ದಸರಾ ಮಾದರಿ ಸರಳವಾಗಿ ಗವಿಸಿದ್ದೇಶ್ವರ ಜಾತ್ರೆ : ಅಜ್ಜನ ಜಾತ್ರೆ 3 ದಿನಕ್ಕೆ ಮಾತ್ರ ಸೀಮಿತ
-ಹೃದಯದಲ್ಲಿ ಗವಿಸಿದ್ದೇಶ್ವರನ ನೆನೆಯಿರಿ : ಗವಿಶ್ರೀ
Team Udayavani, Jan 14, 2021, 10:51 PM IST
ಕೊಪ್ಪಳ: ಕೋವಿಡ್ ಆರ್ಭಟದ ಮಧ್ಯೆ ಅಜ್ಜನ ಜಾತ್ರೆ ನಡೆಯುತ್ತದೆಯೋ ?ಇಲ್ಲವೋ ? ಎನ್ನುವ ಗೊಂದಲ್ಲಿದ್ದ ಭಕ್ತ ಸಮೂಹಕ್ಕೆ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾ ಸ್ವಾಮೀಜಿ ಅವರು ಅಜ್ಜನ ಜಾತ್ರೆಗೆ ಸರಳತೆಯ ಶ್ರೀಕಾರ ಹಾಕಿದ್ದಾರೆ. ಮೈಸೂರು ದಸರಾ, ಪುರಿ ಜಗನ್ನಾಥ ಮಾದರಿ ಸರ್ಕಾರದ ನಿಯಮಾವಳಿಗೆ ಒಳಪಟ್ಟು, ಸಂಪ್ರದಾಯ ಮುರಿಯದೆ, ಸರಳತೆಯಿಂದ ಗವಿಸಿದ್ದೇಶ್ವರ ಜಾತ್ರೆ ನಡೆಯಲಿದೆ ಎಂದು ಗವಿಮಠ ತಿಳಿಸಿದೆ.
ಜಾತ್ರೆಯಲ್ಲಿ ಏನು ಇರುತ್ತದೆ ? :
ಜ.26 ಕ್ಕೆ ಜಾತ್ರೆ ಸಂಪ್ರದಾಯ ಆರಂಭವಾಗುತ್ತದೆ. ಬಸವ ಪಟ, ಉಡಿ ತುಂಬುವ ಕಾರ್ಯಕ್ರಮ ಇರುತ್ತದೆ. ಜ.28 ಕ್ಕೆ ಹಲಗೇರಿಯಿಂದ ರಥೋತ್ಸವದ ಕಳಸ, ಜಡೇಗೌಡ್ರ ಮನೆಯಿಂದ ಪಲ್ಲಕ್ಕಿ ಬರುತ್ತದೆ. ಜ.೨೯ಕ್ಕೆ ಲಘು ರಥೋಸವ ಇರುತ್ತದೆ. ಜ.30ಕ್ಕೆ ರಥೋತ್ಸವ ನಡೆಯಲಿದೆ. ಶ್ರೀ ಸಿದ್ದೇಶ್ವರ ಮೂರ್ತಿ ಮೆರವಣಿಗೆ ಬಳಗಾನೂರು ಶ್ರೀಗಳ ದೀರ್ಘದಂಡ ನಮಸ್ಕಾರ ಇರುತ್ತದೆ. ಮಠಕ್ಕೆ ಭಕ್ತರ ಹರಕೆ ಅಥವಾ ಸಂಕಲ್ಪಗಳನ್ನು ಪೂರೈಸಿಸಬಹುದು. ಜ.30 ರಿಂದ ಮೂರು ದಿನಗಳ ಕಾಲ ದಾಸೋಹ ಇರುತ್ತದೆ. ದಾಸೋಹದಲ್ಲಿ ಕೇವಲ ದವಸ-ದಾನ್ಯ, ಕಾಯಿಪಲ್ಲೆಯನ್ನು ಮಾತ್ರ ಸ್ವೀಕರಿಲಾಗುವುದು. ಪ್ರತಿ ವರ್ಷದಂತೆ ಶ್ರೀ ಗವಿಸಿದ್ಧೇಶ್ವರ ಆಯುರ್ವೇದಿಕ್ ಆಸ್ಪತ್ರೆಯಲ್ಲಿ ರೆಡ್ಕ್ರಾಸ್ ಸಂಸ್ಥೆಯ ಸಹಯೋಗದಲ್ಲಿ ಜರುಗುವ ರಕ್ತದಾನ ಶಿಬಿರವನ್ನು ನಡೆಸಲಾಗುತ್ತದೆ. ಶ್ರೀ ಗವಿಸಿದ್ಧೇಶ್ವರ ಗದ್ದುಗೆ ದರ್ಶನಕ್ಕೆ ಅವಕಾಶವಿದೆ. ಸಾಮಾಜಿಕ ಅಂತರ ಕಾಪಾಡಿಕೊಂಡು ಭಕ್ತರು ದರ್ಶನ ಪಡೆಯಬಹುದು.
ಜಾತ್ರೆಯಲ್ಲಿ ಏನೂ ಇರುವುದಿಲ್ಲ ? :
ಪ್ರತಿವರ್ಷ ಜಾತ್ರೆಯ ಅಂಗವಾಗಿ ಸಾಮಾಜಿಕ ಕಳಕಳಿಯಡಿ ನಡೆಯುವ ವಿದ್ಯಾರ್ಥಿ ಜಾಥಾ ಇರುವುದಿಲ್ಲ. ಕೈಲಾಸ ಮಂಟಪ, ತೆಪ್ಪೋತ್ಸವ ಇರುವುದಿಲ್ಲ. ಜ.೩೦ ರಂದು ಜರುಗುವ ಮಹಾರಥೋತ್ಸವ ಪ್ರತಿ ವರ್ಷದಂತೆ ಲಕ್ಷಾಂತರ ಭಕ್ತ ಜನರ ಮಧ್ಯದಲ್ಲಿ ಜರುಗುವದಿಲ್ಲ. ಜಾತ್ರಾ ಮೈದಾನದಲ್ಲಿ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಿ, ಪುರಿ ಜಗನ್ನಾಥ ರಥೋತ್ಸವ, ಮೈಸೂರ ದಸರಾ ಜಂಬೂಸವಾರಿ ರೀತಿಯಲ್ಲಿ ಕೇವಲ ಸಾಂಪ್ರದಾಯಿಕ ರಥೋತ್ಸವ ಆಚರಣೆ. ಕೈಲಾಸ ಮಂಟಪದ ವೇದಿಕೆಯಲ್ಲಿನ ಧಾರ್ಮಿಕ ಗೋಷ್ಠಿ, ಭಕ್ತ ಹಿತ ಚಿಂತನಾ ಸಭೆ, ಅನುಭಾವಿಗಳ ಅಮೃತಗೋಷ್ಠಿ, ಸಂಗೀತ, ಸಾಹಿತ್ಯ, ಹಾಸ್ಯ, ಸಾಧಕರ ಸನ್ಮಾನ ಯಾವ ಕಾರ್ಯಕ್ರಮಗಳೂ ನಡೆಯುವುದಿಲ್ಲ. ಅವರ ಹಿಂದೆ ದೀರ್ಘದಂಡ ನಮಸ್ಕಾರಕ್ಕೆ ಅನುಮತಿಯಿಲ್ಲ. ಮದ್ದು ಸುಡುವ ಕಾರ್ಯಕ್ರಮ ಇರಲ್ಲ. ಭಕ್ತರು ಯಾರು ರೊಟ್ಟಿ ಹಾಗೂ ಸಿಹಿ ಪದಾರ್ಥ ತರಬಾರದು, ಅವುಗಳನ್ನು ಸ್ವೀಕರಿಸಲ್ಲ. ಜಾತ್ರೆಯಲ್ಲಿ ಅಂಗಡಿ, ಅಮ್ಯುಜ್ಮೆಂಟ್ ಪಾರ್ಕ, ಮಿಠಾಯಿ, ಹೋಟಲ್, ಸ್ಟೇಷನರಿ ಅಂಗಡಿ ಸೇರಿ ಆವರಣದಲ್ಲಿ ಜಾತ್ರಾ ಅಂಗಡಿ ಇರುವುದಿಲ್ಲ. ಪಾನಿಪುರಿ, ಗೋಬಿ, ಕಡ್ಲೆ, ಕಬ್ಬಿನಹಾಲು, ಐಸ್ಕ್ರೀಮ್, ಇತರೆ ತಿನಿಸಿನ ಮಾರಾಟದ ಅಂಗಡಿ ನಿಷೇಧಿಸಿದೆ. ಕೃಷಿ ವಸ್ತು ಪ್ರದರ್ಶನ, ಫಲಪುಷ್ಪ ಪ್ರದರ್ಶನ, ಕ್ರೀಡಾಕೂಟ, ನಾಟಕ, ವಿವಿಧ ಸಾಂಸ್ಕೃತಿಕ, ಮತ್ತು ಮನೋರಂಜನಾ ಕಾರ್ಯಕ್ರಮ ನಿಷೇಧಿಸಿದೆ. ಭಕ್ತರಿಗೆ ವಸತಿ ವ್ಯವಸ್ಥೆ ಇರುವುದಿಲ್ಲ. ರಥೋತ್ಸವಕ್ಕೆ ಬರುವ ಭಕ್ತರಿಗೆ ವಸತಿ ವ್ಯವಸ್ಥೆ ಕಲ್ಪಿಸಲ್ಲ. ಮೂರ್ತಿ, ಪಲ್ಲಕ್ಕಿ ಮೆರವಣಿಗೆಯಲ್ಲಿ ಕಲಾ ತಂಡದ ಮೆರವಣಿಗೆ ಇರುವುದಿಲ್ಲ.
ಅಜ್ಜನ ಜಾತ್ರೆಗೆ ಶ್ರೀಗಳ ಸಂದೇಶ..
ನಾಡಿನ ಭಕ್ತಗಣಕ್ಕೆ ಶ್ರೀ ಗವಿಸಿದ್ಧೇಶನ ಜಾತ್ರೆಯ ಬಗ್ಗೆ ಅತ್ಯಂತ ಕುತೂಹಲ. ಜಾತ್ರೆ ಹೇಗೆ ನಡೆಯುತ್ತದೆ ? ಅಜ್ಜವರ ನಿರ್ಣಯವೇನು ? ಜಾತ್ರೆ ನಡೆಯುವುದೋ ? ಇಲ್ಲವೋ? ಹೀಗೆ ಹತ್ತು ಹಲವು ಸಂಗತಿಗಳು. ಜಾತ್ರೆ ನಡೆಸುತ್ತೇನೆ ಎನ್ನಲು, ಜಾತ್ರೆ ನಡೆಸುವುದಿಲ್ಲವೆನ್ನಲು ನಾನಾರು ? ಒಂದೆಡೆ ದೈವಿಶಕ್ತಿ ಇನ್ನೊಂದೆಡೆ ಭಕ್ತರ ಭಕ್ತಿಯ ಶಕ್ತಿ. ಈ ಎರಡೂ ದಿವ್ಯ ಶಕ್ತಿಯ ಸಂಗಮವನ್ನು ನಾನು ಕೂಡಿಸುವೆನೆಂದಾಗಲಿ ಅಥವಾ ನಿಲ್ಲಿಸುವೆನೆಂದಾಗಲಿ ಹೇಳಿದರೆ ಅಹಂಕಾರದ ಮಾತಾದೀತು. ಬಸವಣ್ಣನವರು ಹೇಳುವಂತೆ “ಆನು ದೇವಾ ಹೊರಗಣವನು ಕೂಡಲ ಸಂಗಮದೇವಾ, ನಿಮ್ಮ ನಾಮವಿಡಿದ ಅನಾಮಿಕ ನಾನು”
ಇಂದು ದೈವೇಚ್ಛೇ ಭಕ್ತರ ನಿರೀಕ್ಷೆ ಇವರೆಡರ ಪರೀಕ್ಷೆಯ ಸಂಧಿಕಾಲ. ಜಾತ್ರೆಯನ್ನೂ ನಡೆಸಬೇಕು, ಸರ್ಕಾರದ ಆದೇಶವನ್ನೂ ಪಾಲಿಸಬೇಕು. ಕಾನೂನನ್ನು ಮೀರಿರಬಾರದು, ಸಂಪ್ರದಾಯವನ್ನು ಮುರಿದಿರಬಾರದು. ಪರಿಸರ ಸ್ನೇಹಿ ಜಾತ್ರೆಯ ಜೊತೆಗೆ, ಪರಿಸ್ಥಿತಿ ಸ್ನೇಹಿ ಜಾತ್ರೆಯನ್ನ ಮಾಡುವ ಮಧ್ಯಮ ಮಾರ್ಗ ಅನುಸರಿಸಬೇಕಾಗಿದೆ. ಸರ್ಕಾರವಾಗಲಿ, ಜಿಲ್ಲಾಡಳಿತವಾಗಲಿ ತೆಗೆದುಕೊಳ್ಳುವ ನಿರ್ಧಾರಗಳು, ನಮ್ಮ ಒಳಿತಿಗಾಗಿ ಎನ್ನುವ ಉನ್ನತ ಭಾವದೊಂದಿಗೆ ಈ ವರ್ಷದ ಜಾತ್ರೆ ಸರಳ ಮತ್ತು ವೈಶಿಷ್ಟö್ಯಪೂರ್ಣವಾಗಿ ಧಾರ್ಮಿಕ ವಿಧಿವಿಧಾನಗಳಿಗೆ ಮಾತ್ರ ಸೀಮಿತಗೊಳಿಸೋಣ.
ಇಷ್ಟು ವರ್ಷ ಮಠದ ಅಂಗಳದಲ್ಲಿ ಗವಿಸಿದ್ಧೇಶ್ವರನ ರಥ ಎಳೆಯುತ್ತಿತ್ತು. ಭಕ್ತರು ಅದನ್ನು ನೋಡಲು ಬರುತ್ತಿದ್ದರು. ಈ ವರ್ಷ ನಿಮ್ಮ ಹೃದಯಂಗಳದಲ್ಲಿ ಆತನ ದಿವ್ಯ ಸ್ಮರಣೆಯ ರಥ ಎಳೆಯಲಿ ಅದನ್ನು ನೋಡಲು ಗವಿಸಿದ್ಧೇಶ್ವರನೇ ನಿಮ್ಮ ಮನೆಗೆ ಬರುತ್ತಾನೆಂದು ನನ್ನ ಭಾವನೆ.-ಶ್ರೀ ಗವಿಸಿದ್ಧೇಶ್ವರ ಸ್ವಾಮೀಜಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gangavati: ಜೈ ಶ್ರೀರಾಮ್ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ
Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
ಗಂಗಾವತಿ: ನೇಮಕಾತಿ ಪರೀಕ್ಷೆಗೆ ವೆಬ್ ಕಾಸ್ಟಿಂಗ್ ಜಾರಿಯಾಗಲಿ
Dr.G. Parameshwara ಅವರ ಜಾತಿ ನಿಂದನೆ; ಬೀದರ್ ವ್ಯಕ್ತಿ ವಿರುದ್ಧ ಕೇಸ್
MUST WATCH
ಹೊಸ ಸೇರ್ಪಡೆ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ