ತಪ್ಪಲಿಲ್ಲ ಹೂಳಿನ ಗೋಳು; ಭರವಸೆ ಹುಸಿ
•ಜಲಾಶಯ ಹೆಸರೇಳಿ ಗೆದ್ದವರು ಈಗ ಮೌನ•ಸಮನಾಂತರ ಡ್ಯಾಂ ನಿರ್ಮಾಣಕ್ಕೆ ನೀಲನಕ್ಷೆ ಸಿದ್ಧ
Team Udayavani, Jul 7, 2019, 10:44 AM IST
ಗಂಗಾವತಿ: ರೈತರ ಜೀವನಾಡಿ ತುಂಗಭದ್ರಾ ಜಲಾಶಯ ಹೂಳಿನ ಸಮಸ್ಯೆಯಿಂದ ಅಚ್ಚುಕಟ್ಟು ಪ್ರದೇಶದ ರೈತರು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ. 37 ಟಿಎಂಸಿ ಅಡಿ ಹೂಳಿರುವುದರಿಂದ ನೀರು ವ್ಯರ್ಥವಾಗಿ ಹರಿಯುತ್ತಿದೆ.
ಹೂಳಿನ ಹೆಸರಲ್ಲೇ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳು 20 ವರ್ಷಗಳಿಂದ ರಾಜಕೀಯ ಮಾಡುತ್ತ ಅಧಿಕಾರ ಅನುಭವಿಸಿವೆ. ಆದರೆ ರೈತರ ನೆರವಿಗೆ ಮಾತ್ರ ಯಾವ ಪಕ್ಷಗಳು ಬಂದಿಲ್ಲ. ಕಳೆದ ಲೋಕಸಭಾ ಚುನಾವಣೆಯ ಪ್ರಚಾರಕ್ಕೆ ಗಂಗಾವತಿಗೆ ಆಗಮಿಸಿದ್ದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ತುಂಗಭದ್ರಾ ಜಲಾಶಯದ ಸಮಸ್ಯೆ ಇತ್ಯರ್ಥಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಭಾಷಣದಲ್ಲಿ ರೈತರಿಗೆ ಭರವಸೆ ನೀಡಿದ್ದರು. ಶುಕ್ರವಾರ ಮಂಡನೆಯಾದ ಕೇಂದ್ರ ಸರಕಾರದ ಬಜೆಟ್ನಲ್ಲಿ ತುಂಗಭದ್ರಾ ಜಲಾಶಯ ಹೂಳು ಮತ್ತು ನವಲಿ ಹತ್ತಿರ ನಿರ್ಮಾಣ ಉದ್ದೇಶದ ಸಮನಾಂತರ ಜಲಾಶಯ ಕುರಿತು ಯಾವುದೇ ಪ್ರಸ್ತಾಪವಿಲ್ಲ.
ಕಳೆದ ನಾಲ್ಕೈದು ವರ್ಷಗಳಿಂದ ಜಲಾನಯನ ಪ್ರದೇಶದಲ್ಲಿ ಮಳೆ ಕೊರತೆಯಿಂದ ಜಲಾಶಯಕ್ಕೆ ನೀರು ಹರಿದು ಬರುವುದು ಕಡಿಮೆಯಾಗಿದೆ. ಕಳೆದ ವರ್ಷ ಮಾತ್ರ ಉತ್ತಮ ಮಳೆಯಾಗಿದ್ದು ಸುಮಾರು 250 ಟಿಎಂಸಿ ಅಡಿ ನೀರು ನದಿ ಮೂಲಕ ಸಮುದ್ರ ಸೇರಿದೆ. ಜಲಾಶಯ ಹೂಳು ತೆಗೆದಿದ್ದರೆ ಅಷ್ಟೂ ನೀರನ್ನು ಜಲಾಶಯದಲ್ಲಿ ಸಂಗ್ರಹಿಸಬಹುದಾಗಿತ್ತು. ಸಮನಾಂತರ ಜಲಾಶಯ ನಿರ್ಮಿಸಿದ್ದರೂ ನೀರನ್ನು ಸಂಗ್ರಹಿಸಿ ರೈತರಿಗೆ ಸಹಾಯ ಮಾಡಬಹುದಿತ್ತು. ತುಂಗಭದ್ರಾ ಜಲಾಶಯ ಮತ್ತು ನದಿಯಿಂದ ಮೇಲ್ಮಟ್ಟದ ಕೆರೆಗಳ ಭರ್ತಿ ಮಾಡುವ ಯೋಜನೆಯನ್ನು ಸರಕಾರ ಘೋಷಣೆ ಮಾಡಿದ್ದು ಮಳೆಗಾಲದಲ್ಲಿ ಜಲಾಶಯಕ್ಕೆ ಬರುವ ನೀರನ್ನು ಸಮನಾಂತರ ಜಲಾಶಯಗಳ ನಿರ್ಮಿಸಿ ಸಂಗ್ರಹಿಸುವ ಅಗತ್ಯವಿದೆ.
ತುಂಗಭದ್ರಾ ಜಲಾಶಯದ ಹಿನ್ನೀರು ಸುಮಾರು 84 ಸಾವಿರ ಎಕರೆ ಪ್ರದೇಶದಲ್ಲಿ ನಿಲುಗಡೆಯಾಗುತ್ತದೆ. ಅವೈಜ್ಞಾನಿಕ ಗಣಿಗಾರಿಕೆ ಮತ್ತು ಜಲಾಶಯದ ಮೇಲ್ಮಟ್ಟದಲ್ಲಿ ಅಕ್ರಮ ಮರಳು ದಂಧೆ ಪರಿಣಾಮ ಜಲಾಶಯದಲ್ಲಿ ಹೂಳು ತುಂಬಿದೆ. ಈಗಾಗಲೇ ಸರಕಾರ ಹೂಳು ತೆಗೆಸುವ ವಿಚಾರದಲ್ಲಿ ನೇಮಿಸಿದ್ದ ತಜ್ಞರ ಸಮಿತಿ ಹೂಳು ತೆಗೆಯುವುದು ಅವೈಜ್ಞಾನಿಕ, ಜಲಾಶಯ ಎತ್ತರಿಸಬೇಕು. ಮಳೆಗಾಲದಲ್ಲಿ ನೀರು ಸಂಗ್ರಹಿಸಲು ಜಲಾಶಯದ ಕೆಳಭಾಗದಲ್ಲಿ ಸಮನಾಂತರ ಜಲಾಶಯ ನಿರ್ಮಿಸುವಂತೆ ಶಿಫಾರಸು ಮಾಡಿದೆ.
ಹಿಂದಿನ ರಾಜ್ಯ ಸರಕಾರ ಕನಕಗಿರಿ ತಾಲೂಕಿನ ನವಲಿ ಹತ್ತಿರ ಸಮನಾಂತರ ಜಲಾಶಯ ನಿರ್ಮಿಸಲು ನೀಲನಕ್ಷೆ ಸಿದ್ಧಪಡಿಸಿದೆ. ಆಗಿನ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ನೇತೃತ್ವದಲ್ಲಿ ಹೈದ್ರಾಬಾದ್ಗೆ ತೆರಳಿ ತೆಲಂಗಾಣ ಮತ್ತು ಆಂಧ್ರಪ್ರದೇಶ ಸರಕಾರಗಳ ಜತೆ ಮಾತುಕತೆ ನಡೆಸಿ ಒಪ್ಪಿಗೆ ಪಡೆಯಲಾಗಿತ್ತು. ಕೇಂದ್ರ ಸರಕಾರ ಒಪ್ಪಿಗೆ ಅನುದಾನ ಅಗತ್ಯವಾಗಿದ್ದು ರಾಯಚೂರು-ಕೊಪ್ಪಳ ಸಂಸದರು ಈ ನಿಟ್ಟಿನಲ್ಲಿ ಕಾರ್ಯ ಮಾಡಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ