ಕುಷ್ಟಗಿ: ಹಲವು ವರ್ಷಗಳ ಬೇವು ಹಾಗೂ ಆಲದ ಮರ ಕಡಿತ
ಅರಣ್ಯ ಇಲಾಖೆಯ ಅನುಮತಿ ಪಡೆಯದೆ ಮರ ಕಡಿತ
Team Udayavani, Sep 28, 2022, 2:26 PM IST
ಕುಷ್ಟಗಿ: ಯರಗೇರಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಹಲವು ವರ್ಷದ ಬೇವು ಹಾಗೂ ಆಲದ ಮರಗಳನ್ನು ನೆಲಕ್ಕುರುಳಿಸಿದ ಪ್ರಕರಣ ಬೆಳಕಿಗೆ ಬಂದಿದೆ.
ಶಾಲಾ ಆವರಣದಲ್ಲಿ ಮಕ್ಕಳಿಗೆ ನೆರಳಾಗಿದ್ದ ಒಂದು ಆಲದ ಮರ ಹಾಗೂ ನಾಲ್ಕು ಬೇವಿನ ಮರಗಳನ್ನು ಕಡಿಯಲು ಅರಣ್ಯ ಇಲಾಖೆಯ ಅನುಮತಿ ಪಡೆಯದೇ ಮರಗಳ ಮಾರಣ ಹೋಮ ನಡೆದಿದೆ.
ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹಾಗೂ ಶಾಲೆಯ ಮುಖ್ಯ ಶಿಕ್ಷಕ ಸೇರಿ ಈ ಮರಗಳಿಗೆ ಕೊಡಲಿ ಏಟು ನೀಡಿದ್ದಾರೆ. ಅರಣ್ಯ ಇಲಾಖೆಯವರು ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಕರವೇ ಅಧ್ಯಕ್ಷ ವಿಜಯಕುಮಾರ ಮಾಳಶೆಟ್ಟಿ, ಅಶೋಕ ಉಪ್ಪಾರ, ಸಂತೋಷ ಗುತ್ತೇದಾರ, ವಕೀಲರಾದ ರವಿಕುಮಾರ ಈಡಿಗ ಒತ್ತಾಯಿಸಿದ್ದಾರೆ.
ಯರಗೇರಾ ಸರ್ಕಾರಿ ಶಾಲಾ ಆವರಣದಲ್ಲಿರುವ ಗಿಡಗಳ ತೆರವಿಗೆ ಅರಣ್ಯ ಇಲಾಖೆ ಗಮನಕ್ಕೆ ತರದೇ ನಾಶ ಮಾಡಿರುವುದು ಅಕ್ಷಮ್ಯ. ಸಾರ್ವಜನಿಕರ ದೂರಿನ ಮೇರೆಗೆ ಶಾಲೆಯ ಮುಖ್ಯ ಶಿಕ್ಷಕ ಹೇಮಲಪ್ಪ ನಾಯಕ ವಿರುದ್ದ ಎಫ್ಐಅರ್ ದಾಖಲಾಗಿದೆ ಎಂದು ಹನುಮಸಾಗರ ಉಪವಲಯ ಅರಣ್ಯಾಧಿಕಾರಿ ಹನಮಂತಪ್ಪ ಮಾಹಿತಿ ನೀಡಿದ್ದಾರೆ.