಲೆ ಎಷ್ಟು ಕೇಸ್ ಆಗಿವೆ. ಬೆಂಗಳೂರು ಗಲಭೆಯಲ್ಲಿ ಯಾರೇ ತಪ್ಪು ಮಾಡಿದರೂ ಶಿಕ್ಷೆಯಾಗಲಿ ಎಂದು ಒತ್ತಾಯಿಸಿದರು.
ಬೆಂಗಳೂರು ಗಲಭೆಯಲ್ಲಿ ಗುಪ್ತಚರ ಇಲಾಖೆ ಏನು ಮಾಡುತ್ತಿತ್ತು. ಸರ್ಕಾರ ಏಲ್ಲಿ ಹೋಗಿತ್ತು? ಪೊಲೀಸ್ ಇಲಾಖೆ ಏನು ಮಾಡುತ್ತಿದೆದೆ. ಗೃಹ ಇಲಾಖೆ ಏನು ಮಾಡುತ್ತಿದೆ ಎಂದು ಪ್ರಶ್ನಿಸಿದರು.
ಈಗ ಬಿಜೆಪಿ ದಲಿತ ಎನ್ನುವ ಮಾತನ್ನಾಡುತ್ತಿದೆ. ಕಾಂಗ್ರೆಸ್ ಯಾವಾಗಲೂ ದಲಿತ ಪರವಾಗಿದೆ. ಗೋವಿಂದ ಕಾರಜೋಳ ಅವರು ಗಲಭೆಯು ಕಾಂಗ್ರೆಸ್ ಪಾಪದ ಫಲ ಎಂದ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ ಕಾರಜೋಳ ಆರ್ ಎಸ್ಎಸ್ ಗಲಾಟೆ ಬಗ್ಗೆ ಯಾಕೆ ಮಾತಾಡಲ್ಲ. ಮಾತನಾಡಿದರೆ ಅವರ ಖುರ್ಚಿ ಅಲುಗಾಡುತ್ತದೆ ಎಂದರು.